ಉತ್ತರ ಭಾರತದಲ್ಲಿ ವಿದ್ಯಾಪೀಠದ ಕನಸು ನನಸಾಗುವ ವೇಳೆಗೆ ಕೃಷ್ಣೈಕ್ಯ

Public TV
1 Min Read

ನವದೆಹಲಿ: ಬೆಂಗಳೂರಿನ ವಿದ್ಯಾಪೀಠ ಮಠದಲ್ಲಿ ಅಂತ್ಯಕ್ರಿಯೆ ಆಗಬೇಕು ಎನ್ನುವುದು ಪೇಜಾವರ ಶ್ರೀಗಳ ಕೊನೆಯ ಆಶಯವಾಗಿತ್ತು. ಅದರಂತೆ ಉತ್ತರ ಭಾರತದಲ್ಲೂ ಒಂದು ವಿದ್ಯಾಪೀಠ ಆರಂಭಿಸಬೇಕು ಎನ್ನುವುದು ಅವರ ಮತ್ತೊಂದು ಕನಸಾಗಿತ್ತು.

ಶ್ರೀಗಳ ಕನಸಿನಂತೆ ದೆಹಲಿಯ ವಸಂತ್ ಕುಂಜ್‍ನಲ್ಲಿರುವ ಶ್ರೀಕೃಷ್ಣ ಮಠದಲ್ಲಿ ವಿದ್ಯಾಪೀಠ ಆರಂಭವಾಗುತ್ತಿದೆ. ಆದರೆ ಅದನ್ನು ನೋಡಲು ಶ್ರೀಗಳಿಲ್ಲ ಎನ್ನುವುದು ಬೇಸರದ ಸಂಗತಿ. ಇದನ್ನೂ ಓದಿ: ವಿಶ್ವಸಂತ ಪೇಜಾವರ ಶ್ರೀಗಳು ಕೃಷ್ಣೈಕ್ಯ – ಬೆಂಗಳೂರಿನ ವಿದ್ಯಾಪೀಠದಲ್ಲಿ ವೃಂದಾವನಸ್ಥ

ಕಳೆದ ಮೂರು ತಿಂಗಳಿಂದ ಇಲ್ಲಿರುವ ಮಠದಲ್ಲಿ ವಿದ್ಯಾಪೀಠ ಆರಂಭಿಸುವ ಪ್ರಕ್ರಿಯೆಗಳು ಆರಂಭವಾಗಿದೆ. ಕನ್ನಡ, ಸಂಸ್ಕೃತ ಮತ್ತು ಹಿಂದಿಯಲ್ಲಿ ಇಲ್ಲಿ ವೇದ ಉಪನಿಷತ್ತು, ಪುರಾಣಗಳನ್ನು ಭೋಧಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದಕ್ಷಿಣ ಭಾರತಕ್ಕಾಗಿ ಬೆಂಗಳೂರಿನಲ್ಲಿ ವಿದ್ಯಾಪೀಠ ನಿರ್ಮಿಸಿದ್ದು ವೇದ ಉಪನಿಷತ್ತು ಕಲಿಯುವ ಮಕ್ಕಳಿಗೆ ಅನುಕೂಲವಾಗಿದೆ. ಅದರಂತೆ ಉತ್ತರ ಭಾರತದ ಮಕ್ಕಳಿಗೂ ಅನುಕೂಲವಾಗುವಂತೆ ದೆಹಲಿಯಲ್ಲಿ ವಿದ್ಯಾಪೀಠ ಆರಂಭಿಸಬೇಕೆಂದು ಮಠದ ಸಿಬ್ಬಂದಿ ಬಳಿ ಶ್ರೀಗಳು ಹೇಳಿಕೊಂಡಿದ್ದರಂತೆ.

ಶ್ರೀಗಳ ಕನಸಿನಂತೆ ದೆಹಲಿಯ ಶ್ರೀಕೃಷ್ಣ ಮಠದಲ್ಲಿ ವಿದ್ಯಾಪೀಠ ಆರಂಭವಾಗುತ್ತಿದ್ದು, ಆರಂಭಿಕವಾಗಿ ಅಯೋಧ್ಯೆಯಿಂದ ಆರು ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಡಿಸೆಂಬರ್ 5 ಕ್ಕೆ ಮಠಕ್ಕೆ ಬಂದಿದ್ದ ಶ್ರೀಗಳು ಸಭೆ ನಡೆಸಿ ಎಲ್ಲ ಕೆಲಸಗಳನ್ನು ನೋಡಿಕೊಂಡು ಹೋಗಿದ್ದರು. ಆದರೆ ವಿದ್ಯಾಪೀಠ ಪೂರ್ಣ ಆಗುವ ಮೊದಲು ಶ್ರೀಗಳು ನಿಧನವಾಗಿದ್ದು ಮಠದ ಭಕ್ತರಲ್ಲಿ ಬೇಸರ ತಂದಿದೆ.

Share This Article
Leave a Comment

Leave a Reply

Your email address will not be published. Required fields are marked *