ಜಗ್ಗೇಶ್ ಕರೆ ಮಾಡಿದ ಗಂಟೆಯಲ್ಲೇ ಕಿಲ್ಲರ್ ವೆಂಕಟೇಶ್​ಗೆ 1 ಲಕ್ಷ ನೀಡಿದ ದಚ್ಚು

Public TV
2 Min Read

– ಅಭಿಮಾನಿಗಳಲ್ಲಿ ಜಗ್ಗೇಶ್ ಮನವಿ

ಬೆಂಗಳೂರು: ಕಿಲ್ಲರ್ ವೆಂಕಟೇಶ್ ವಿಷಯವಾಗಿ ಫೋನ್ ಮಾಡಿದ ಒಂದು ಗಂಟೆಯಲ್ಲಿ ಹಣದ ಸಹಾಯ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನವರಸ ನಾಯಕ ಜಗ್ಗೇಶ್ ಅಭಿನಂದನೆ ಸಲ್ಲಿಸಿದ್ದಾರೆ.

ಸ್ಯಾಂಡಲ್‍ವುಡ್‍ನ ಖ್ಯಾತ ಖಳ ನಟ ಕಿಲ್ಲರ್ ವೆಂಕಟೇಶ್ ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಕ್ಷಣ ಅವರ ಕುಟುಂಬದವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ ಎಂದು ಜಗ್ಗೇಶ್ ಸಹಾಯ ಮಾಡಿದ್ದರು. ಅಲ್ಲದೇ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಹಾಯ ಮಾಡಿ ಎಂದು ಮನವಿ ಮಾಡಿದ್ದರು. ಇದೀಗ ಕಿಲ್ಲರ್ ವೆಂಕಟೇಶ್ ಸಹಾಯಕ್ಕೆ ದರ್ಶನ್ ಕೂಡ ಮುಂದಾಗಿದ್ದಾರೆ. ಇದನ್ನೂ ಓದಿ: 250 ಚಿತ್ರಗಳಲ್ಲಿ ನಟಿಸಿದ ಹಿರಿಯ ಕಲಾವಿದನಿಗೆ ಲಿವರ್ ವೈಫಲ್ಯ- ಉಳಿಸಿಕೊಳ್ಳಲು ಜಗ್ಗೇಶ್ ಪ್ರಯತ್ನ

ಕಿಲ್ಲರ್ ವೆಂಕಟೇಶ್ ಅನಾರೋಗ್ಯದ ಬಗ್ಗೆ ಜಗ್ಗೇಶ್ ಅವರು ದರ್ಶನ್ ಅವರಿಗೆ ತಿಳಿಸಿದ್ದಾರೆ. ಜಗ್ಗೇಶ್ ಫೋನ್‍ಗೆ ತಕ್ಷಣ ಪ್ರತಿಕ್ರಿಯಿಸಿದ ದರ್ಶನ್, ಒಂದು ಲಕ್ಷ ಹಣ ಕಳುಹಿಸಿದ್ದಾರೆ. ಈ ಬಗ್ಗೆ ಸ್ವತಃ ಜಗ್ಗೇಶ್ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

“ಕಿಲ್ಲರ್ ವೆಂಕಟೇಶ್ ವಿಷಯವಾಗಿ ನಾನು ಕರೆ ಮಾಡಿದ 1 ಗಂಟೆಯಲ್ಲಿ ಅವನ ಚಿಕಿತ್ಸೆಗೆ 1ಲಕ್ಷ ರೂ ಕಳಿಸಿದ ಕಲಾಬಂಧು. ಉದ್ಯಮದಲ್ಲಿ ಪ್ರಥಮ ಸ್ಪಂದಿಸಿದ ಕಲಾಬಂಧು. ನಿನ್ನ ಶ್ರೇಷ್ಠಗುಣ ನನ್ನ ಹೃದಯದಲ್ಲಿ ಅಚ್ಚಾಯಿತು. ನೂರ್ಕಾಲ ಸುಖವಾಗಿ ಬಾಳಿ ಶುಭ ಹಾರೈಕೆ. dasadarshan god bless”  ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೇ “ವಿಕ್ಟೋರಿಯಾ ಆಸ್ಪತ್ರೆಯ ಡಾ.ಗಿರೀಶ್ ಮತ್ತು ಅವರ ವಿಶೇಷ ತಂಡ ಅದ್ಭುತವಾಗಿ ಸ್ಪಂದಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಧನ್ಯವಾದಗಳು. ನನ್ನ ಕರೆಗೆ ಸ್ಪಂಧಿಸಿದ ಕಲಾಬಂಧು ದರ್ಶನ ಅವರಿಗೆ, ಸಾ.ರಾ,ಬಾಮಾ ಹರೀಶ್ ಮಾಧ್ಯಮ ಮಿತ್ರರಿಗೆ” ಎಲ್ಲರಿಗೂ ಅಭಿನಂದನೆ ತಿಳಿಸಿದ್ದಾರೆ.

ಜೊತೆಗೆ “ಮಾಧ್ಯಮಮಿತ್ರರೆ, ಕಲಾಭಿಮಾನಿಗಳೇ, ಸಹೃದಯರೇ 35 ವರ್ಷ ಕಲಾಸೇವೆ ಮಾಡಿದ ಈ ಕಲಾವಿದನಿಗೆ ಧನಸಹಾಯ ಮಾಡುವ ಮನಸ್ಸು ರಾಯರು ನಿಮಗೆ ನೀಡಿದರೆ ಮಾತ್ರ ಅವನ ಖಾತೆಗೆ ಹಣ ಹಾಕಬಹುದು. ಬಲವಂತವಿಲ್ಲ, ಯಕೃತ್ ಕಸಿಗೆ ತುಂಬಾ ದೊಡ್ಡ ಮೊತ್ತ ಆಗುತ್ತದೆ ಹಾಗಾಗಿ ವಿನಂತಿ” ಎಂದು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಕಿಲ್ಲರ್ ವೆಂಕಟೇಶ್ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ. ಜೊತೆಗೆ ಚಿಕಿತ್ಸೆಗೆ ಹಣದ ಅವಶ್ಯಕತೆ ಕೂಡ ಇದೆ. ಹೀಗಾಗಿ ಕುಟುಂಬದವರು ಆಸ್ಪತ್ರೆಗೆ ಹಣ ಕಟ್ಟಲು ಪರಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *