ಸಾವಿಗೆ ಆಹ್ವಾನ ನೀಡುತ್ತಿವೆ ಬೊಂಬೆನಗರಿಯ ಮೈದುಂಬಿದ ಕೆರೆಗಳು

Public TV
1 Min Read

ರಾಮನಗರ: ಚನ್ನಪಟ್ಟಣ ತಾಲೂಕಿನ ಕೆರೆ ಕಟ್ಟೆಗಳೆಲ್ಲ ಇದೀಗ ತುಂಬಿ ತುಳುಕುತ್ತಿವೆ. ಅಲ್ಪಸ್ವಲ್ಪ ಮಳೆಯ ಜೊತೆಗೆ ಏತ ನೀರಾವರಿ ಮೂಲಕ ತಾಲೂಕಿನ ಬಹುತೇಕ ಕೆರೆಗಳಿಗೆ ನೀರು ಹರಿಸಿ ತುಂಬಿಸಲಾಗಿದೆ. ಆದರೆ ಇದೀಗ ಈ ತುಂಬಿದ ಕೆರೆಗಳೇ ಆಹಾರಕ್ಕಾಗಿ ಕಾಯುತ್ತಾ ಕುಳಿತಿವೆ.

ಚನ್ನಪಟ್ಟಣದ ಇಗ್ಗಲೂರು ದೇವೇಗೌಡ ಬ್ಯಾರೇಜ್ ನಿಂದ ತಾಲೂಕಿನ ಸುಮಾರು 100ಕ್ಕೂ ಹೆಚ್ಚು ದೊಡ್ಡ ಹಾಗೂ ಚಿಕ್ಕ ಕೆರೆಗಳಿಗೆ ನೀರು ಹರಿಸಿ ತುಂಬಿಸಲಾಗಿದೆ. ಒಂದೊಂದು ಕೆರೆಗೂ ಒಂದೊಂದು ಲಿಂಕ್ ಮೂಲಕ ನೀರು ಹರಿಸುವುದಲ್ಲದೇ ಹಲವಾರು ಕೆರೆಗಳಿಗೆ ನೀರನ್ನು ಲಿಫ್ಟ್ ಮಾಡಿ ತುಂಬಿಸಲಾಗಿದೆ.

ಇದೀಗ ಮೈತುಂಬಿ ನಿಂತಿರುವ ಕೆರೆಗಳ ಎರಡು ಬದಿಗಳಲ್ಲಿ ತಡೆಗೋಡೆಗಳೇ ಇಲ್ಲದಿರುವುದು ವಾಹನ ಸವಾರರನ್ನು ಚಿಂತೆಗೀಡು ಮಾಡಿದೆ. ಕೆರೆಯ ಏರಿಯ ರಸ್ತೆಗಳು ಚಿಕ್ಕದಾಗಿದೆ. ಸ್ವಲ್ಪ ಯಾಮಾರಿದ್ರು ಯಮಪುರಿಗೆ ಸೇರುವುದು ಫಿಕ್ಸ್ ಆಗಿದ್ದು ವಾಹನ ಅಂಗೈನಲ್ಲಿ ಜೀವ ಹಿಡಿದು ಓಡಾಡುವಂತಾಗಿದೆ.

ಕಿಲ್ಲರ್ ಲೇಕ್ಸ್:
ಚನ್ನಪಟ್ಟಣದ ತಿಟ್ಟಮಾರನಹಳ್ಳಿ ಕೆರೆ, ಹೊಂಗನೂರು, ಮತ್ತಿಕೆರೆ, ಸುಳ್ಳೇರಿ, ಸೋಗಾಲ, ಸಿಂಗ್ರಾಜಿಪುರ ಸೇರಿದಂತೆ ಅನೇಕ ದೊಡ್ಡ ದೊಡ್ಡ ಕೆರೆಗಳು ತಡೆಗೋಡರಯನ್ನೇ ಹೊಂದಿಲ್ಲ. ಇದರಿಂದ ಕೆರೆಯ ಬದಿಯ ರಸ್ತೆಗಳಲ್ಲಿ ಓಡಾಡುವುದು ಅಸಾಧ್ಯವಾಗಿದೆ.

ಅದರಲ್ಲೂ ತಿಟ್ಟಮಾರನಹಳ್ಳಿ ಕೆರೆ ಸಾಕಷ್ಟು ಸಾವುಗಳನ್ನು ಕಂಡಿದೆ. ತಡೆಗೋಡೆಗಾಗಿಯೇ ಪ್ರತಿಭಟನೆ ರೂಪದಲ್ಲಿ ಮೇಕೆ ಬಲಿ ನೀಡುವ ಮೂಲಕ ಕೆರೆಗೆ ಆಹಾರ ನೀಡಿ ಅಪಘಾತ ನಡೆಯದಂತೆ ಪೂಜೆ ಸಲ್ಲಿಸಿದರು. ಆದರೂ ಕೂಡ ಈ ಭಾಗದಲ್ಲಿ ಅಪಘಾತಗಳು, ಕೆರೆಗೆ ವಾಹನ ಬೀಳುವುದು ನಿಂತೇ ಇಲ್ಲ.

ಹೀಗಾಗಿ ತಾಲೂಕಿನ ಬಹುತೇಕ ಕೆರೆಗಳಿಗೆ ಶೀಘ್ರವಾಗಿ ತಡೆಗೋಡೆ ನಿರ್ಮಿಸಿ ಪ್ರಾಣಹಾನಿಯನ್ನು ತಪ್ಪಿಸುವಂತೆ ತಾಲೂಕಿನ ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ. ಅಲ್ಲದೆ ತಡೆಗೋಡೆ ನಿರ್ಮಿಸದಿದ್ದರೆ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *