ಮೈಸೂರಲ್ಲಿ ಮತಬೇಟೆಗೆ ಇಳಿದ ಶ್ರೀರಾಮುಲು- ಹುಣಸೂರಲ್ಲಿ ರೀಪಿಟ್ ಆಗ್ತಿದೆ ಬಾದಾಮಿ ಫೈಟ್

Public TV
1 Min Read

ಮೈಸೂರು: ಸಚಿವ ಶ್ರೀರಾಮುಲು ಹುಣಸೂರು ಬೈ ಎಲೆಕ್ಷನ್‍ನಲ್ಲಿ ಬಿಜೆಪಿ ಉಸ್ತುವಾರಿಯಾಗಿದ್ದಾರೆ. ಸಿದ್ದರಾಮಯ್ಯ ಅಖಾಡದಲ್ಲೇ ರಾಮುಲು ಮತಬೇಟೆಯಾಡ್ತಿದ್ದಾರೆ. ಹಾಗಾಗಿ ಮೈಸೂರಲ್ಲಿ ಬಾದಾಮಿ ಫೈಟ್ ಪಕ್ಕಾ ಆಗಿದೆ. ಬಾದಾಮಿಯಲ್ಲಿ ಚುನಾವಣೆ ಬಳಿಕ ಸಿದ್ದರಾಮಯ್ಯ ವಿರುದ್ಧ ರಾಮುಲು ಸೋಲನುಭವಿಸಿದ್ದರು. ಅಂದಿನ ಸೋಲಿನ ಸೇಡನ್ನು ತೀರಿಸಿಕೊಳ್ಳಲು ರಾಮುಲು ಈಗ ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿದ್ದಾರೆ.

ಸಚಿವ ಶ್ರೀರಾಮುಲು ಹುಣಸೂರಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಗೆಲ್ಲಿಸಲು ಹೋರಾಟಕ್ಕೆ ಇಳಿದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಪರಮ ಶಿಷ್ಯ ಎಚ್.ಪಿ. ಮಂಜುನಾಥ್ ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಈ ನಡುವೆ ಇವರಿಬ್ಬರೂ ಹುಣಸೂರನ್ನು ಬಾದಾಮಿ ಅಂದುಕೊಂಡಂತೆ ಕಾಣುತ್ತಿದೆ. ಏಕೆಂದರೆ ಬಾದಾಮಿಯಲ್ಲಿ ಸಿದ್ದರಾಮಯ್ಯ 1,696 ಮತಗಳಿಂದ ಗೆದ್ದು ನಿಟ್ಟುಸಿರು ಬಿಟ್ಟಿದ್ದರು. ರಾಮುಲುಗೆ ಆ ಸೋಲಿನ ಸಿಟ್ಟು ಕಡಿಮೆ ಆದಂತೆ ಕಾಣುತ್ತಿಲ್ಲ. ಹೀಗಾಗಿ, ಇಬ್ಬರು ಇಲ್ಲಿ ಮತ್ತೆ ತಾವೇ ಅಭ್ಯರ್ಥಿಗಳು ಎಂಬಂತೆ ಕಾದಾಟಕ್ಕೆ ಇಳಿದಿದ್ದಾರೆ.

ಹುಣಸೂರಿನಲ್ಲೇ ಬೀಡುಬಿಟ್ಟಿರುವ ರಾಮುಲು ತಮ್ಮ ಸಮುದಾಯದ ಮತಗಳ ಸೆಳೆಯುತ್ತಿದ್ದಾರೆ. ಹುಣಸೂರು ಕ್ಷೇತ್ರದಲ್ಲಿ ನಾಯಕ ಸಮುದಾಯದ ಸುಮಾರು 35 ಸಾವಿರ ಮತಗಳಿವೆ. ಈ ಮತಗಳಲ್ಲಿ ಬಹುಪಾಲು ಮತಗಳು ಬಿಜೆಪಿಗೆ ಬಂದರೆ ಅದು ಬಿಜೆಪಿ ಅಭ್ಯರ್ಥಿಗೆ ದೊಡ್ಡ ಶಕ್ತಿ. ತಮ್ಮ ಸಮುದಾಯದ ಮತಗಳ ಸೆಳೆಯುವ ಮೂಲಕ ರಾಮುಲು ತಮ್ಮ ಅಭ್ಯರ್ಥಿ ಗೆಲುವಿನ ಹಾದಿ ಹಿಡಿಯುವಂತೆ ಮಾಡಿ ತಾವು ನಾಯಕ ಸಮುದಾಯದ ದೊಡ್ಡ ನಾಯಕ ಅಂತ ಮತ್ತೆ ಸಾಬೀತು ಮಾಡಲು ಮುಂದಾಗಿದ್ದಾರೆ.

ಹೀಗಾಗಿ, ಶ್ರೀರಾಮುಲು, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿಮಗೆ ಶಕ್ತಿ ಇದ್ದರೆ ಮತ್ತೆ ಚುನಾವಣೆಗೆ ಬನ್ನಿ ಅಂತಾ ಸವಾಲ್ ಹಾಕುತ್ತಿದ್ದಾರೆ. ಒಂದರ್ಥದಲ್ಲಿ ಇವರಿಬ್ಬರು ಟೀಕೆ – ಪ್ರತಿ ಟೀಕೆ ನೋಡಿದರೆ ಜನರು ಕೂಡ ಬಾದಾಮಿ ಚುನಾವಣೆಯನ್ನು ಕಣ್ಮುಂದೆ ತಂದುಕೊಳ್ತಿದ್ದಾರೆ. ಶ್ರೀರಾಮುಲು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಬಾದಾಮಿ ಸೇಡು ತೀರಿಸಿ ಕೊಳ್ತಾರಾ? ಅಥವಾ ಸಿದ್ದರಾಮಯ್ಯ ತಮ್ಮ ಶಿಷ್ಯನನ್ನು ಗೆಲ್ಲಿಸೋ ಮೂಲಕ ಶ್ರೀರಾಮುಲುಗೆ ಮತ್ತೆ ಮುಖ ಭಂಗ ಮಾಡ್ತಾರಾ ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *