ತಾಯಿಯ ವರ್ಷದ ತಿಥಿಗೆ ಮುಂಬೈನಿಂದ ಬಂದವನನ್ನು ರಾಡ್‍ನಿಂದ ಹೊಡೆದು ಕೊಂದ್ರು

Public TV
2 Min Read

– ತಾಯಿಯ ತಿಥಿಯ ದಿನವೇ ಮಗನ ಸಾವು

ಮಂಗಳೂರು: ತಾಯಿ ಸತ್ತ ಒಂದು ವರ್ಷದ ಪುಣ್ಯ ತಿಥಿ ಕಾರ್ಯಕ್ರಮಕ್ಕೆಂದು ಮುಂಬೈನಿಂದ ಊರಿಗೆ ಬಂದಿದ್ದಾತನನ್ನು ನೆರೆಮನೆಯ ತಂದೆ ಮತ್ತು ಮಗ ರಾಡ್‍ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಗಾಂಧಿನಗರ ಉಮೇಶ್ (50) ಹತ್ಯೆಗೀಡಾದ ದುರ್ದೈವಿ. ಪಕ್ಕದ ಮನೆಯ ಯೋಗೀಶ್ (51)ಹಾಗೂ ಆತನ ಮಗ ಜೀವನ್ (18) ಹತ್ಯೆಗೈದ ಆರೋಪಿಗಳು.

ಘಟನೆಯ ವಿವರ:
ಮುಂಬೈ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಉಮೇಶ್ ಕಳೆದ ನಾಲ್ಕು ದಿನಗಳ ಹಿಂದೆ ತನ್ನ ಗ್ರಾಮಕ್ಕೆ ಆಗಮಿಸಿದ್ದರು. ಭಾನುವಾರಕ್ಕೆ ಉಮೇಶ್‍ನ ತಾಯಿ ತೀರಿ ಹೋಗಿ ಒಂದು ವರ್ಷವಾಗಿತ್ತು. ಆದ್ದರಿಂದ ತಾಯಿಯ ಒಂದು ವರ್ಷದ ಕಾರ್ಯಕ್ಕೆ ಕುಟುಂಬದ ಜೊತೆ ಆಗಮಿಸಿದ್ದರು. ಅದರಂತೆ ಭಾನುವಾರ ತನ್ನ ತಾಯಿಯ ಒಂದು ವರ್ಷದ ತಿಥಿಯನ್ನು ಮುಗಿಸಿದ್ದರು.

ಹೀಗಿರುವಾಗ ಕಾರ್ಯಕ್ಕೆ ಮುಗಿದ ಮೇಲೆ ಮನೆಯಲ್ಲಿ ನೆಂಟರು ಉಳಿದುಕೊಂಡಿದ್ದರು. ಆದರೆ ಮನೆಯಿಂದ ಹೊರ ಹೋಗುವ ಜಾಗದಲ್ಲಿನ ರಸ್ತೆಗೆ ಪಕ್ಕದ ಮನೆಯ ಯೋಗೀಶ್ ಮತ್ತು ಆತನ ಮಗ ಜೀವನ್ ಕಲ್ಲನ್ನು ಅಡ್ಡ ಇಡಲಾಗಿ ಇಟ್ಟಿದ್ದರು. ಈ ಕಾರಣದಿಂದ ಮನೆಗೆ ಬಂದ ನೆಂಟರು ಹೊರ ಹೋಗಲು ಕಷ್ಟವಾಗುತ್ತೆ ಎಂದು ಕಲ್ಲನ್ನು ತೆಗೆಯಿರಿ ಎಂದು ಹೇಳಲು ಪತ್ನಿ ಶೀಲಾವತಿ ಹಾಗೂ ಉಮೇಶ್ ಯೋಗೀಶ್‍ನ ಮನೆ ಬಳಿ ಹೋಗಿದ್ದಾರೆ.

ಆಗ ಯೋಗೀಶ್ ಮತ್ತು ಆತನ ಮಗ ಜೀವನ್ ಉಮೇಶ್ ಜೊತೆ ಗಲಾಟೆ ಮಾಡಿದ್ದಾರೆ. ಈ ವೇಳೆ ಅಪ್ಪ ಮಗ ಸೇರಿಕೊಂಡು ಚೂರಿಯಿಂದ ಇರಿದು ರಾಡ್ ನಿಂದ ಥಳಿಸಿ ಉಮೇಶ್ ನನ್ನು ಕೊಲೆ ಮಾಡಲು ಮುಂದಾಗಿದ್ದಾರೆ. ಇದನ್ನು ಬಿಡಿಸಿದ ಸಂಬಂಧಿಕರು ಉಮೇಶ್ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಉಮೇಶ್ ಮೃತಪಟ್ಟಿದ್ದಾರೆ.

ಕಳೆದ ಒಂದೆರಡು ವರ್ಷದ ಹಿಂದೆ ಉಮೇಶ್ ಒಂದು ಮನೆಯನ್ನು ಕಟ್ಟಿದ್ದರು. ಮನೆ ಕಟ್ಟುವಾಗ ಸಾಮಾಗ್ರಿಗಳನ್ನು ಸಾಗಿಸಲು ಯೋಗೀಶ್ ತಮ್ಮ ಜಾಗದಲ್ಲಿ ದಾರಿ ಬಿಟ್ಟುಕೊಟ್ಟಿದ್ದರು. ಮನೆ ಪೂರ್ತಿಯಾದ ನಂತರ ಈ ರಸ್ತೆಯನ್ನೇ ಉಮೇಶ್ ಬಳಸುತ್ತಿದ್ದು ರಸ್ತೆ ಜಾಗದ ವಿಚಾರದಲ್ಲಿ ವೈಮನಸ್ಸಿತ್ತು. ಆದ್ದರಿಂದ ಯೋಗೀಶ್ ಮತ್ತು ಮಗ ಜೀವನ್ ಸೇರಿ ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ವಶಕ್ಕೆ ಪಡೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *