ತವರು ಕ್ಷೇತ್ರಕ್ಕೆ ಭರ್ಜರಿ ಕೊಡುಗೆ ನೀಡಿದ ಡಿಸಿಎಂ ಸವದಿ

Public TV
1 Min Read

ಚಿಕ್ಕೋಡಿ: ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಮ್ಮ ತವರು ಕ್ಷೇತ್ರ ಅಥಣಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ.

ಸವದಿ ಅವರ ಸ್ವ ಕ್ಷೇತ್ರ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿಗೆ ಸಹಾಯಕ ಪ್ರಾದೇಶಿಕ ಆಯುಕ್ತರ ಕಚೇರಿ (ಆರ್.ಟಿ.ಒ) ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ. ಅಥಣಿ ಹಾಗೂ ನೆರೆಯ ರಾಯಭಾಗಗಳು ಅಥಣಿ ಪ್ರಾದೇಶಿಕ ಕಚೇರಿ ವ್ಯಾಪ್ತಿಗೆ ಬರಲಿವೆ. ಕಚೇರಿ ತಕ್ಷಣ ಆರಂಭವಾಗುವ ನಿಟ್ಟಿನಲ್ಲಿ ಬಾಡಿಗೆಗೆ ಕಟ್ಟಡ ಪಡೆದುಕೊಳ್ಳಬೇಕು. ಕಚೇರಿಗೆ ಅಗತ್ಯ ಇರುವ ಹುದ್ದೆಗಳನ್ನು ಇಲಾಖೆಯ ವ್ಯಾಪ್ತಿಯಲ್ಲಿ ಗುರುತಿಸಿ ಸ್ಥಳಾಂತರಿಸಿಕೊಳ್ಳತಕ್ಕದು ಎಂದು ಸರ್ಕಾರದ ಅದೇಶದಲ್ಲಿ ತಿಳಿಸಲಾಗಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದ ಕೃಷಿ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಅಥಣಿ ಕೇಂದ್ರ ಸ್ಥಳವಾಗಿರುವುದರಿಂದ ವಾಹನ ಸಂಚಾರ, ಸಾಗಾಟಗಳ ವಹಿವಾಟುಗಳು ಅಧಿಕವಾಗಿರುತ್ತವೆ. ಈ ಪ್ರದೇಶದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಕಚೇರಿ ಆರಂಭಿಸಲಾಗುತ್ತಿದೆ ಎಂದು ಸಾರಿಗೆ ಇಲಾಖೆಯ ಪ್ರಕಟಣೆ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *