ರಾಷ್ಟ್ರಪತಿಗಳಿಂದ ನಿರ್ಭಯಾ ದೋಷಿಯ ಕ್ಷಮಾದಾನ ಅರ್ಜಿ ತಿರಸ್ಕಾರ

Public TV
1 Min Read

ನವದೆಹಲಿ: 2012ರ ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದ ನಾಲ್ವರು ದೋಷಿಗಳಲ್ಲಿ ಒಬ್ಬನಾದ ಮುಕೇಶ್ ಗಲ್ಲುಶಿಕ್ಷೆಯಿಂದ ಪಾರಾಗಲು ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿರಸ್ಕರಿಸಿದ್ದಾರೆ.

ಈ ಹಿಂದೆ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಮರು ಪರಿಶೀಲನಾ ಅರ್ಜಿ ವಜಾ ಆದ ಬಳಿಕ ಪಟಿಯಾಲ ಹೌಸ್ ಕೋರ್ಟ್ ಜನವರಿ 22ರ ಬೆಳಗ್ಗೆ ಏಳು ಗಂಟೆಗೆ ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಿ ಡೆತ್ ವಾರೆಂಟ್ ಜಾರಿ ಮಾಡಿತ್ತು. ಇದಾದ ಬಳಿಕ ಮುಕೇಶ್ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ. ಇನ್ನು ಮೂವರು ಕ್ಷಮಾದಾನದ ಅರ್ಜಿ ಸಲ್ಲಿಸಿಲ್ಲ.

ಮುಕೇಶ್ ಸಿಂಗ್ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಜನವರಿ 22ರಂದು ಗಲ್ಲಿಗೇರಿಸುವ ಬಗ್ಗೆ ಗೊಂದಲವಿದೆ ಎಂದಿತ್ತು. ಜೈಲಿನ ನಿಯಮಗಳನ್ನು ಉಲ್ಲೇಖಿಸಿದ್ದ ಸರ್ಕಾರ, ನಾವು ನಿಯಮಗಳಿಗೆ ಅನುಗುಣವಾಗಿಯೇ ಕೆಲಸ ಮಾಡಬೇಕು. ರಾಷ್ಟ್ರಪತಿಗಳಿಗೆ ಸಲ್ಲಿಕೆ ಮಾಡಿರುವ ಕ್ಷಮಾದಾನದ ಅರ್ಜಿ ವಿಲೇವಾರಿಯಾಗುವವರೆಗೂ ಗಲ್ಲು ಶಿಕ್ಷೆ ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟಿಗೆ ತಿಳಿಸಿತ್ತು.

ವಿನಯ್ ಕುಮಾರ್ ಶರ್ಮಾ ಹಾಗೂ ಮುಕೇಶ್ ಸಿಂಗ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎನ್.ವಿ ರಮಣ, ಅರುಣ್ ಮಿಶ್ರಾ, ಆರ್.ಎಫ್. ನಾರಿಮನ್, ಆರ್. ಭಾನುಮತಿ ಮತ್ತು ಅಶೋಕ್ ಭೂಷಣ್ ಅವರಿದ್ದ ಪೀಠ ಮಂಗಳವಾರ ವಜಾಗೊಳಿಸಿತ್ತು.

ಈ ಅರ್ಜಿ ವಜಾಗೊಂಡ ಕೂಡಲೇ ಮುಕೇಶ್ ರಾಷ್ಟ್ರಪತಿ ಬಳಿ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದ. ರಾಷ್ಟ್ರಪತಿಗಳು ನನ್ನ ಅರ್ಜಿ ಇನ್ನೂ ಇತ್ಯರ್ಥಗೊಂಡಿಲ್ಲ. ಹೀಗಾಗಿ ಡೆತ್ ವಾರಂಟ್ ಜಾರಿಯಾಗಲು ಸಾಧ್ಯವಿಲ್ಲ. ನನ್ನ ಅರ್ಜಿ ಇತ್ಯರ್ಥವಾಗದೇ ಡೆತ್ ವಾರಂಟ್ ಜಾರಿ ಮಾಡುವುದು ಎಷ್ಟು ಸರಿ ಎಂದು ಮುಕೇಶ್ ಪ್ರಶ್ನಿಸಿದ್ದ. ಆದರೆ ಈಗ ರಾಷ್ಟ್ರಪತಿಗಳು ಮುಕೇಶ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *