‘ಏನಯ್ಯ ಬಾ ಅಂದಾಗ ಬರಲಿಲ್ಲ, ಈಗ ಬಂದಿದ್ಯಲ್ಲ’: ರಮೇಶ್ ಕಾಲೆಳೆದ ಸಿದ್ದರಾಮಯ್ಯ

Public TV
2 Min Read

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವ ಸಿದ್ದರಾಮಯ್ಯ ಅವರನ್ನು ಶಾಸಕ ರಮೇಶ್ ಜಾರಕಿಹೊಳಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ರಮೇಶ್ ಅವರ ಕಾಲೆಳೆದಿದ್ದಾಳೆ.

ಜಾರಕಿಹೊಳಿ ಮಾಜಿ ಸಿಎಂ ಅವರನ್ನು ನೋಡಲು ಮಲ್ಲೇಶ್ವರಂ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ಸಿದ್ದರಾಮಯ್ಯ, “ಏನಯ್ಯ ರಮೇಶ ಬಾ ಅಂದಾಗ ಬರಲಿಲ್ಲ, ಈಗ ಬಂದಿದ್ಯಲ್ಲ” ಎಂದು ಕಾಲೆಳೆದಿದ್ದಾರೆ. ಆಗ ರಮೇಶ್, “ನೀವು ನಮ್ಮ ನಾಯಕರು ನಿಮ್ಮ ಆರೋಗ್ಯ ಮುಖ್ಯ ನಮಗೆ ಅದಕ್ಕೆ ಬಂದೆ” ಎಂದು ಉತ್ತರಿಸಿದರು. ಇದನ್ನೂ ಓದಿ: ಸಿಎಂ ಬಂದ್ರು ಚೇರ್ ಕೊಡ್ರಪ್ಪ: ಸಿದ್ದರಾಮಯ್ಯ

ಸುಮಾರು ಹತ್ತು ನಿಮಿಷಗಳ ಕಾಲ ರಮೇಶ್ ಹಾಗೂ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ತಮ್ಮ ಅನಾರೋಗ್ಯದ ಬಗ್ಗೆ ಮಾತನಾಡಿದ ಬಳಿಕ ಏನು ಮಿನಿಸ್ಟರ್ ಆಗ್ತಿಯ ಎಂದು ರಮೇಶ್ ಅವರಿಗೆ ಕೇಳಿದ್ದಾರೆ. ಇದಕ್ಕೆ ರಮೇಶ್ ಆಗುತ್ತೆ ನಿಮ್ಮ ಆಶಿರ್ವಾದ ಇರಲಿ ಎಂದಾಗ ನಂದಲ್ಲಪ್ಪ ಇವಾಗ ಯಡಿಯೂರಪ್ಪಂದು ಆಶೀರ್ವಾದ ಇರಬೇಕು ನಿನಗೆ ಎಂದು ಹೇಳಿ ಸಿದ್ದರಾಮಯ್ಯ ನಕ್ಕಿದ್ದಾರೆ. ಇದನ್ನೂ ಓದಿ: ಇನ್ನು 6 ತಿಂಗಳು ‘ಟಗರು’ ಮೌನ

ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ನಮ್ಮ ನಾಯಕರು. ಅವರು ಈಗ ಆರೋಗ್ಯವಾಗಿದ್ದಾರೆ. ಅವರು ನಾಳೆ ಡಿಸ್ಚಾರ್ಜ್ ಆಗುತ್ತಾರೆ. ನಾನು ಗೆದ್ದಾಗಲೂ ಅವರೇ ನಮ್ಮ ನಾಯಕರು ಎಂದು ಡಿಕ್ಲೇರ್ ಮಾಡಿದ್ದೆ. ಪಕ್ಷ ಬದಲಾವಣೆ ಮಾಡಿದರೂ ಅವರೇ ನಮ್ಮ ಗುರುಗಳು. ಆಸ್ಪತ್ರೆಯಲ್ಲಿ ನಾವಿಬ್ಬರು ಏನೇನ್ ಮಾತನಾಡಿದ್ದೀವಿ ಎಂದು ಹೇಳುವುದಕ್ಕೆ ಆಗಲ್ಲ ಎಂದು ಸಿದ್ದರಾಮಯ್ಯ ಭೇಟಿ ಬಳಿಕ ರಮೇಶ್ ಜಾರಕಿಹೊಳಿ ತಿಳಿಸಿದರು.

ಸಿದ್ದು ಭೇಟಿಯಾದ ಸಿಎಂ:
ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಗುರುವಾರ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ಮಾಡಿ ಆರೋಗ್ಯದ ಕುರಿತು ವಿಚಾರಿಸಿದರು. ಸಚಿವ ಈಶ್ವರಪ್ಪ ಸೇರಿದಂತೆ ಹಲವು ನಾಯಕರು ಸಿದ್ದರಾಮಯ್ಯ ಭೇಟಿ ವೇಳೆ ಹಾಜರಿದ್ದರು. ಸಿಎಂ ಬಿಎಸ್‍ವೈ ಆಗಮಿಸುತ್ತಿರುವುದನ್ನು ಕಂಡ ಕೂಡಲೇ ಅಚ್ಚರಿಗೊಂಡ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿಗಳು ಬಂದಿದ್ದಾರೆ. ಅವರಿಗೆ ಕುಳಿತುಕೊಳ್ಳಲು ಚೇರ್ ನೀಡಿ ಎಂದು ಹೇಳಿದರು. ಸಿದ್ದರಾಮಯ್ಯ ಅವರ ಆರೋಗ್ಯದ ಕುರಿತು ಸಿಎಂ, ಸಂಪೂರ್ಣ ಚೇತರಿಕೆ ಆಗುವವರೆಗೂ ಆಸ್ಪತ್ರೆಯಲ್ಲೇ ಇದ್ದು ಸಂಪೂರ್ಣವಾಗಿ ವಿಶ್ರಾಂತಿ ಪಡೆಯಿರಿ ಎಂದರು.

Share This Article
Leave a Comment

Leave a Reply

Your email address will not be published. Required fields are marked *