ಎರಡು ಇಲಾಖೆ ನಡುವೆ ತಾಳ-ಮೇಳ ಯಾವುದೂ ಸರಿ ಇಲ್ಲ

Public TV
1 Min Read

ಬೆಂಗಳೂರು: ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಎರಡರ ನಡುವೆಯೂ ತಾಳಮೇಳ ಯಾವುದೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೊರೊನಾ ಭೀತಿ ಆರಂಭವಾದಾಗಿನಿಂದಲೂ ಪದೇ ಪದೇ ಎರಡೂ ಇಲಾಖೆಯ ಸಚಿವರು ವಿಭಿನ್ನ ಹೇಳಿಕೆ ಕೊಟ್ಟು ಗೊಂದಲ ಮೂಡಿಸುತ್ತಿದ್ದಾರೆ. ಇಂದು ಕೂಡ ಅದೇ ಮುಂದುವರಿದಿದೆ.

ಗೌರಿಬಿದನೂರಿನಲ್ಲಿ 35 ವರ್ಷದ ವ್ಯಕ್ತಿಗೆ ಸೋಂಕು ಧೃಢಪಟ್ಟಿದೆ ಎಂದು ಇಂದು ಬೆಳಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ. ಆದರೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಗೌರಿಬಿದನೂರಿನಲ್ಲಿ ಇಬ್ಬರು ವ್ಯಕ್ತಿಗಳಿಗೆ ಸೋಂಕಿನ ಲಕ್ಷಣಗಳಿವೆ. ಇನ್ನೂ ಸೋಂಕು ದೃಢಪಟ್ಟಿಲ್ಲ ಎನ್ನುವ ಮೂಲಕ ಆರೋಗ್ಯ ಸಚಿವರ ಹೇಳಿಕೆಯನ್ನೇ ನಿರಾಕರಿಸಿದ್ದಾರೆ.

ಆರೋಗ್ಯ ಸಚಿವರೇ ಸ್ವತಃ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಟ್ವೀಟ್ ಮಾಡಿದರೂ ಬೆಂಗಳೂರಿನಲ್ಲಿ ಮಾತನಾಡಿದ ಸುಧಾಕರ್, ಗೌರಿಬಿದನೂರಿನ ವ್ಯಕ್ತಿಯಲ್ಲಿ ಇನ್ನೂ ಸೋಂಕು ದೃಢಪಟ್ಟಿಲ್ಲ. 6 ಗಂಟೆಗೆ ಕೊರೊನಾ ಬುಲೆಟಿನ್ ಬಿಡುಗಡೆ ಆಗುತ್ತೆ. ಆಗ ಮತ್ತೆ ಯಾರಿಗಾದ್ರೂ ಸೋಂಕು ದೃಢಪಟ್ಟಿದ್ರೆ ಅದ್ರಲ್ಲಿ ಮಾಹಿತಿ ಇರುತ್ತೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಭೀತಿ ಎದುರಾದಾಗಿಂದ ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಒಟ್ಟಿಗೆ ಕೆಲಸ ಮಾಡುತ್ತಿದ್ದರೂ ಎರಡು ಇಲಾಖೆ ನಡುವೆ ಹೊಂದಾಣಿಕೆ ಇಲ್ಲಾ ಅನ್ನೋದು ಪದೇ ಪದೇ ಸಾಬೀರಾಗುತ್ತಿದೆ. ಇಂದಿನ ಸಚಿವರಿಬ್ಬರ ವಿಭಿನ್ನ ಹೇಳಿಕೆಗಳು ಎರಡು ಇಲಾಖೆ ಹಾಗೂ ಇಬ್ಬರು ಸಚಿವರ ನಡುವೆ ತಾಳ ಮೇಳ ಯಾವುದು ಹೊಂದಾಣಿಕೆ ಆಗುತ್ತಿಲ್ಲ ಎಂಬುದನ್ನಂತು ಖಚಿತ ಪಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *