ಸಿಎಎ ಪ್ರತಿಭಟನೆಗಳ ಕುರಿತು ಕೊಹ್ಲಿ ಪ್ರತಿಕ್ರಿಯೆ

Public TV
2 Min Read

ಗುವಾಹಟಿ: ದೇಶದಲ್ಲಿ ಪೌರತ್ವ ಕಾಯ್ದೆಯ ಪರ ಹಾಗೂ ವಿರೋಧಿ ಪ್ರತಿಭಟನೆಗಳು ತೀವ್ರವಾಗಿ ನಡೆಯುತ್ತಿದೆ. ಇದೇ ವೇಳೆ ಪೌರತ್ವ ಕಾಯ್ದೆಯ ಕುರಿತು ಮೊದಲ ಬಾರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಶ್ರೀಲಂಕಾ ವಿರುದ್ಧ ನಡೆಯಲಿರುವ ಮೊದಲ ಟಿ20 ಪಂದ್ಯ ಹಿನ್ನೆಲೆಯಲ್ಲಿ ಇಂದು ನಾಯಕ ಕೊಹ್ಲಿ ಮಾಧ್ಯಮಗಳ ಎದುರು ಹಾಜರಾಗಿದ್ದರು. ಈ ವೇಳೆ ಕೊಹ್ಲಿ ಅವರಿಗೆ ಸಿಎಎ ಕಾಯ್ದೆಯ ಕುರಿತ ಪ್ರಶ್ನೆ ಎದುರಾಗಿತ್ತು. ಇದಕ್ಕೂತ್ತರಿಸಿ ಮಾತನಾಡಿದ ಕೊಹ್ಲಿ, ಸಿಎಎ ವಿಚಾರದಲ್ಲಿ ನಾನು ಬೇಜವಾಬ್ದಾರಿಯಾಗಿ ಮಾತನಾಡಲು ಬಯಸುವುದಿಲ್ಲ. ಯಾವುದೇ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದ ಸಂದರ್ಭದಲ್ಲಿ ಮಾತ್ರ ನಾವು ಬಹಿರಂಗವಾಗಿ ಮಾತನಾಡಬೇಕು. ಸಿಸಿಎ ಬಗ್ಗೆ ನಾನು ಪೂರ್ಣ ಮಾಹಿತಿ ತಿಳಿದುಕೊಳ್ಳುತ್ತೇನೆ. ಆ ಬಳಿಕವೇ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದರು.

2016 ರಲ್ಲಿ ಮೋದಿ ಸರ್ಕಾರ ನೋಟು ರದ್ದು ಮಾಡಿ ಆದೇಶ ನೀಡಿತ್ತು. ಆ ವೇಳೆ ಪ್ರತಿಕ್ರಿಯೆ ನೀಡಿದ್ದ ಕೊಹ್ಲಿ, ಭಾರತೀಯ ರಾಜಕೀಯ ಇತಿಹಾಸದಲ್ಲಿ ಇದು ಶ್ರೇಷ್ಠ ನಡೆ ಎಂದಿದ್ದರು. ಅಸ್ಸಾಂನಲ್ಲಿ ಸಿಸಿಎ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ನಡೆಯುತ್ತಿರುವ ಕಾರಣ ಕೊಹ್ಲಿಗೆ ಈ ಪ್ರಶ್ನೆಯನ್ನು ಕೇಳಲಾಗಿತ್ತು.

ಇದೇ ವೇಳೆ ಕೊಹ್ಲಿ ಗುವಾಹಟಿ ಪಂದ್ಯಕ್ಕೆ ನೀಡಲಾಗಿರುವ ಭದ್ರತೆಯ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದು, ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಈ ನಗರ ಅತ್ಯಂತ ಸುರಕ್ಷಿತ ಎಂದು ಹೇಳಿದ್ದಾರೆ.

ಅಸ್ಸಾಂ ಕ್ರಿಕೆಟ್ ಮಂಡಳಿ ಭಾರತ ಹಾಗೂ ಶ್ರೀಲಂಕಾ ನಡುವಿನ ಪಂದ್ಯವನ್ನು ಮುಂದಿನ ಐಪಿಎಲ್ ಆವೃತ್ತಿಗೆ ‘ಕರ್ಟೆನ್ ರೈಸರ್’ ಆಗಿ ಬಳಕೆ ಮಾಡಿಕೊಳ್ಳುತ್ತಿದೆ. 2020ರ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಗುವಾಹಟಿ ಕ್ರೀಡಾಂಗಣವನ್ನು ಆಯ್ಕೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಗುವಾಹಟಿ ಪಂದ್ಯಕ್ಕೆ ಕರವಸ್ತ್ರ ಹಾಗೂ ಟವೆಲ್ ತರುವುದಕ್ಕೆ ನಿಷೇಧ ಹೇರಲಾಗಿದೆ. ಅಸ್ಸಾಂ ಸಂಪ್ರದಾಯವಾದಿಗಳು ಕರವಸ್ತ್ರ ಹಾಗೂ ಟವೆಲ್ ಗಳನ್ನು ಸಿಎಎ ವಿರುದ್ಧದ ಪ್ರತಿಭಟನೆಗಳಲ್ಲಿ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *