ಅಂಡರ್ -19 ಕ್ರಿಕೆಟ್ ವಿಶ್ವಕಪ್‍ಗೆ ರಾಯಚೂರಿನ ಹುಡುಗ ಆಯ್ಕೆ

Public TV
1 Min Read

ರಾಯಚೂರು: ಜನವರಿ 17ರಿಂದ ಫೆಬ್ರವರಿ 9ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಅಂಡರ್ 19 ಕಿರಿಯರ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಗೆ ರಾಯಚೂರಿನ ಕ್ರಿಕೆಟ್ ಆಟಗಾರ ಆಯ್ಕೆಯಾಗಿದ್ದಾರೆ.

ರಾಯಚೂರು ತಾಲೂಕಿನ ಯರಮರಸ್ ಕ್ಯಾಂಪ್‍ನ ನಿವೃತ್ತ ಕೃಷಿ ಇಲಾಖೆ ಅಧಿಕಾರಿ ಸೋಮಶೇಖರ್ ಪಾಟೀಲ್ ಹಾಗೂ ಕವಿತಾ ದಂಪತಿಗಳ ಪುತ್ರ ವಿದ್ಯಾಧರ್ ಪಾಟೀಲ್ ವಿಶ್ವಕಪ್ ಗೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

10ನೇ ವಯಸ್ಸಿನಲ್ಲಿಯೇ ರಾಯಚೂರು ಸಿಟಿ ಇಲೆವೆನ್ಸ್ ಕ್ಲಬ್ ಮೂಲಕ ಕ್ರಿಕೆಟ್ ಆರಂಭಿಸಿದ ವಿದ್ಯಾಧರ್ ಬೆಂಗಳೂರಿನ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ಇದೇ ವರ್ಷ ಜುಲೈನಲ್ಲಿ ಇಂಗ್ಲೆಂಡ್‍ನಲ್ಲಿ ನಡೆದ ಕಿರಿಯರ ತ್ರಿಕೋನ ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದರು.

ಈಗ ಬಿಸಿಸಿಐನಿಂದ ಪ್ರಕಟವಾಗಿರುವ 15 ಜನ ಆಟಗಾರರ ತಂಡದಲ್ಲಿ ವಿದ್ಯಾಧರ್ ಪಾಟೀಲ್ ಆಯ್ಕೆಯಾಗಿದ್ದು, ವಿಶ್ವಕಪ್‍ಗೆ ಕರ್ನಾಟಕದಿಂದ ಮತ್ತೊಬ್ಬ ಆಟಗಾರ ಶುಭಾಂಗ್ ಹೆಗ್ಡೆ ಸಹ ಆಯ್ಕೆಯಾಗಿದ್ದಾರೆ. ಈ ಹಿಂದೆ ರಾಯಚೂರಿನ ಯರೇಗೌಡ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದು, ಬಿಟ್ಟರೆ ವಿದ್ಯಾಧರ್ ಪಾಟೀಲ್ ವಿಶ್ವ ಕ್ರಿಕೆಟ್‍ನಲ್ಲಿ ಭಾಗವಹಿಸುತ್ತಿರುವ ಜಿಲ್ಲೆಯ ಎರಡನೇ ಕ್ರಿಕೆಟ್ ಆಟಗಾರರಾಗಿದ್ದಾರೆ.

ವಿದ್ಯಾಧರ್ ಪಾಟೀಲ್ ಅಂಡರ್ -19 ವಿಶ್ವಕಪ್‍ಗೆ ಆಯ್ಕೆಯಾಗಿರುವುದಕ್ಕೆ ಜಿಲ್ಲೆಯ ಕ್ರಿಕೆಟ್ ಅಸೋಸಿಯೇಷನ್, ಕ್ರಿಕೆಟ್ ಅಭಿಮಾನಿಗಳು ಹಾಗೂ ಇಡೀ ಜಿಲ್ಲೆಯ ಜನ ಸಂತಸ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *