ಹೆಚ್‌ಡಿಡಿ ದೂರಿನಿಂದಲೇ ಡಿಕೆಶಿ ಮೇಲೆ ಇಡಿ ದಾಳಿ: ಕೆ.ಎನ್ ರಾಜಣ್ಣ

Public TV
2 Min Read

ತುಮಕೂರು: ಮಾಜಿ ಪ್ರಧಾನಿ ದೇವೇಗೌಡರು ಬರೆದ ಮೂಗರ್ಜಿಯಿಂದಲೇ ಡಿಕೆ ಶಿವಕುಮಾರ್ ಮೇಲೆ ಇ.ಡಿ ದಾಳಿ ನಡೆದು ಜೈಲಿಗೆ ಹೋಗುವಂತಾಯಿತು ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮಾಜಿ ಪ್ರಧಾನಿಗಳು ಯಾವಾಗಲೂ ಮೂಗರ್ಜಿ ಗಿರಾಕಿಗಳು. ದೇವೇಗೌಡರೇ ಡಿಕೆಶಿ ವಿರುದ್ಧ ಈ ಹಿಂದೆ ಮೂಗರ್ಜಿ ಹಾಕಿರುತ್ತಾರೆ. ಅವೆಲ್ಲಾವನ್ನೂ ಕ್ರೋಢಿಕರಿಸಿ ಅವರು ದಾಳಿ ನಡೆಸಿ ಬಂಧಿಸಿದ್ದಾರೆ. ತಾನು ಮೂಗರ್ಜಿ ಹಾಕಿಲ್ಲ ಎಂದು ದೇವೇಗೌಡರು ಯಾವುದಾದರೂ ದೇವಸ್ಥಾನದಲ್ಲಿ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ದೇವೇಗೌಡರು ಮೂಗರ್ಜಿ ಹಾಕಿರುವ ಬಗ್ಗೆ ಸ್ವತಃ ಡಿಕೆಶಿಗೂ ಗೊತ್ತು ಎಂದ ರಾಜಣ್ಣ ತಮ್ಮ ಹೇಳಿಕೆಯನ್ನ ಪ್ರಮಾಣೀಕರಿಸುವ ಪ್ರಯತ್ನ ಮಾಡಿದ್ದಾರೆ. ಮೈತ್ರಿ ಸರ್ಕಾರ ರಚಿಸೋ ಮುಂಚೆ ಡಿಕೆಶಿ ವಿರುದ್ಧ ದೇವೇಗೌಡರು ಎಲ್ಲಾ ರೀತಿಯ ಕೆಲಸ ಮಾಡಿದ್ದಾರೆ. ಪ್ರಧಾನಿ ಮಂತ್ರಿ ಅಲ್ಲಾ ಇವರು ಪಂಚಾಯ್ತಿ ಮೆಂಬರ್ ಅಂತಾ ಡಿಕೆಶಿನೇ ಹೇಳಿದ್ದರು. ಮೈತ್ರಿ ಸರ್ಕಾರ ರಚನೆಯಾದಾಗಿಂದ ದೇವೇಗೌಡರ ಕುಟುಂಬ ಡಿಕೆಶಿ ಪರ ಇದ್ದಾರೆ ಅಷ್ಟೇ. ಡಿಕೆಶಿ ಮೇಲೆ ಈಗ ದೇವೇಗೌಡರ ಕುಟುಂಬ ತೋರುವ ಅನುಕಂಪ, ಎಸ್‌ಎಂ ಕೃಷ್ಣ ಅವರ ಅಳಿಯ ಕಾಫಿ ಡೇ ಸಿದ್ದಾರ್ಥ ಮೇಲೆ ಯಾಕೆ ತೋರುತಿಲ್ಲ. ಸಿದ್ಧಾರ್ಥ 40-50 ಸಾವಿರ ಜನರಿಗೆ ಉದ್ಯೋಗವಾದ್ರೂ ನೀಡಿದ್ರು. ಅಂಥವರ ಬಗ್ಗೆ ಕಾಳಜಿ ತೋರುವ ಬದಲು ತಮ್ಮ ರಾಜಕೀಯ ಲಾಭಕ್ಕಾಗಿ ಮಾತ್ರ ಡಿಕೆಶಿ ಮೇಲೆ ಅನುಕಂಪ ತೋರುತಿದ್ದಾರೆ ಎಂದು ರಾಜಣ್ಣ ದೇವೇಗೌಡರ ಕುಟುಂಬದ ವಿರುದ್ಧ ಹರಿಹಾಯ್ದರು.

ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿಗೆ ಬೆಂಬಲ ನೀಡುವ ವಿಚಾರದಲ್ಲಿ ಮಾತನಾಡಿದ ರಾಜಣ್ಣ, ಹೆಚ್ಡಿಕೆ ವಚನಭ್ರಷ್ಟರು ಅನ್ನೋದು ಹಲವು ಬಾರಿ ರುಜುವಾತಾಗಿದೆ. ಅವರು ಯಾವುದೇ ಭರವಸೆ ಕೊಟ್ಟರು ಅದು ನಂಬಿಕೆಗೆ ಅರ್ಹವಲ್ಲ ಎಂದು ಲೇವಡಿ ಮಾಡಿದ್ದಾರೆ. ಅಲ್ಲದೇ ಮಾಜಿ ಪ್ರಧಾನಿಗಳ ಕುಟುಂಬ ಅನ್ನೋ ಕಾರಣಕ್ಕೆ ಫೋನ್ ಕದ್ದಾಲಿಕೆ ತಪ್ಪುಗಳು ಮುಚ್ಚಿಹೋಗಬಹುದು. ಫೋನ್ ಕದ್ದಾಲಿಕೆ ಎಲ್ಲಾ ಸಿಎಂ ಗಳ ಕಾಲದಲ್ಲಿ ನಡೆದಿದ್ದು, ಯಾರು ಕೂಡ ಲಿಖಿತವಾಗಿ ಆದೇಶ ಮಾಡುವುದಿಲ್ಲ. ಮೌಖಿಕವಾಗಿ ಹೇಳಿರ್ತಾರೆ ಅಷ್ಟೇ. ಇವರ ತಪ್ಪಿಗೆ ಅಧಿಕಾರಿಗಳು ಬಲಿಯಾಗ್ತಾರೆ ಎಂದು ರಾಜಣ್ಣ ಪ್ರತಿಕ್ರಿಯಿಸಿದರು.

Share This Article
Leave a Comment

Leave a Reply

Your email address will not be published. Required fields are marked *