ಗೋ ಶಾಲೆಗೂ ತಟ್ಟಿದ ಕೊರೊನಾ ಬಿಸಿ- ಕೃಷ್ಣಮಠದ ದನಗಳು ಹಟ್ಟಿಯೊಳಗೆ ಲಾಕ್!

Public TV
2 Min Read

ಉಡುಪಿ: ಲಾಕ್‍ಡೌನ್ ಎಫೆಕ್ಟ್ ಜನಗಳಿಗೆ ಮಾತ್ರ ಅಲ್ಲ ಮೂಕ ಪ್ರಾಣಿಗಳ ಮೇಲೂ ತಟ್ಟಿದೆ. ಅಗತ್ಯ ವಸ್ತುಗಳನ್ನು ತರಲು ಜನಗಳನ್ನು ಕೆಲಹೊತ್ತು ಹೊರಗೆ ಕಳುಹಿಸಲಾಗುತ್ತಿದೆ. ಆದರೆ ಕೃಷ್ಣ ಮಠದ ಗೋವುಗಳಿಗೆ ಕಳೆದ ಹದಿನಾಲ್ಕು ದಿನಗಳಿಂದ ದಿಗ್ಬಂಧನ ಹಾಕಲಾಗಿದೆ.

ಉಡುಪಿ ಕೃಷ್ಣ ಮಠದ ಗೋಶಾಲೆಯ ಗೋವುಗಳನ್ನು ಹಟ್ಟಿಯಿಂದ ಹೊರಬಿಟ್ಟು ಹದಿನಾಲ್ಕು ದಿನಗ ಕಳೆದಿದೆ. ಬೆಳಗ್ಗೆ ಸ್ನಾನ ಮುಗಿಸಿ ಒಂದು ರೌಂಡ್ ವಾಕಿಂಗ್ ಮಾಡಿ ಮೇವು ಮೇಯುತ್ತಿದ್ದ ದನಗಳು ಕೊಟ್ಟಿಗೆಯಲ್ಲೇ ಒಣ ಹುಲ್ಲು ಹಿಂಡಿ ತಿಂದು ವ್ಯಥೆಪಡ್ತಾ ಇವೆ. ಕೊರೊನಾ ವೈರಸ್ ತಡೆಗಟ್ಟಲು ಮನೆಯಲ್ಲೇ ಇರಿ ಎಂದು ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಪ್ರಾಣಿಗಳಿಗೆ ಸಮಸ್ಯೆಯಾಗಬಾರದು ಎಂದು ಮಠ ಕೊಟ್ಟಿಗೆ ಕ್ವಾರಂಟೈನ್ ನಿರ್ಧಾರ ತೆಗೆದುಕೊಂಡಿದೆ.

ಉಡುಪಿ ಶ್ರೀಕೃಷ್ಣ ಮಠದಲ್ಲಿ ಅದಮಾರು ಮಠದ ಪರ್ಯಾಯ ನಡೆಯುತ್ತಿದೆ. ಪರ್ಯಾಯ ಈಶಪ್ರಿಯತೀರ್ಥ ಸ್ವಾಮೀಜಿ ಸುಮಾರು ಎಂಬತ್ತು ಹಸುಗಳನ್ನು ಮಠದಲ್ಲಿ ಪಾಲನೆ ಪೋಷಣೆ ಮಾಡುತ್ತಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್‍ನ ಹಾವಳಿ ಶುರುವಾದ ಕೂಡಲೇ ಮಠದ ಸಿಬ್ಬಂದಿಯಲ್ಲಿ ಆತಂಕ ಶುರುವಾಗಿದೆ. ಹಸುಗಳನ್ನು ಮೇವಿಗೆ ಬಿಟ್ಟರೆ ವೈರಸ್ ಬಾಧಿಸಬಹುದು. ಮೂಕ ಪ್ರಾಣಿಗಳಿಗೆ ಕಷ್ಟವಾಗಬಹುದು ಎಂಬ ಉದ್ದೇಶದಿಂದ ಮಠದ ಒಳಗೆ ಗೋಶಾಲೆಯಲ್ಲೇ ಕಟ್ಟಿಹಾಕಲು ನಿರ್ಧಾರ ಮಾಡಿದ್ದಾರೆ.

ಪ್ರತಿದಿನ ಬೆಳಗ್ಗೆ ಏಳು ಮೂವತ್ತರ ಸುಮಾರಿಗೆ ಬಯಲಿಗೆ ಬಿಡುತ್ತಿದ್ದೆವು. ಹನ್ನೆರಡು ಗಂಟೆಗೆ ಹಸುಗಳು ವಾಪಸ್ ಗೋಶಾಲೆಗೆ ಬರುತ್ತಿತ್ತು. ಇದೀಗ ದಿನಪೂರ್ತಿ ಹಟ್ಟಿಯ ಒಳಗೆ ಇರುವುದರಿಂದ ಅವುಗಳಿಗೆ ಬೇಸರವಾಗಿರಬೇಕು. ಈ ಸಮಸ್ಯೆ ಬೇಗ ಪರಿಹಾರವಾದರೆ ಹಸುಗಳನ್ನು ಬಯಲಿಗೆ ಬಿಡಬಹುದಿತ್ತು ಎಂದು ಗೋಶಾಲೆ ಸಿಬ್ಬಂದಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತ ಮಾಹಿತಿ ನೀಡಿದರು.

ಉಡುಪಿ ಶ್ರೀಕೃಷ್ಣ ಮಠ ಮತ್ತು ಪರ್ಯಾಯ ಅದಮಾರು ಮಠದ ವ್ಯವಸ್ಥಾಪಕ ಗೋವಿಂದರಾಜ್ ಮಾತನಾಡಿ, ಹಸುಗಳು ಬಯಲಿಗೆ ಹೋದರೆ ಅಲ್ಲಿ ಆಹಾರ ಅವುಗಳಿಗೆ ಸಿಗುತ್ತಿರಲಿಲ್ಲ. ಪರ್ಯಾಯ ಅದಮಾರು ಮಠ ಹಸುಗಳಿಗೆ ಪೌಷ್ಟಿಕಾಂಶದ ಆಹಾರಗಳನ್ನು ಕೊಡುತ್ತಿದೆ. ದಿನಕ್ಕೆ ಎಂಟು ಹತ್ತು ಹಸುಗಳನ್ನು ಮಠದ ಒಳಗೆ ಬಿಡುವ ವ್ಯವಸ್ಥೆಯನ್ನು ಮಾಡಲಾಗುವುದು. ಪರ್ಯಾಯ ಸ್ವಾಮೀಜಿಗಳು ಮಠದ ಸಂಪೂರ್ಣ ಒಳಗೆ ಹಸುಗಳನ್ನು ಬಿಡುವ ಬಗ್ಗೆ ಆದೇಶ ಹೊರಡಿಸಿದ್ದಾರೆ. ಶಿಫ್ಟ್ ಆಧಾರದಲ್ಲಿ ಹಸುಗಳಿಗೆ ವಾಕಿಂಗ್ ವ್ಯವಸ್ಥೆ ಮಾಡುತ್ತೇವೆ ಎಂದರು.

ಕೃಷ್ಣಮಠದ ಗೋಶಾಲೆಯಲ್ಲಿ 80 ಹಸುಗಳಿವೆ. ಮೂರು ಹೊತ್ತು ಒಣ ಮೇವು, ಹಿಂಡಿ, ಬೂಸಾ ಕೊಡಲಾಗುತ್ತಿದೆ. ಕರುಗಳನ್ನು ಗೋಶಾಲೆಯ ಒಳಗಡೆ ಅಡ್ಡಾಡಲು ವ್ಯವಸ್ಥೆ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *