ಪತ್ನಿಯ ಶೀಲ ಶಂಕಿಸಿ ಮಕ್ಕಳಿಗೆ ವಿಷವಿಟ್ಟು ಆತ್ಮಹತ್ಯೆಗೆ ಶರಣಾದ ಪಾಪಿ ತಂದೆ

Public TV
2 Min Read

– ಹೊಲಕ್ಕೆ ಕರೆದೊಯ್ದು ಕೃತ್ಯ ಎಸಗಿದ ಮೃಗೀಯ ವ್ಯಕ್ತಿ

ಕಲಬುರಗಿ: ಪತ್ನಿಯ ಶೀಲ ಶಂಕಿಸಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳಿಗೆ ವಿಷವಿಟ್ಟು ತಾನೂ ಆತ್ಮಹತ್ಯೆಗೆ ಶರಣಾದ ಅಮಾನವೀಯ ಘಟನೆ ಚಿಂಚೋಳಿ ತಾಲೂಕಿನ ಭೈರಂಪಳ್ಳಿ ಗ್ರಾಮದಲ್ಲಿ ನಡೆದಿದೆ.

ಭೈರಂಪಳ್ಳಿ ಗ್ರಾಮದ ಸಂಜೀವ್ ಮಕ್ಕಳಿಗೆ ವಿಷ ಹಾಕಿದ ಪಾಪಿ ತಂದೆ. ಪವಿತ್ರಾ (5) ಮತ್ತು ರೋಹಿತಾ (3) ಕೊಲೆಯಾದ ಮಕ್ಕಳು. ಆರೋಪಿ ಗುರುವಾರ ರಾತ್ರಿ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಹೊಲಕ್ಕೆ ಕರೆದೊಯ್ದಿದ್ದ. ಈ ವೇಳೆ ಚಾಕೊಲೇಟ್, ಬಿಸ್ಕತ್ ಕೊಟ್ಟು ಜೊತೆಗೆ ಜ್ಯೂಸ್‍ನಲ್ಲಿ ವಿಷ ಬೆರೆಸಿ ಕರುಳ ಕುಡಿಗಳನ್ನೇ ಅಮಾನುಷವಾಗಿ ಹತ್ಯೆ ಗೈದಿದ್ದಾನೆ. ನಂತರ ತನ್ನ ಮೊಬೈಲ್‍ನಲ್ಲಿ ಮಕ್ಕಳ ಮೃತ ದೇಹದ ಫೋಟೋ ತೆಗೆದು ಸ್ನೇಹಿತರ ವಾಟ್ಸಪ್ ಗ್ರೂಪ್‍ಗೆ ಕಳುಹಿಸಿ ಪರಾರಿಯಾಗಿದ್ದಾರೆ.

ಈ ಸಂಬಂಧ ಗ್ರಾಮಸ್ಥರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಸಂಜೀವ್‍ನನ್ನು ಬಂಧಿಸಲು ಬಲೆ ಬೀಸಿದ್ದರು. ಇದರಿಂದ ಹೆದರಿದ ಸಂಜೀವ್ ತಾನೂ ಕೂಡ ತೆಲಂಗಾಣದ ತಾಂಡೂರ್ ಸಮೀಪದ ರೈಲು ಹಳಿಗೆ ತಲೆಕೊಟ್ಟು ಮಲಗಿದ್ದ. ಈ ವೇಳೆ ರೈಲು ಹರಿದ ಪರಿಣಾಮ ಪಾಪಿ ಸಂಜೀವ್ ಮೃತದೇಹವು ತುಂಡು ತುಂಡಾಗಿ ಬಿದ್ದಿದೆ.

ಸಂಜೀವ್ ಚಿಮ್ಮನಚೋಡ್ ತಾಂಡಾದ ನಿರ್ಮಲಾ ದೇವಿಯನ್ನು 2013ರಲ್ಲಿ ಮದುವೆಯಾಗಿದ್ದ. ಹೈದರಾಬಾದ್‍ನಲ್ಲಿ ವಾಸವಾಗಿದ್ದ ಸಂಜೀವ್ ಟೊಯೋಟಾ ಶೋರೂಂನಲ್ಲಿ ಕೆಲಸ ಮಾಡಿಕೊಂಡಿದ್ದ. ಕಳೆದ ಒಂದು ವರ್ಷದವರೆಗೂ ಸಂಜೀವ್ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಅನ್ಯೂನ್ಯತೆಯಿಂದ ಇದ್ದ. ಆದರೆ ಕೆಲ ತಿಂಗಳ ಹಿಂದಷ್ಟೇ ಸಂಜೀವ್ ದಂಪತಿ ಮಧ್ಯೆ ಜಗಳ ಶುರುವಾಗಿತ್ತು.

ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಅಂತ ಸಂಜೀವ್ ಆರೋಪಿಸಿ, ನಿತ್ಯವೂ ಆಕೆಯ ಜೊತೆಗೆ ಜಗಳವಾಡುತ್ತಿದ್ದ. ದಂಪತಿಗಳ ಜಗಳದಿಂದ ಬೇಸತ್ತ ಮನೆ ಮಾಲೀಕರು ಮನೆ ಖಾಲಿ ಮಾಡಿಸಿದ್ದರು. ಇದರಿಂದಾಗಿ ಗುರುವಾರ ಮಧ್ಯಾಹ್ನ ಮನೆ ವಸ್ತುಗಳೊಂದಿಗೆ ಸ್ವಗ್ರಾಮ ಭೈರಂಪಳ್ಳಿಗೆ ಸಂಜೀವ್ ಬಂದಿದ್ದ. ವಸ್ತುಗಳನ್ನು ಮನೆಯಲ್ಲಿಟ್ಟು, ಮಕ್ಕಳಿಗೆ ಏನಾದರು ತಿಂಡಿ ಕೊಡಿಸುವುದಾಗಿ ಕರೆದೊಯ್ದು ಕೃತ್ಯ ಎಸಗಿದ್ದಾನೆ ಎಂಬುದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ.

ಈ ಸಂಬಂಧ ಮಿರಿಯಾಣ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಎಸ್‍ಪಿ ಯಡಾ ಮಾರ್ಟಿನ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣದ ತನಿಖೆ ಆರಂಭಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *