ಬೀದರ್‌ಗೆ ಸಂಸದ ಓವೈಸಿ ಭೇಟಿ

Public TV
1 Min Read

ಬೀದರ್: ಹೈದರಾಬಾದ್‍ನ ಸಂಸದ ಮತ್ತು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಇಂದು ಬೀದರ್‌ಗೆ ಭೇಟಿ ನೀಡಿದ್ದಾರೆ.

ಶಾಲೆಯೊಂದರಲ್ಲಿ ನಾಟಕವನ್ನು ಮಾಡುವ ಮೂಲಕ ಪ್ರಧಾನಿ ಮೋದಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ಬೀದರ್ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಈ ವಿಷಯ ತಿಳಿದ ಸಂಸದ ಅಸಾದುದ್ದಿನ್ ಓವೈಸಿ ಇಂದು ಬೀದರ್‍ಗೆ ಭೇಟಿ ನೀಡಿ, ಎಸ್‍ಪಿ ಟಿ ಶ್ರೀಧರ್‍ರನ್ನು ಭೇಟಿ ಮಾಡಿ ಪ್ರಕರಣ ಬಗ್ಗೆ ಮಾಹಿತಿ ಪಡೆದುಕೊಂಡರು.

ಇದಾದ ಬಳಿಕ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ ಓವೈಸಿ ಪ್ರಕರಣದಲ್ಲಿ ಬಂಧನವಾಗಿರುವ ಇಬ್ಬರನ್ನು ಭೇಟಿ ಮಾಡಿ ಮಾಹಿತಿ ಕಲೆಹಾಕಿದರು. ಭೇಟಿ ಬಳಿಕ ಟ್ವೀಟ್ ಮಾಡಿರುವ ಸಂಸದ ಓವೈಸಿ ದೇಶದ್ರೋಹ ಪ್ರಕರಣ ದಾಖಲಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ನಾನು ಬೀದರ್ ಎಸ್‍ಪಿ ಅವರನ್ನು ಭೇಟಿ ಮಾಡಿದೆ. ಶಾಲೆಯಲ್ಲಿ ನಾಟಕ ಮಾಡಿದಕ್ಕೆ ಬಂಧಿಸಿ, ದೇಶದ್ರೋಹದ ಆರೋಪ ಮಾಡಿರುವುದನ್ನು ನಾವು ಬಲವಾಗಿ ಆಕ್ಷೇಪಿಸಿದ್ದೇವೆ.

ಈ ಪ್ರಕರಣ ತನಿಖೆಯಲ್ಲಿದೆ ಮತ್ತು ದೇಶದ್ರೋಹ ಎಂಬುದನ್ನು ತನಿಖೆ ನಂತರ ತೆಗೆದುಹಾಕಬಹುದು ಎಂದು ಎಸ್‍ಪಿ ಅವರು ಹೇಳಿದ್ದಾರೆ. ಆದರೆ ಈ ಮಹಿಳೆಯರು ಸ್ಥಳೀಯ ನಿವಾಸಿಗಳಾಗಿದ್ದರಿಂದ ಅವರನ್ನು ಬಂಧಿಸುವ ಮೊದಲು ಇದನ್ನು ಮಾಡಬೇಕು ಎಂಬುದು ನನ್ನ ವಾದ ಮತ್ತು ಶಾಲೆಯಲ್ಲಿ ನಾಟಕ ಮಾಡುವುದು ಹೇಗೆ ಅಪರಾಧವಾಗುತ್ತದೆ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

ಏನಿದು ಪ್ರಕರಣ?
ಜನವರಿ 23 ರಂದು ಪ್ರತಿಷ್ಠಿತ ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ವಿದ್ಯಾರ್ಥಿಗಳಿಂದ ನಾಟಕ ಮಾಡಿಸುವ ಮೂಲಕ ಪ್ರಧಾನಿಗೆ ಅವಮಾನ ಮಾಡಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿ ದೇಶಾದ್ಯಂತ ಬಾರಿ ಸುದ್ದಿಯಾದ ಬಳಿಕ ಬಿಜೆಪಿಯ ಯುವ ಮೋರ್ಚಾ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಬಳಿಕ ಪೊಲೀಸರು ತನಿಖೆ ಮಾಡಿ ಸಂಸ್ಥೆಯ ಮುಖ್ಯ ಶಿಕ್ಷಕಿ ಫರಿನಾಭಾನು ಹಾಗೂ ವಿದ್ಯಾರ್ಥಿಯ ತಾಯಿ ನಶೀಮಾ ಎಂಬವರನ್ನು ಪೊಲೀಸರು ಬಂಧಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *