ಕೆಳಜಾತಿ ಯುವಕನ ಜೊತೆ ಓಡಿ ಹೋದ ಮಗಳು – ಬಾವಿಗೆ ಹಾರಿ ಜೀವ ಬಿಟ್ಟ ಕುಟುಂಬ

Public TV
2 Min Read

– ಮರ್ಯಾದೆಗೆ ಅಂಜಿ ಯುವತಿ ತಂದೆ, ತಾಯಿ, ಸಹೋದರ ಆತ್ಮಹತ್ಯೆ
– ಕುಟುಂಬಸ್ಥರ ಸಾವಿನ ಬಗ್ಗೆ ತಿಳಿದು ನದಿಗೆ ಹಾರಿದ ಜೋಡಿ

ಮುಂಬೈ: ಮಗಳು ಕೆಳಜಾತಿ ಯುವಕನನ್ನು ಪ್ರೀತಿಸಿ ಓಡಿ ಹೋಗಿ, ಮದುವೆಯಾದ ಸುದ್ದಿ ಕೇಳಿ ಆಘಾತಕ್ಕೊಳಗಾದ ಕುಟುಂಬಸ್ಥರು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಡೆದಿದೆ.

ಕೆಳಜಾತಿ ಯುವಕನ ಜೊತೆ ಮಗಳು ಓಡಿ ಹೋಗಿ, ಮದುವೆ ಆಗಿ ಮರ್ಯಾದೆ ಕಳೆದಳು ಎಂದು ಮನನೊಂದ ಯುವತಿಯ ತಂದೆ, ತಾಯಿ ಹಾಗೂ ಸಹೋದರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೆತ್ತವರು ಮತ್ತು ಸಹೋದರನ ಸಾವಿನ ಸುದ್ದಿ ಕೇಳಿದ ನವ ದಂಪತಿ ಕೂಡ ಪ್ರಾಣ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಯುವತಿಯನ್ನು ಪ್ರಣಾಲಿ ವಾರ್ಗಂತಿವರ್(24) ಎಂದು ಗುರುತಿಸಲಾಗಿದ್ದು, ಆಕೆಯ ತಂದೆ ರವೀಂದ್ರ(52), ತಾಯಿ ವೈಶಾಲಿ(45) ಮತ್ತು ಆಕೆಯ ಸಹೋದರ ಸಾಯಿರಾಮ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇತ್ತ ನಮ್ಮಿಂದ ಕುಟುಂಬಸ್ಥರು ಜೀವ ಕಳೆದುಕೊಂಡರು ಎಂದು ಮನನೊಂದು ನವ ದಂಪತಿ ನದಿಗೆ ಹಾರಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಹಾಗೂ ಸ್ಥಳೀಯರು ಇಬ್ಬರನ್ನೂ ರಕ್ಷಿಸಿ, ಆಸ್ಪತ್ರೆಯಲ್ಲಿ ರವಾನಿಸಿದ್ದಾರೆ. ಸದ್ಯ ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.

ಶಾಲಾ ಶಿಕ್ಷಕಿಯಾಗಿರುವ ಪ್ರಣಾಲಿ ಇತರೆ ಹಿಂದುಳಿದ ವರ್ಗಕ್ಕೆ ಸೇರಿದ್ದು, ಆಕೆ ಪ್ರೀತಿ ಮಾಡುತ್ತಿದ್ದ ಯುವಕ ಪರಿಶಿಷ್ಟ ಜಾತಿಯವನಾಗಿದ್ದಾನೆ. ಈತ ಖಾಸಗಿ ಕಂಪನಿಯೊಂದಲ್ಲಿ ಕೆಲಸ ಮಾಡುತ್ತಿದ್ದಾನೆ. ಇವರಿಬ್ಬರ ಪ್ರೀತಿಗೆ ಮನೆಮಂದಿಯ ಒಪ್ಪಿಗೆ ಇರಲಿಲ್ಲ. ಹೀಗಾಗಿ ಕಳೆದ ಶನಿವಾರ ಪ್ರಣಾಲಿ ಮನೆಬಿಟ್ಟು ಓಡಿ ಹೋಗಿದ್ದಳು. ಬಳಿಕ ಮಾರ್ಕಂಡ ಹಳ್ಳಿಗೆ ತೆರಳಿ ತಾನ್ನ ಪ್ರೇಮಿ ಜೊತೆಗೆ ಭಾನುವಾರ ಶಿವನ ದೇವಾಸ್ಥಾನವೊಂದರಲ್ಲಿ ಮದುವೆಯಾಗಿದ್ದಳು.

ಈ ಬಗ್ಗೆ ತಿಳಿದ ಪ್ರಣಾಲಿ ಪೋಷಕರು ಮಗಳಿಂದ ಅವಮಾನ ಆಯ್ತು ಎಂದು ಮನನೊಂದು ಮರ್ಯಾದೆಗೆ ಅಂಜಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆ ರವೀಂದ್ರ, ತಾಯಿ ವೈಶಾಲಿ ಮತ್ತು ಯುವತಿಯ ಸಹೋದರ ಸಾಯಿರಾಮ್ ಮೊದಲು ಊಟ ಬಿಟ್ಟು, ಬಳಿಕ ಮನೆಯಿಂದ ಹೊರಟಿದ್ದಾರೆ. ಹಸಿವಿನಿಂದಲೇ ಕಿಲೋಮೀಟರ್‍ಗಟ್ಟಲೇ ನಡೆದುಕೊಂಡು ಹೋಗಿ, ನಂತರ ಜಮೀನೊಂದರಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕುಟುಂಬಸ್ಥರ ಸಾವಿನ ವಿಷಯ ತಿಳಿದ ನವ ದಂಪತಿ ತಾವು ಕೂಡ ಸಾಯಲು ನಿರ್ಧರಿಸಿ, ಮೊದಲು ಕೆಮಿಕಲ್ಸ್ ಸೇವಿಸಿ, ಬಳಿಕ ನದಿಗೆ ಹಾರಿದ್ದಾರೆ. ಆದರೆ ಈ ಬಗ್ಗೆ ವಿಷಯ ತಿಳಿದ ಪೊಲೀಸರ ತಂಡ ಸ್ಥಳೀಯರ ಸಹಾಯದಿಂದ ಇಬ್ಬರನ್ನು ರಕ್ಷಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *