ಶಿರಡಿಯ ಪ್ರಸಾದ ನಿಲಯಕ್ಕೆ ಹರಿದು ಬಂತು 13.15 ಕೋಟಿ ರೂ. ದೇಣಿಗೆ

Public TV
2 Min Read

– 2019ರಲ್ಲಿ 1.63 ಕೋಟಿ ಜನರಿಂದ ಪ್ರಸಾದ ಸೇವನೆ

ಮುಂಬೈ: ಶಿರಡಿಯ ಸಾಯಿಬಾಬಾ ದೇವಸ್ಥಾನದ ಪ್ರಸಾದ ನಿಲಯದಲ್ಲಿ ಈ ವರ್ಷ 1.63 ಕೋಟಿ ಜನರು ಪ್ರಸಾದ ಸ್ವೀಕರಿಸಿದ್ದಾರೆ. ಈ ಸಂಖ್ಯೆಯೂ ಕಳೆದ ವರ್ಷಕ್ಕಿಂತ 10 ಲಕ್ಷ ಹೆಚ್ಚಾಗಿದೆ ಎಂದು ವರದಿಯಾಗಿದೆ.

ಭಕ್ತರು ಸ್ವಯಂಪ್ರೇರಣೆಯಿಂದ 2019ರಲ್ಲಿ ಪ್ರಸಾದ ನಿಲಯಕ್ಕೆ 13,15,29,000 ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ. ಈ ದೇಣಿಗೆಯನ್ನು 2018ಕ್ಕೆ ಹೋಲಿಸಿದರೆ 1.62 ಕೋಟಿ ರೂ.ನಷ್ಟು ಹೆಚ್ಚಳವಾಗಿದೆ. ಅಷ್ಟೇ ಅಲ್ಲದೆ ಶಿರಡಿಯ ಪ್ರಸಾದ ನಿಲಯದಲ್ಲಿ ಸೌರಶಕ್ತಿಯನ್ನು ಮಾತ್ರ ಅಡುಗೆ ಮಾಡಲು ಬಳಸಲಾಗುತ್ತಿದೆ. ಅತ್ಯಾಧುನಿಕ ಮತ್ತು ಭವ್ಯ ಪ್ರಸಾದಾಲಯದಲ್ಲಿ ಪ್ರತಿದಿನ 40 ಸಾವಿರಕ್ಕೂ ಹೆಚ್ಚು ಜನರು ಪ್ರಸಾದ ಸೇವಿಸುತ್ತಾರೆ.

ದೇವಸ್ಥಾನದ ಆವರಣದಲ್ಲಿ ವಾಸಿಸುವ ದಿವ್ಯಾಂಗ, ವಿದ್ಯಾರ್ಥಿ, ಶಿರಡಿ ಸಾಯಿಬಾಬಾ ಸಂಸ್ಥೆಯ ನೌಕರರು ಉಚಿತ ಆಹಾರ ಸೌಲಭ್ಯವನ್ನು ಪಡೆಯುತ್ತಾರೆ. ಒಂದೇ ಬಾರಿಗೆ 5,000 ಭಕ್ತರು ಹಾಗೂ 1,500 ವಿಐಪಿಗಳು ಇಲ್ಲಿ ಒಟ್ಟಿಗೆ ಕುಳಿತು ಪ್ರಸಾದ ಸೇವಿಸಬಹುದಾಗಿದೆ. ಗುರುಪೂರ್ಣಿಮೆ ದಿನದಂದು 88 ಸಾವಿರ ಭಕ್ತರು ಪ್ರಸಾದ ಸೇವಿಸಿದ್ದಾರೆ. ಈ ಮೂಲಕ ಶಿರಡಿ ಪ್ರಸಾದ ನಿಲಯವು ಅನ್ನ ಸಂತರ್ಪಣೆಯಲ್ಲಿ ಇಡೀ ಏಷ್ಯಾ ಖಂಡದಲ್ಲಿ ಪ್ರಥಮ ಸ್ಥಾನದಲ್ಲಿದೆ.

ಯಾವ ತಿಂಗಳು ಎಷ್ಟು ಭಕ್ತರು?:
ಪ್ರತಿ ತಿಂಗಳು ಶಿರಡಿ ಸಾಯಿಬಾಬಾನ ದರ್ಶನಕ್ಕೆ ಬರುತ್ತಾರೆ. ಹೀಗಾಗಿ ಜನವರಿಯಲ್ಲಿ 15,62,166, ಫೆಬ್ರವರಿಯಲ್ಲಿ 10,87,236 ಹಾಗೂ ಮಾರ್ಚ್ ನಲ್ಲಿ 12,13,500 ಜನರು ಶಿರಡಿ ಪ್ರಸಾದ ನಿಲಯದಲ್ಲಿ ಪ್ರಸಾದ ಸೇವಿಸಿದ್ದಾರೆ. ಏಪ್ರಿಲ್‍ನಲ್ಲಿ 12,03,001, ಮೇ ತಿಂಗಳಿನಲ್ಲಿ 13,84,204, ಜೂನ್‍ನಲ್ಲಿ 14,78,328, ಜುಲೈನಲ್ಲಿ 15,23,063, ಆಗಸ್ಟ್ ನಲ್ಲಿ 13,61,068 ಹಾಗೂ ಸೆಪ್ಟೆಂಬರ್ ನಲ್ಲಿ 12,18,365 ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ. ಉಳಿದಂತೆ ಅಕ್ಟೋಬರ್ ನಲ್ಲಿ 12,85,151, ನವೆಂಬರ್ ನಲ್ಲಿ 13,88,112 ಹಾಗೂ ಡಿಸೆಂಬರ್ ನಲ್ಲಿ 15,96,370 ಭಕ್ತರ ಭೋಜನ ಸೇವಿಸಿದ್ದಾರೆ.

ಹೆಚ್ಚುತ್ತಿರುವ ಭಕ್ತರ ಸಂಖ್ಯೆ:
ವರ್ಷದಿಂದ ವರ್ಷಕ್ಕೆ ಶಿರಡಿ ಸಾಯಿಬಾಬಾ ಸನ್ನಿದಿಗೆ ಬರುವ ಭಕ್ತರ ಸಂಖ್ಯೆ ಏರಿಕೆಯಾಗುತ್ತಿದೆ. ಜೊತೆಗೆ ಪ್ರಸಾದ ನಿಲಯದಲ್ಲಿ ಪ್ರಸಾದ ಸ್ವೀಕರಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. 2017ರಲ್ಲಿ 1,48,44,000 ಜನರು ಪ್ರಸಾದ ಸೇವಿಸಿದ್ದರೆ, 2018ರಲ್ಲಿ 1,60,46,000 ಭಕ್ತರು ಪ್ರಸಾದ ಸೇವಿಸಿದ್ದಾರೆ. ಈ ವರ್ಷ ಮತ್ತೆ ಏರಿಕೆ ಕಂಡಿದ್ದು, 1,63,00,564 ಭಕ್ತರು ಶಿರಡಿ ಪ್ರಸಾದ ನಿಲಯದಲ್ಲಿ ಪ್ರಸಾದ ಸೇವಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *