40 ಲಕ್ಷ ಮೌಲ್ಯದ ಮೆಣಸಿನಕಾಯಿ ಬೆಳೆ ಮಣ್ಣು ಪಾಲು

Public TV
1 Min Read

ಮಂಡ್ಯ: ದೇಶವ್ಯಾಪಿ ಲಾಕ್ ಡೌನ್ ಹಿನ್ನೆಲೆ ರೈತರು ಬೆಳೆದ ಬೆಳೆಯನ್ನು ಕೊಳ್ಳುವವರೇ ಇಲ್ಲದಂತಾಗಿದ್ದು, ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಬೆಳೆ ಮಣ್ಣು ಪಾಲಾಗುತ್ತಿದೆ. ಮಂಡ್ಯದ ರೈತ 40 ಲಕ್ಷ ರೂ.ವೆಚ್ಚ ಮಾಡಿ ಬೆಳೆದಿದ್ದ ದಪ್ಪ ಮೆಣಸಿನಕಾಯಿ ಬೆಳೆ ಕಟಾವಿಗೆ ಬಂದರೂ ಕೊಳ್ಳುವವರೇ ಇಲ್ಲದಂತಾಗಿದೆ.

ಜಿಲ್ಲೆಯ ಮದ್ದೂರು ತಾಲೂಕಿನ ಬನ್ನಹಳ್ಳಿ ಗ್ರಾಮದ ರೈತ ಶಿವಲಿಂಗೇಗೌಡರು 40 ಲಕ್ಷ ವೆಚ್ಚದಲ್ಲಿ ಪಾಲಿಹೌಸ್ ನಿರ್ಮಾಣ ಮಾಡಿ ಹಳದಿ, ಕೆಂಪು ಬಣ್ಣದ ದಪ್ಪ ಮೆಣಸಿನಕಾಯಿ ಬೆಳೆದಿದ್ದರು. ಲಕ್ಷ ಲಕ್ಷ ಖರ್ಚು ಮಾಡಿ ಬೆಳೆದ ದಪ್ಪ ಮೆಣಸಿನಕಾಯಿ ಬೆಳೆಯನ್ನು ಕೊಳ್ಳುವವರೇ ಇಲ್ಲದಂತಾಗಿದೆ. ಹೀಗಾಗಿ ಲಕ್ಷಾಂತರ ರೂಪಾಯಿ ನಷ್ಟವಾಗುವ ಭೀತಿಯಲ್ಲಿ ಶಿವಲಿಂಗೇಗೌಡರು ಇದ್ದಾರೆ. ಮೆಣಸಿನಕಾಯಿ ಕಟಾವಿಗೆ ಬಂದಿದ್ದು, ಗಿಡದಲ್ಲೇ ಕೊಳೆಯುತ್ತಿದೆ.

ರೇಷ್ಮೆ ಬೇಸಾಯ ಬಿಟ್ಟು ತೋಟಗಾರಿಕೆ ಬೆಳೆಯತ್ತ ಮುಖಮಾಡಿದ್ದ ರೈತ ಶಿವಲಿಂಗೇಗೌಡರಿಗೆ ಮೊದಲ ಪ್ರಯತ್ನದಲ್ಲೇ ದೊಡ್ಡ ಹೊಡೆತ ಬಿದ್ದಿದೆ. ಕಟಾವಿಗೆ ಬರುತ್ತಿದ್ದಂತೆ ದೇಶವ್ಯಾಪಿ ಲಾಕ್ ಡೌನ್ ಆಗಿದ್ದು, ಕೊಳ್ಳುವರಿಲ್ಲದ್ದಕ್ಕೆ ರೈತ ಮೆಣಸಿನಕಾಯಿಯನ್ನು ಕಟಾವು ಮಾಡಿಲ್ಲ. ಒಂದೆಡೆ ಸರ್ಕಾರವೇ ರೈತರ ತರಕಾರಿ, ಹಣ್ಣುಗಳನ್ನು ಖರೀದಿಸಲಿದೆ. ಹಾಪ್‍ಕಾಮ್ಸ್ ಮೂಲಕ ಖರೀದಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದೆ. ಆದರೆ ಯಾರೊಬ್ಬರೂ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ.

ಸರ್ಕಾರ ಹಾಪ್ ಕಾಮ್ಸ್ ಮೂಲಕ ತರಕಾರಿ ಖರೀದಿಸುವ ಭರವಸೆ ನೀಡಿದ್ದಕ್ಕೆ ಶಿವಲಿಂಗೇಗೌಡರು ಅಧಿಕಾರಿಗಳನ್ನು ಭೇಟಿ ಮಾಡಿ ಮೆಣಿಸಿನಕಾಯಿ ಕೊಳ್ಳುವಂತೆ ಮನವಿ ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.

Share This Article
Leave a Comment

Leave a Reply

Your email address will not be published. Required fields are marked *