ಎಲ್ಲರಿಗೂ SORRY – ಕುರಿಹಟ್ಟಿಯಲ್ಲಿ ಮದ್ವೆಯಾಗಿ ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ಜೋಡಿ

Public TV
3 Min Read

– ಕುರಿಹಟ್ಟಿಯಲ್ಲಿ ಮದ್ವೆಯಾಗಿದ್ದಕ್ಕೆ ಹೆಮ್ಮೆ ಇದೆ
– ಎಷ್ಟೇ ಕಷ್ಟ ಬಂದ್ರೂ ಚೆನ್ನಾಗಿ ನೋಡಿಕೊಳ್ತೇನೆ

ಚಿತ್ರದುರ್ಗ: ಕುರಿಹಟ್ಟಿಯಲ್ಲಿ ಸಿನಿಮಾ ಶೈಲಿಯಲ್ಲಿ ಪ್ರೇಮಿಗಳು ವಿವಾಹವಾಗಿರೋ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಚಿನ್ನಯ್ಯನಹಟ್ಟಿಯಲ್ಲಿ ನಡೆದಿದೆ. ಕುಟುಂಬಸ್ಥರ ವಿರೋಧದ ನಡುವೆಯೂ ಎಂಎ ಓದುತ್ತಿರುವ ಯುವತಿ ಅಮೃತಾ ಕುರಿಗಾಹಿ ಆಗಿರುವ ಅರುಣ್ ಜೊತೆ ಕುರಿಹಟ್ಟಿ ಬಳಿ ವಿವಾಹವಾಗಿದ್ದಾಳೆ. ಕುರಿಗಾಹಿ ಆದರೂ ಸರ್ಕಾರಿ ಉದ್ಯೋಗಿಗಿಂತ ಅರುಣ್ ಕಡಿಮೆ ಇಲ್ಲ ಎಂದಿದ್ದಾಳೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಮೃತಾ, ನನಗೆ ತುಂಬಾ ಖುಷಿಯಾಗಿದೆ. ಅವನು ಚೆನ್ನಾಗಿ ದುಡಿಯುತ್ತಾನೆ. ಅವನಿಗೂ ನಾನು ಮದುವೆಯಾದ ಮೇಲೆ ನನ್ನ ಹೆಂಡತಿಯನ್ನು ಹೀಗೆ ನೋಡಿಕೊಳ್ಳಬೇಕು ಎಂಬ ಆಸೆ-ಆಕಾಂಕ್ಷೆ ಇರುತ್ತದೆ. ನನಗೆ ಡಾಕ್ಟರ್, ಎಂಜಿನಿಯರ್ ಮಾಡಿದವರನ್ನು ಮದುವೆಯಾಗಬೇಕೆಂಬ ಆಸೆ ಇರಲಿಲ್ಲ. ಒಳ್ಳೆಯವರಾಗಿದ್ದರೆ ಸಾಕು ಅಂದುಕೊಂಡಿದ್ದೆ. ನಾನು ಪ್ರೀತಿ ಮಾಡಿದ್ದೆ. ಹೀಗಾಗಿ ಇವನ ಮೇಲೆ ನಂಬಿಕೆ ಇತ್ತು ಮದುವೆಯಾದೆ ಎಂದು ತಮ್ಮ ಪ್ರೀತಿಯ ಬಗ್ಗೆ ಹೇಳಿದರು.

ಅರುಣ್ ಮಾತನಾಡಿ, ನಾವಿಬ್ಬರು ಪರಸ್ಪರ ನಾಲ್ಕು ವರ್ಷದಿಂದ ಪ್ರೀತಿ ಮಾಡುತ್ತಿದ್ದೆವು. ಈಗ ನಮ್ಮ ಪ್ರೀತಿ ಫಲಿಸಿದೆ, ನಮ್ಮ ಪ್ರೀತಿಗೆ ಅವರ ಮನೆಯಿಂದ ವಿರೋಧ ಇತ್ತು. ನಮ್ಮ ಮಗಳು ಎಂಎ ಮಾಡುತ್ತಿದ್ದಾಳೆ, ನೀನು ಕುರಿ ಕಾಯುತ್ತೀಯ ಎಂದು ಹಬ್ಬಕ್ಕೆ ಕರೆದು ಹಲ್ಲೆ ಮಾಡಿದ್ದರು. ಜೊತೆಗೆ ಗಲಾಟೆ ಕೂಡ ಮಾಡಿದ್ದರು. ಇದು ನಮ್ಮ ಮನೆಯವರಿಗೂ ಗೊತ್ತಾಯಿತು. ಆಗ ನಮ್ಮ ಮನೆಯವರು ಈಗಾಗಲೇ ನಿನಗೆ ಹೊಡೆದಿದ್ದಾರೆ, ಮುಂದೆ ಮದುವೆಯಾದರೆ ಏನಾದರೂ ಮಾಡುತ್ತಾರೆ. ಅದಕ್ಕೆ ಆ ಹುಡುಗಿ ಬೇಡ ಎಂದು ವಿರೋಧ ಮಾಡಿದರು ಎಂದು ತಿಳಿಸಿದರು.

ಮತ್ತೆ ಅವರ ಮನೆಯಲ್ಲಿ ಅತ್ತೆ ಮಗನಿಗೆ ಮದುವೆ ಮಾಡಲು ಮುಂದಾಗಿದ್ದರು. ಆಗ ನನಗೆ ಫೋನ್ ಮಾಡಿ, ಈ ರೀತಿ ನನಗೆ ಬೇರೆ ಕಡೆ ಮದುವೆ ಮಾಡುವುದಕ್ಕೆ ಪ್ಲಾನ್ ಮಾಡಿದ್ದಾರೆ. ನೀನಿಲ್ಲ ಎಂದರೆ ಸತ್ತು ಹೋಗುತ್ತೇನೆ ಎಂದು ಹೇಳಿದಳು. ಮೊದಲೇ ನಾನು ಕುರಿ ಹಟ್ಟಿಯಲ್ಲಿ ಇರುತ್ತೇನೆ ಎಂದು ತಿಳಿಸಿದ್ದೆ. ನಾನು ಕೂಡ ನಮ್ಮಿಬ್ಬರನ್ನು ದೂರ ಮಾಡುತ್ತಾರೆ ಎಂದು ಮೊದಲೇ ತಾಳಿ ರೆಡಿ ಮಾಡಿಕೊಂಡಿದ್ದೆ.

ರಾತ್ರಿಯೆಲ್ಲಾ ಈಕೆಯನ್ನು ಮನೆಯಿಂದ ಹೊರಗೆ ಬಿಟ್ಟಿರಲಿಲ್ಲ. ಆದರೆ ನಮ್ಮ ಊರಿನಲ್ಲಿ ಶೌಚಾಲಯ ಇರಲಿಲ್ಲ. ಹೀಗಾಗಿ ಮುಂಜಾನೆ ಬಯಲಿಗೆ ಹೋಗುತ್ತೇನೆ ಎಂದು ಮನೆಯಿಂದ ಹೊರಗೆ ಬಂದಳು. ಆದರೆ ಈಕೆಯ ಜೊತೆ ತಮ್ಮ, ತಂಗಿ, ದೊಡಪ್ಪನ ಮಕ್ಕಳು ಎಲ್ಲರನ್ನು ಕಳುಹಿಸಿದ್ದರು. ಆದರೆ ಅಮೃತಾ ಅವರ ಕಣ್ಣು ತಪ್ಪಿಸಿ ನನ್ನ ಬಳಿ ಓಡಿ ಬಂದಳು. ನನಗೆ ಇಬ್ಬರ ಮನೆಯವರ ಸಪೋರ್ಟ್ ಕೂಡ ಇರಲಿಲ್ಲ. ಹೀಗಾಗಿ ನನಗೆ ಎಲ್ಲಿ ನಮ್ಮಿಬ್ಬರನ್ನು ದೂರ ಮಾಡುತ್ತಾರೆ ಎಂಬ ಭಯದಿಂದ ಆಕೆ ಬಂದ ತಕ್ಷಣ ತಾಳಿ ಕಟ್ಟಿದೆ. ತಾಳಿ ಕಟ್ಟಿದ ಮೇಲೂ ಅದನ್ನು ಕಿತ್ತಾಕಿ ನನಗೆ ಹೊಡೆದರು. ನಂತರ ನಮ್ಮೂರಿನ ಜನ ಬಂದು ಬಿಡಿಸಿದರು ಎಂದು ತಾಳಿ ಕಟ್ಟಿದ ಪ್ರಸಂಗವನ್ನು ಅರುಣ್ ವಿವರಿಸಿದನು.

ಕುರಿಹಟ್ಟಿಯಲ್ಲಿ ಮದುವೆಯಾಗಿರುವುದಕ್ಕೆ ತುಂಬಾ ಹೆಮ್ಮೆಯಾಗಿದೆ. ಬೇರೆಯವರು ತಂದೆ-ತಾಯಿಯಿಂದ ದೂರವಾಗಿ ಬೇರೆ ಕಡೆ ವಿವಾಹವಾಗುತ್ತಾರೆ. ಆದರೆ ನಾವು ಇಲ್ಲೇ ಮದುವೆಯಾಗಿ ಕೈ ಹಿಡಿದುಕೊಂಡು ಊರಿನೊಳಗೆ ಬಂದೆವು. ನಿಜಕ್ಕೂ ತುಂಬಾ ಖುಷಿಯಾಯಿತು. ನಮ್ಮ ಮನೆಯಲ್ಲಿ ಕಾಲೇಜಿಗೆ ಕಳುಹಿಸುತ್ತೇವೆ ಎಂದು ಸುಳ್ಳು ಹೇಳಿ ಬೇರೆ ಹುಡುಗನಿಗೆ ಮಾಡಲು ಪ್ಲಾನ್ ಮಾಡಿದ್ದರು. ಆದರೆ ಈ ವಿಚಾರ ಬೇರೆಯವರಿಂದ  ನನಗೆ ಗೊತ್ತಾಯಿತು. ಹೀಗಾಗಿ ಓಡಿ ಬಂದು ಮದುವೆಯಾದೆ ಎಂದು ಅಮೃತಾ ತಿಳಿಸಿದಳು.

ನನಗೆ ಎಷ್ಟೇ ಕಷ್ಟ ಬಂದರು ತುಂಬಾ ಚೆನ್ನಾಗಿ ನೋಡಿ ಕೊಳ್ಳುತ್ತೇನೆ. ಇಬ್ಬರು ಒಂದಾಗಿದ್ದೇವೆ. ಕೊನೆಯವರೆಗೂ ಕೂಲಿಯಾದರು ಮಾಡಿ ಚೆನ್ನಾಗಿ ನೋಡಿಕೊಳ್ಳುತ್ತೇನೆ. ನಮ್ಮಿಂದ ತುಂಬಾ ಜನರಿಗೆ ಕೋಪ ಬಂದಿದೆ. ಬೇಸರವಾಗಿದೆ, ನೋವು ಮಾಡಿದ್ದೇವೆ ಎಂದು ಇಬ್ಬರು ಎಲ್ಲರಿಗೂ ಸಾರಿ ಕೇಳಿದರು. ಬೇರೆ ಹುಡುಗರಿಗಿಂತ ಇವನೇ ಉತ್ತಮ ಎನಿಸಿತು. ತುಂಬಾ ಒಳ್ಳೆಯ ಹುಡುಗ, ಹೀಗಾಗಿ ಮದುವೆಯಾದೆ. ಡಾಕ್ಟರ್, ಎಂಜಿನಿಯರ್ ಗಿಂತ ರಿಚ್ ಆಗಿ ಬದುಕಿ ತೋರಿಸುತ್ತೇನೆ ಎಂದು ಅಮೃತಾ ನಮ್ಮ ತಂದೆ-ತಾಯಿಗೆ ಹೇಳಿದಳು.

Share This Article
Leave a Comment

Leave a Reply

Your email address will not be published. Required fields are marked *