ಚಿಕ್ಕಬಳ್ಳಾಪುರ ಜೆಡಿಎಸ್ ಅಭ್ಯರ್ಥಿ, ಗೋಕಾಕ್‍ನಲ್ಲಿ ಸತೀಶ್ ಜಾರಕಿಹೊಳಿ ನಾಮಪತ್ರ ತಿರಸ್ಕೃತ

Public TV
1 Min Read

-ನಾಮಪತ್ರ ಹಿಂಪಡೆದ ಹೇಮಲತಾ ಗೋಪಾಲಯ್ಯ

ಬೆಂಗಳೂರು: ಚಿಕ್ಕಬಳ್ಲಾಪುರ ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ಮತ್ತು ಗೋಕಾಕ್‍ನಲ್ಲಿ ಸತೀಶ್ ಜಾರಕಿಹೊಳಿ ನಾಮಪತ್ರ ತಿರಸ್ಕೃತವಾಗಿದೆ.

ಡಿಸೆಂಬರ್ 5ರಂದು ನಡೆಯುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ 15 ನಾಮಪತ್ರಗಳು ಸಲ್ಲಿಕೆ ಆಗಿದ್ದವು. ಇವುಗಳಲ್ಲಿ ಬಚ್ಚೇಗೌಡರು ಸೇರಿದಂತೆ ಐವರು ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿ ರಘುನಂದನ್ ಮಾಹಿತಿ ನೀಡಿದ್ದಾರೆ. ಜೆಡಿಎಸ್ ನಿಂದ ಅಚ್ಚರಿ ಎಂಬಂತೆ ಇಬ್ಬರು ನಾಮಪತ್ರ ಸಲ್ಲಿಕೆ ಮಾಡಿದ್ದರು. ಬಚ್ಚೇಗೌಡರ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಕಣದಲ್ಲಿ ಜೆಡಿಎಸ್ ನಿಂದ ರಾಧಾಕೃಷ್ಣ ಉಳಿದುಕೊಂಡಿದ್ದಾರೆ.

ಗೋಕಾಕ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಶಾಸಕ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಿಂದ ಎರಡು ನಾಮಪತ್ರ ಸಲ್ಲಿಕೆ ಮಾಡಿದ್ದರು. ನಾಮಪತ್ರದ ಜೊತೆಗೆ ಬಿ ಫಾರಂ ಸಲ್ಲಿಸದ ಹಿನ್ನೆಲೆಯಲ್ಲಿ ತಿರಸ್ಕೃತಗೊಂಡಿದೆ. ಕಾಂಗ್ರೆಸ್‍ನಿಂದ ಲಖನ್ ಜಾರಕಿಹೊಳಿ ಗೋಕಾಕ್ ಕಣದಲ್ಲಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯರ ಪತ್ನಿ ಹೇಮಲತಾ ಪಕ್ಷೇತರರಾಗಿ ಸೋಮವಾರ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇಂದು ಹೇಮಲತಾ ಗೋಪಾಲಯ್ಯ ತಮ್ಮ ನಾಮಪತ್ರ ಹಿಂಪಡೆದುಕೊಂಡಿದ್ದಾರೆ.

ಹಿರೇಕೆರೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ಪಕ್ಷೇತರರಾಗಿ ನಾಮಿನೇಷನ್ ಮಾಡಿದ್ದರು. ಬಿ.ಸಿ.ಪಾಟೀಲ್ ಮತ್ತು ಸೃಷ್ಟಿ ಪಾಟೀಲ್ ನಾಮಪತ್ರಗಳು ಕ್ರಮಬದ್ಧವಾಗಿವೆ. ಹೀಗಾಗಿ ಸೃಷ್ಟಿ ಪಾಟೀಲ್ ತಮ್ಮ ನಾಮಪತ್ರವನ್ನು ಹಿಂಪಡೆಯುವ ಸಾಧ್ಯತೆಗಳಿವೆ.

Share This Article
Leave a Comment

Leave a Reply

Your email address will not be published. Required fields are marked *