ಸಮೋಸಾ ಬೇಕೆಂದು ಹಠ ಮಾಡಿದವನಿಗೆ ಚರಂಡಿ ಸ್ಚಚ್ಛ ಮಾಡೋ ಶಿಕ್ಷೆ

Public TV
1 Min Read

– ಸಮೋಸಾಕ್ಕಾಗಿ 4 ಬಾರಿ ಹೆಲ್ಪ್‌ಲೈನ್‌ಗೆ ಕರೆ

ಲಕ್ನೋ: ಇಡೀ ದೇಶವೇ ಲಾಕ್‍ಡೌನ್ ಮೂಲಕ ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಉತ್ತರ ಪ್ರದೇಶ ಸರ್ಕಾರ ಔಷಧಿಗಳು ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆಗೆ ತುರ್ತು ಸಹಾಯವಾಣಿ ಸ್ಥಾಪಿಸಿದೆ. ಆದರೆ ವ್ಯಕ್ತಿಯೊಬ್ಬ ಕೋವಿಡ್-19 ಸಹಾಯವಾಣಿಗೆ ಕರೆ ಮಾಡಿ ಸಮೋಸಾ ಕೇಳುವ ಮೂಲಕ ಅಪಹಾಸ್ಯ ಮಾಡಿದ್ದಾನೆ.

ರಾಂಪುರ ಜಿಲ್ಲೆಯ ವ್ಯಕ್ತಿಯೊಬ್ಬ ಕೋವಿಡ್-19 ಹೆಲ್ಪ್‍ಲೈನ್‍ಗೆ ಕರೆ ಮಾಡಿ ಸಮೋಸಾ ಬೇಕೆಂದು ಕೇಳಿದ್ದಾನೆ. ಅಧಿಕಾರಿಗಳು ಎಚ್ಚರಿಕೆ ಕೊಟ್ಟು ಸುಮ್ಮನಾಗಿದ್ದಾರೆ. ಆದರೆ ಆತ ಸತತ ನಾಲ್ಕು ಬಾರಿ ಈ ನಂಬರ್‌ಗೆ ಫೋನ್ ಮಾಡಿ ತನಗೆ ತುರ್ತಾಗಿ ಸಮೋಸಾ ತಂದುಕೊಡಬೇಕು ಎಂದು ಹಠ ಮಾಡಿದ್ದಾನೆ. ಕೊನೆಗೆ ಅಧಿಕಾರಿಗಳು ಅವನಿಗೆ ಸಮೋಸಾ ಕೊಡಲು ನಿರ್ಧರಿಸಿದ್ದರು.

ಈ ಬಗ್ಗೆ ರಾಂಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಂಜನೇಯ ಕುಮಾರ್ ಸಿಂಗ್ ಅವರು ಟ್ವಿಟ್ಟರಿನಲ್ಲಿ ತಿಳಿಸಿದ್ದಾರೆ. “ವ್ಯಕ್ತಿಯೊಬ್ಬ ಸಹಾಯವಾಣಿಗೆ ಫೋನ್ ಮಾಡಿ ಸಮೋಸಾ ಕೇಳಿದ್ದನು. ನಾವು ಆ ವ್ಯಕ್ತಿಗೆ ಎಚ್ಚರಿಕೆ ಕೂಡ ನೀಡಿದ್ದೆವು. ಆದರೆ ಆತ ಪದೇ ಪದೇ ಫೋನ್ ಮಾಡಿ ಸಮೋಸಾ ಬೇಕೆಂದು ಹಠ ಮಾಡಿದ್ದನು. ಕೊನೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಪೊಲೀಸರ ಜೊತೆ ಆತನಿಗೆ ಸಮೋಸಾ ತೆಗೆದುಕೊಂಡು ಹೋಗಿದ್ದಾರೆ. ನಂತರ ಆತನಿಗೆ ಚರಂಡಿ ಸ್ವಚ್ಛಗೊಳಿಸುವ ಶಿಕ್ಷೆ ನೀಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ಸಮೋಸಾದ ಜೊತೆ ಪೊಲೀಸರನ್ನು ಕಂಡು ವ್ಯಕ್ತಿ ಕ್ಷಮೆ ಕೇಳಲು ಮುಂದಾಗಿದ್ದಾನೆ. ಆದರೆ ಸಹಾಯವಾಣಿಗೆ ಫೋನ್ ಮಾಡಿ ತೊಂದರೆ ಕೊಟ್ಟಿದ್ದಕ್ಕೆ, ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಕೆಲಸವನ್ನೆಲ್ಲಾ ಬಿಟ್ಟು ಈತನಿಗೆ ಸಮೋಸಾ ತಂದು ಕೊಟ್ಟಿದ್ದಕ್ಕೆ ಕೋಪದಿಂದ ಆತನಿಗೆ ಚರಂಡಿ ಸ್ವಚ್ಛ ಮಾಡುವ ಶಿಕ್ಷೆ ನೀಡಿದ್ದನು. ಚರಂಡಿ ಸ್ವಚ್ಛಗೊಳಿಸಿ ಬಳಿಕ ಅಧಿಕಾರಿಗಳ ಕ್ಷಮೆ ಕೇಳಿದ್ದಾನೆ ಎಂದು ಆಂಜನೇಯ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಸಿಂಗ್ ಅವರು ವ್ಯಕ್ತಿ ಚರಂಡಿ ಸ್ಚಚ್ಛ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದೀಗ ಆ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಧಿಕಾರಿಗಳ ಕ್ರಮಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *