ದೇವೇಗೌಡ್ರು ವ್ಯಾಸಂಗ ಮಾಡಿದ ಕಾಲೇಜು ಮುಚ್ಚಲು ಸರ್ಕಾರ ಮುಂದಾಗಿದೆ: ರೇವಣ್ಣ

Public TV
1 Min Read

– ಹೆಚ್‍ಡಿಡಿ ನೇತೃತ್ವದಲ್ಲಿ ಸಿಎಂ ಮನೆ ಮುಂದೆ ಪ್ರತಿಭಟನೆ

ಹಾಸನ: ಮೈತ್ರಿ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಳಿಸಿರುವ ಕಾಮಗಾರಿಗಳನ್ನ ಹಾಸನದಲ್ಲಿ ತಡೆ ಹಿಡಿದಿದ್ದು ಇದನ್ನು ವಿರೋಧಿಸಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಸಿಎಂ ಮನೆ ಮುಂದೆ ಜಿಲ್ಲೆಯ ಎಲ್ಲಾ ಶಾಸಕರು ಪ್ರತಿಭಟನೆ ನಡೆಸುತ್ತೇವೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಕಾಮಗಾರಿ ತಡೆ ಹಿಡಿದಿರುವ ಬಗ್ಗೆ ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ, ಜಿಲ್ಲೆಯ ಎಲ್ಲಾ ಶಾಸಕರಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.

ಯಡಿಯೂರಪ್ಪ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ದೇವೇಗೌಡರು ವ್ಯಾಸಂಗ ಮಾಡಿದ ಹಾಸನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 150 ಸೀಟು ಕಡಿಮೆ ಮಾಡಿದ್ದಾರೆ. ಈ ಮೂಲಕ ದೇವೇಗೌಡರು ವ್ಯಾಸಂಗ ಮಾಡಿದ ಕಾಲೇಜು ಮುಚ್ಚಲು ಮುಂದಾಗಿದೆ. ಅಷ್ಟೇ ಅಲ್ಲದೇ ರಾಜ್ಯದ 33 ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ ಇಲ್ಲ ಎಂದು ಕಾಲೇಜು ಮುಚ್ಚಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಮಂತ್ರಿ ಮಂಡಲ ರಚಿಸಲು ಹೋಗಿ ಈ ಸರ್ಕಾರ ಪಾಲಿಟೆಕ್ನಿಕ್ ಕಾಲೇಜು ಮುಚ್ಚುತ್ತಿದೆ. ಯಡಿಯೂರಪ್ಪರವರಿಗೆ ಶಿವಮೊಗ್ಗದಲ್ಲಿ ಕಾಲೇಜು ನಿರ್ಮಿಸಿದ ದೊರೆಸ್ವಾಮಿ ಕೈಯಲ್ಲಿ ಕಾಲೇಜು ಆಡಳಿತವಿದೆ. ದೇವೇಗೌಡರು ಸಿಎಂ ಆಗಿದ್ದಾಗ ತಲೆ ಕೆರೆದುಕೊಂಡು ಬಂದು ನಿಂತ್ಕೊಳ್ತಿದ್ದ ದೊರೆಸ್ವಾಮಿಗೆ, ಸಿಎಂ ಪಾಲಿಟೆಕ್ನಿಕ್ ಕಾಲೇಜು ಬಳುವಳಿ ಕೊಡ್ತಿದ್ದಾರೆ ಎಂದು ರೇವಣ್ಣ ಕಿಡಿಕಾರಿದ್ದಾರೆ.

ಇದೇ ವೇಳೆ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ ವೇಳೆ ಅಡ್ಡಿಪಡಿಸಿದ್ರೆ ಶಾಸಕರನ್ನ ಅಮಾನತು ಮಾಡಲು ಸರ್ಕಾರ ಮುಂದಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ಅಮಾನತು ಮಾಡಲಿ ನೋಡೋಣ. ಅವರಿಗೆ ಹೆದರಿಕೆ ಇದೆ. ಎಮರ್ಜೆನ್ಸಿ ಇದೆ ಅದಕ್ಕೆ ಹಾಗೆ ಮಾಡ್ತಿದ್ದಾರೆ. ಆದರೆ ನಾವು ಹೋರಾಟ ಮಾಡ್ತೀವಿ ಎಂದು ಸವಾಲು ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *