ಶಿವಮೊಗ್ಗ: ಮನೆಯಲ್ಲಿ ಸ್ವಯಂ ಬಂಧನ (ಹೋಂ ಕ್ವಾರೆಂಟೈನ್) ಇರಬೇಕೆಂಬ ಆದೇಶವನ್ನು ಉಲ್ಲಂಘಿಸಿದ್ದ ಇಬ್ಬರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ ಶಾಂತರಾಜು ತಿಳಿಸಿದ್ದಾರೆ.
ಮಾರ್ಚ್ 12ರಂದು ಅಬುದಾಬಿಯಿಂದ ಸ್ವಗ್ರಾಮ ತೀರ್ಥಹಳ್ಳಿ ತಾಲೂಕಿನ ಮಾಳೂರಿಗೆ ಹಿಂದಿರುಗಿ ಬಂದಿದ್ದ ಮಹಮ್ಮದ್ ಸುಯಬ್ ಖಾನ್ ಬಿನ್ ಮಸ್ತಾನ್ ಖಾನ್(30) ಹಾಗೂ ಮಹಮ್ಮದ್ ಹುಸೇನ್ ಖಾನ್ ಬಿನ್ ಮಸ್ತಾನ್ ಖಾನ್(28) ಇವರು ಆದೇಶವನ್ನು ಉಲ್ಲಂಘಿಸಿ, ಮನೆಯಿಂದ ಹೊರಬಂದು ಸುತ್ತಾಡಿರುವುದು ಮತ್ತು ಕ್ರಿಕೆಟ್ ಆಡಿರುವುದು ಕಂಡು ಬಂದಿದೆ.
ವೈರಾಣು ಬಾಧಿತ ದೇಶದಿಂದ ಬಂದಿರುವವರೆಂದು ತಿಳಿದಿದ್ದರೂ ಸಾರ್ವಜನಿಕ ಪ್ರದೇಶದಲ್ಲಿ ಓಡಾಡಿ ಸಾರ್ವಜನಿಕರೊಂದಿಗೆ ಬೆರೆಯಬಾರದೆಂಬ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ. ಅಲ್ಲದೆ ಸ್ವಯಂ ಗೃಹಬಂಧನದಿಂದ ಹೊರಗೆ ಬಿಡಬಾರದೆಂದು ತಿಳಿದಿದ್ದರೂ ಇವರು ಹೊರಗೆ ಹೋಗಲು ಅವಕಾಶ ನೀಡಿದ ಪೋಷಕರ ವಿರುದ್ಧ ಮಾಳೂರು ಪೊಲೀಸ್ ಠಾಣೆ ಕಲಂ 188, 269, 270, 271 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜ್ ತಿಳಿಸಿದ್ದಾರೆ.