ಮೈ ಶುಗರ್ ಅಳಿವು ಉಳಿವಿಗೆ ಮಹತ್ವದ ಸಭೆ

Public TV
2 Min Read

ಮಂಡ್ಯ: ರೈತರ ಪಾಲಿಗೆ ಜೀವ ನಾಡಿಯಾಗಿದ್ದ ಮೈ ಶುಗರ್ ಕಾರ್ಖಾನೆಯ ಬಾಗಿಲು ಹಾಕಿ 4 ವರ್ಷಗಳು ಕಳೆದಿವೆ. ಇಲ್ಲಿಯವರೆಗೆ ಕಾರ್ಖಾನೆಯ ಬಾಗಿಲನ್ನು ನಾವು ತೆರೆಯುತ್ತೇವೆ ಎಂದು ಮೂರು ಪಕ್ಷದ ರಾಜಕೀಯ ಮುಖಂಡರು ಹೇಳಿಕೆಗಳನ್ನು ಕೊಡುತ್ತಾನೆ ಬಂದಿದ್ದಾರೆ. ಆದರೆ ಇಲ್ಲಿಯವರೆಗೂ ಸಹ ಈ ಕಾರ್ಖಾನೆ ಮಾತ್ರ ಪುನಾರಂಭವಾಗಿಲ್ಲ. ಇದೀಗ ಇಂದು ಮೈ ಶುಗರ್ ಕಾರ್ಖಾನೆಯ ಅಳಿವು ಉಳಿವಿನ ಬಗ್ಗೆ ಮಹತ್ವದ ಸಭೆಯೊಂದನ್ನು ಸಚಿವರುಗಳು, ಸಂಸದರು, ಶಾಸಕರು, ಅಧಿಕಾರಿಗಳು ಹಾಗೂ ರೈತ ಮುಖಂಡರು ನಡೆಸಲಿದ್ದಾರೆ.

ಇಂದು ಮೈ ಶುಗರ್ ಕಾರ್ಖಾನೆಯ ಕುರಿತು ಮಹತ್ವದ ತೀರ್ಮಾನ ತೆಗೆದುಕೊಳ್ಳುವ ನಿಟ್ಟಿನಲ್ಲಿ ಮಂಡ್ಯದ ಮೈ ಶುಗರ್ ಕಾರ್ಖಾನೆ ಸಭಾಂಗಣದಲ್ಲಿ ಸಭೆಯನ್ನು ಆಯೋಜನೆ ಮಾಡಲಾಗಿದೆ. ಈ ಸಭೆಯಲ್ಲಿ ಸಚಿವರಾದ ಸಿ.ಟಿ.ರವಿ, ಆರ್.ಅಶೋಕ್ ನೇತೃತ್ವದಲ್ಲಿ ಸಂಸದೆ ಸುಮಲತಾ ಅಂಬರೀಶ್, ಮಂಡ್ಯದ ಶಾಸಕರುಗಳು, ಅಧಿಕಾರಿಗಳು ಹಾಗೂ ರೈತ ಮುಖಂಡರನ್ನು ಒಳಗೊಂತೆ ಸಭೆಯನ್ನು ನಡೆಸಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಮೈ ಶುಗರ್ ಕಾರ್ಖಾನೆ ಮುಚ್ಚಿದ್ದ ಪರಿಣಾಮ ಮಂಡ್ಯ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಬೆಳೆದ ಕಬ್ಬು ಕಟಾವು ಆಗದೇ ರೈತರು ತಲೆಯ ಮೇಲೆ ಕೈ ಹೊತ್ತು ಕೂರುವಂತಹ ಸ್ಥಿತಿ ಮಂಡ್ಯದಲ್ಲಿ ನಿರ್ಮಾಣವಾಗಿದೆ.

ಪ್ರತಿಯೊಂದು ಚುನಾವಣೆಯ ವೇಳೆ ಮೂರು ಪಕ್ಷದ ಮುಖಂಡರುಗಳು ಮೈ ಶುಗರನ್ನು ನಾವು ಪುನಾರಂಭ ಮಾಡುತ್ತೇವೆ ಎಂದು ವೇದಿಕೆಯ ಮೇಲೆ ಭಾಷಣ ಮಾಡ್ತಾ ಇದ್ದಾರೆ. ಆದ್ರೆ ಇಲ್ಲಿವರೆಗೂ ಸಹ ಕಾರ್ಖಾನೆ ಬಾಗಿಲು ಮಾತ್ರ ತೆರೆದಿಲ್ಲ. ಕಬ್ಬು ಬೆಳೆಗಾರರ ಕಷ್ಟವೂ ಸಹ ನೀಗಿಲ್ಲ. ಕಳೆದ ಸಮ್ಮಿಶ್ರ ಸರ್ಕಾರದ ವೇಳೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾರ್ಖಾನೆಯನ್ನು ಹೊಸದಾಗಿ ನಿರ್ಮಾಣ ಮಾಡುವುದಾಗಿ ಬಜೆಟ್‍ ಘೋಷಣೆ ಸಹ ಮಾಡಿದ್ರು. ಆದರೆ ಸದ್ಯ ಬಿಜೆಪಿ ಸರ್ಕಾರ ನಾವು ಹೊಸ ಕಾರ್ಖಾನೆ ಮಾಡೋದಿಲ್ಲ, ಹೀಗಿರುವ ಕಾರ್ಖಾನೆಯನ್ನೇ ಲೀಜ್‍ಗೆ ಹಾಕುತ್ತೇವೆ ಎಂದು ಹೇಳಿತ್ತು.

ಈ ನಿಟ್ಟಿನಲ್ಲಿ ಇಂದು ಮಹತ್ವದ ಸಭೆಯೊಂದನ್ನು ಸಕ್ಕರೆ ನಗರಿಯಲ್ಲಿ ನಡೆಸಲಾಗುತ್ತಿದೆ. ಈ ಹಿಂದೆಯೂ ಸಹ ಇಂತಹದ್ದೆ ಮಹತ್ವ ಸಭೆಗಳು ಹಲವಾರು ನಡೆದಿವೆ. ಆದರೆ ಸಭೆಯಿಂದ ಇಲ್ಲಿವರೆಗೂ ಸಹ ಯಾವುದೇ ಪ್ರಯೋಜನವೂ ಆಗಿಲ್ಲ. ಆದರೆ ಈ ಸಭೆ ಮೈ ಶುಗರ್ ಕಾರ್ಖಾನೆಯ ಬಾಗಿಲು ತರೆಸುವ ನಿಟ್ಟಿನಲ್ಲಿ ಕಾರ್ಯವಹಿಸುತ್ತಾ, ಇಲ್ಲ ಹಿಂದೆ ಆದ ರೀತಿ ಬಂದಾ ಪುಟ್ಟ ಹೋದ ಪುಟ್ಟ ಎಂಬಂತೆ ಆಗುತ್ತಾ ಎನ್ನೋದನ್ನಾ ನೋಡಬೇಕಿದೆ. ಅಲ್ಲದೇ ಈ ಸಭೆಯಲ್ಲಿ ರೈತ ಮುಖಂಡರು ಕಾರ್ಖಾನೆ ಪುನಾರಂಭದ ವಿಚಾರದಲ್ಲಿ ಸಚಿವರುಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ತರಾಟೆ ತೆಗೆದುಕೊಳ್ಳುವ ಸಾಧ್ಯತೆಗಳು ಸಹ ಹೆಚ್ಚಿವೆ.

Share This Article
Leave a Comment

Leave a Reply

Your email address will not be published. Required fields are marked *