ಬಾರ್ ಮಾಲೀಕನ ಮೇಲೆ ಹಲ್ಲೆ: ರೌಡಿಶೀಟರ್ ಸೇರಿ ನಾಲ್ವರು ಅರೆಸ್ಟ್

Public TV
1 Min Read

ಹುಬ್ಬಳ್ಳಿ: ರಾತ್ರಿ ಬಾರ್ ಸಮಯ ಮೀರಿದ ಮೇಲೆ ಮದ್ಯ ನೀಡದ ಬಾರ್ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದ ರೌಡಿ ಶೀಟರ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿಯ ನಿವಾಸಿ ರೌಡಿ ಶೀಟರ್ ವಿಜಯ ಬಿಜವಾಡ, ವಿನಾಯಕ ಮೊರಬ, ಅಭಿಷೇಕ ಹುಬ್ಬಳ್ಳಿ ಸೇರಿದಂತೆ ನಾಲ್ವರನ್ನು ಬಂಧಿತ ಆರೋಪಿಗಳು. ಪೊಲೀಸರು ಆರೋಪಿಗಳನ್ನು ಶನಿವಾರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ.

ವಿಜಯ ಬಿಜವಾಡ ಕಳೆದ ಡಿಸೆಂಬರ್ 24ರಂದು ರಾತ್ರಿ 11:30ರ ವೇಳೆ ಹುಬ್ಬಳ್ಳಿಯ ಮೇನಕಾ ಬಾರ್‍ಗೆ ತೆರಳಿದ್ದ. ಆರೋಪಿಗಳು ಸಮಯ ಮೀರಿದ ನಂತರವೂ ಮದ್ಯ ಕೇಳಿದ್ದರು. ಆದರೆ ಬಾರ್ ಮಾಲೀಕ ಜಯಶೀಲ ರಾಮಚಂದ್ರ ಮದ್ಯ ನೀಡಿರಲಿಲ್ಲ. ಇದರಿಂದ ಕೋಪಗೊಂಡ ನಾಲ್ವರು ಆರೋಪಿಗಳು ಮಾಲೀಕನ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದರು. ಜೊತೆಗೆ ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ ಇತರೆ ವಸ್ತುಗಳನ್ನು ಜಖಂಗೊಳಿಸಿದ್ದರು.

ರೌಡಿಶೀಟರ್ ವಿಜಯ ಬಿಜವಾಡ ವಿರುದ್ಧ ಹುಬ್ಬಳ್ಳಿ ಉಪನಗರ ಠಾಣೆ ಹಾಗೂ ಕೇಶ್ವಾಪುರ ಠಾಣೆಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ. ವಿಜಯ ಬಿಜವಾಡ ಜಿಲ್ಲೆಯಿಂದ ಗಡಿಪಾರು ಶಿಕ್ಷೆ ಅನುಭವಿಸಿದ ನಂತರವೂ ಹಳೇ ಚಾಳಿ ಮುಂದುವರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *