ಡಿಕೆಶಿಗೆ ಹೈಕಮಾಂಡ್ ದಿಢೀರ್ ಬುಲಾವ್

Public TV
1 Min Read

ಬೆಂಗಳೂರು: ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈ ಕಮಾಂಡ್ ಬುಲಾವ್ ನೀಡಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ ಬೆನ್ನಲ್ಲೇ ಹೈಕಮಾಂಡ್ ಡಿಕೆಶಿಗೆ ಬುಲಾವ್ ನೀಡಿದ್ದು ರಾಜ್ಯ ಕಾಂಗ್ರೆಸ್ಸಿನಲ್ಲಿ ಬದಲಾವಣೆಯ ಮುನ್ಸೂಚನೆ ಸಿಕ್ಕಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿರುವ ಡಿ.ಕೆ.ಶಿವಕುಮಾರ್ ಸದ್ಯಕ್ಕೆ ಆ ಸ್ಥಾನಮಾನ ಬೇಡ ಎಂದು ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದರು. ಆದರೆ ಪಟ್ಟು ಬಿಡದ ಹೈಕಮಾಂಡ್ ಡಿಕೆಶಿಗೆ ಬುಲಾವ್ ನೀಡಿದ್ದು ಡಿಕೆಶಿ ಸಂಜೆ ದೆಹಲಿಯ ವಿಮಾನ ಹತ್ತಲಿದ್ದಾರೆ.

ಪಟ್ಟಾಭಿಷೇಕಕ್ಕೆ ಡಿಕೆಶಿ ಮನವೊಲಿಕೆಗೆ ಹೈಕಮಾಂಡ್ ಮುಂದಾಗಿದ್ದು ಕೆಪಿಸಿಸಿ ಪಟ್ಟಕ್ಕೆ ಡಿಕೆಶಿ ಹೆಸರು ಬಹುತೇಕ ಅಂತಿಮ ಪಡಿಸುವ ತೀರ್ಮಾನಕ್ಕೆ ಬಂದಿದೆ. ಆದರೆ ಈ ಸಂದರ್ಭದಲ್ಲಿ ಕೆಪಿಸಿಸಿ ಪಟ್ಟಕ್ಕೇರಲು ಡಿಕೆಶಿ ಒಪ್ಪಿಕೊಳ್ಳುತ್ತಾರಾ? ಹೈ ಕಮಾಂಡ್ ಮನವೊಲಿಕೆ ಮಾಡಿ ಪಟ್ಟಾಭಿಷೇಕ ಮಾಡುತ್ತಾ ಎನ್ನುವ ಕುತೂಹಲ ಮೂಡಿದೆ. ಇದನ್ನೂ ಓದಿ: ಯಡಿಯೂರಪ್ಪರ ಛಲದ ಬಗ್ಗೆ ಡಿಕೆಶಿ ಹೇಳಿದ ಮೆಚ್ಚುಗೆಯ ಮಾತು ವೈರಲ್

ಈ ಹಿಂದೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ್ದ ಡಿಕೆಶಿ, ನಾನು ಯಾವುದೇ ಸ್ಥಾನಕ್ಕೂ ಅರ್ಜಿ ಹಾಕಿಕೊಂಡು ಓಡಾಡುವುದಿಲ್ಲ. ಸುಮ್ಮನೆ ಟಿವಿಯಲ್ಲಿ ನನ್ನ ಹೆಸರು ಹಾಕುತ್ತೀರಿ. ಹೀಗೆ ಹಾಕಿ ನನಗೆ ಯಾವ ಹುದ್ದೆಯೂ ಸಿಗದಂತೆ ಮಾಡುತ್ತೀರಿ ಎಂದು ಹೇಳಿ ನಕ್ಕಿದ್ದರು.

ಹುಬ್ಬಳ್ಳಿಯಲ್ಲಿ ಎರಡು ತಿಂಗಳ ಹಿಂದೆ ಸಿದ್ದರಾಮಯ್ಯ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾಗ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಸಿಗುತ್ತಾ ಎನ್ನುವ ಪ್ರಶ್ನೆಗೆ  ಸಿಡಿಮಿಡಿಗೊಂಡಿದ್ದರು.

ನಿಮಗ್ಯಾರು ಹೇಳಿದರು? ಊಹಾಪೋಹ ಸೃಷ್ಟಿಸಬೇಡಿ. ಅದೆಲ್ಲಾ ಹೈಕಮಾಂಡ್‍ಗೆ ಬಿಟ್ಟ ವಿಚಾರ. ಸದ್ಯಕ್ಕೆ ಅಧ್ಯಕ್ಷರ ಬದಲಾವಣೆ ವಿಚಾರ ಇಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ನೀವೇ ಎಲ್ಲಾ ಊಹಾಪೋಹಗಳನ್ನು ಸೃಷ್ಟಿ ಮಾಡುವುದು ಎಂದು ಮಾಧ್ಯಮಗಳ ವಿರುದ್ಧ ಗುಡುಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *