ಪೌರತ್ವ ಗಲಾಟೆ ಬಳಸಿ ಉಗ್ರರ ನೇಮಕಕ್ಕೆ ನಡೆದಿತ್ತು ಫ್ಲಾನ್!

Public TV
1 Min Read

ಬೆಂಗಳೂರು: ಸಿಸಿಬಿ ಪೊಲೀಸರಿಂದ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಕರ್ನಾಟಕದಲ್ಲಿ ಸರಣಿ ವಿಧ್ವಂಸಕ ಕೃತ್ಯ ಮಾಡಲು ರೆಡಿಯಾಗಿದ್ದ ಸ್ಕೆಚ್ ಹೊರಗೆಡವಿದ್ದಾರೆ.

ಪೌರತ್ವ ಕಾಯ್ದೆಯ ಗಲಾಟೆಯನ್ನೇ ಬಳಸಿಕೊಂಡು ಉಗ್ರರ ನೇಮಕ ಮಾಡಲು ಸ್ಕೆಚ್ ರೆಡಿಯಾಗಿದ್ದನ್ನ ಸಿಸಿಬಿ ಪೊಲೀಸರು ಬಯಲಿಗೆಳೆದಿದ್ದಾರೆ. ವಿಧ್ವಂಸಕ ಕೃತ್ಯದ ಮಾಸ್ಟರ್ ಮೈಂಡ್ ಮೆಹಬೂಬ್ ಪಾಷಾ ಎಂದು ತಿಳಿದು ಬಂದಿದೆ.

ಅಲ್ಪ ಸಂಖ್ಯಾತರನ್ನು ಜಿಹಾದ್‍ಗೆ ಸೆಳೆಯಲು ಸ್ಕೆಚ್ ಮಾಡಿದ್ದ ಮೆಹಬೂಬ್ ಪಾಷಾ, ಬೆಂಗಳೂರಿನ ಸದ್ದು ಗುಂಟೆಪಾಳ್ಯದಲ್ಲಿ ವಾಸವಾಗಿದ್ದನು. ಅಲ್ಲದೆ ಬೆಂಗಳೂರು ಜಿಹಾದಿ ಗ್ಯಾಂಗ್‍ನ ಕಮಾಂಡರ್ ಕೂಡ ಆಗಿದ್ದ. ಮೂರು ದಿನಗಳ ಹಿಂದೆ ಸಿಕ್ಕ ಜಿಹಾದಿ ಗ್ಯಾಂಗ್ ವಿರುದ್ಧ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ತನಿಖೆ ವೇಳೆಯಲ್ಲಿ ಸಿಸಿಬಿಯಿಂದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಐಸಿಸ್ ನೇಮಕಾತಿಗೆ ಸ್ಕೆಚ್ ಕೂಡ ನಡೆದಿತ್ತು. ಮೆಹಬೂಬ್ ಪಾಷಾ ಸದಸ್ಯರ ನೇಮಕ, ಶಸ್ತ್ರ ಪೂರೈಕೆಯ ನೀಲನಕ್ಷೆ ರಚಿಸಿದ್ದನು. ಬೆಂಗಳೂರು ಹೊರವಲಯ, ಮಡಿಕೇರಿಯ ಅರಣ್ಯ ಪ್ರದೇಶದಲ್ಲಿ ಟ್ರೈನಿಂಗ್ ಕೊಡಿಸಿದ್ದನು. ಅಲ್ಲದೇ ರಾಜ್ಯದಲ್ಲಿ ಸರಣಿ ವಿಧ್ವಂಸಕ ಕೃತ್ಯ ಮಾಡಲು ಸ್ಕೆಚ್ ಮಾಡಿದ್ದ ಮೆಹಬೂಬ್ ಪಾಷಾ, ತನ್ನ ಸಹಚರರ ಬಂಧನದ ಬಳಿಕ ತಲೆಮರೆಸಿಕೊಂಡಿದ್ದಾನೆ.

ಮೆಹಬೂಬ್ ಪಾಷಾಗಾಗಿ ಸಿಸಿಬಿ ಪೊಲೀಸರ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಈ ವರ್ಷ ಕರ್ನಾಟಕದಲ್ಲಿ ವಿಧ್ವಂಸಕ ಕೃತ್ಯ ಮಾಡಲು ಸ್ಕೆಚ್ ಮಾಡಿದ್ದ ಜಿಹಾದಿ ಗ್ಯಾಂಗ್ ಹೆಡೆ ಮುರಿಕಟ್ಟಿ ಮುಂದಾಗಬಹುದಾದ ಬಹುದೊಡ್ಡ ಅಪಾಯ ತಪ್ಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *