ಸಿದ್ದರಾಮಯ್ಯ ಕನ್ನಡ ಪರನಾ ಪರ್ಷಿಯನ್ ಪರನಾ ಸ್ಪಷ್ಟಪಡಿಸಲಿ: ಸಿಟಿ ರವಿ

Public TV
1 Min Read

– ರಾಜ್ಯೋತ್ಸವದೊಂದು ಕನ್ನಡ ಧ್ವಜವನ್ನು 70 ವರ್ಷದಿಂದ ಹಾರಿಸಿಲ್ಲ

ಹಾವೇರಿ: ಮಾಜಿ ಸಿಎಂ ಸಿದ್ದರಾಮಯ್ಯ ಕನ್ನಡದ ಪರವೇ ಅಥವಾ ಪರ್ಷಿಯನ್ ಭಾಷೆ ಪರವೇ ಎನ್ನುವುದನ್ನು ಸ್ಪಷ್ಟಪಡಿಸಲಿ. ಆಡಳಿತದಲ್ಲಿ ಪರ್ಷಿಯನ್ ಭಾಷೆ ಹೇರಿದ್ದ ಟಿಪ್ಪು ಸುಲ್ತಾನ್, ಅವನ ಆಡಳಿತದ ಹನ್ನೊಂದು ವರ್ಷ ಕ್ರೌರ್ಯ ಪ್ರದರ್ಶಿಸಿದ್ದಾನೆ ಎಂದು ಸಿ.ಟಿ.ರವಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾನೆ. ಅದು ಒಪ್ಪಿಕೊಳ್ಳಬೇಕು. ಪಠ್ಯದಲ್ಲಿ ಟಿಪ್ಪುವಿನ ಎರಡು ಮುಖಗಳು ಇರಬೇಕು. ನಮ್ಮ ಮೇಲೆ ದಾಳಿ ಮಾಡಿದವರನ್ನು ನಾವು ಶ್ರೇಷ್ಠ ಎಂದು ಹೇಗೆ ಹೇಳಬೇಕು ಎಂದು ಪ್ರಶ್ನಿಸಿ ಇತಿಹಾಸದ ಪರಾಮರ್ಶೆ ಆಗಲಿ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಯಡಿಯೂರಪ್ಪ ಸರ್ವಾನುಮತದಿಂದ ಸಿಎಂ ಆಗಿ ಆಯ್ಕೆಯಾದವರು. ಸಿದ್ದರಾಮಯ್ಯ ಅವರಂತೆ ಬಹುಮತದ ಆಯ್ಕೆ ಅಲ್ಲ. ಸಿದ್ದರಾಮಯ್ಯ ಆಯ್ಕೆಗೆ ಕಾಂಗ್ರೆಸ್ ಹಿರಿಯ ನಾಯಕರೇ ವಿರೋಧಿಸಿದರು. ಹೆಚ್‌ಕೆ ಪಾಟೀಲ್, ಮುನಿಯಪ್ಪ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವರು ನಾಯಕರು ವಿರೋಧಿಸಿದ್ದಾರೆ ಎಂದು ಮಾಜಿ ಸಿಎಂ ವಿರುದ್ಧ ವಾಗ್ದಾಳಿ ಮಾಡಿದರು.

ರಾಜ್ಯೋತ್ಸವದ ದಿನ ಕನ್ನಡ ಧ್ವಜವನ್ನು 70 ವರ್ಷದಿಂದ ಹಾರಿಸಿಲ್ಲ. ಇದು ಈಗೇಕೆ ವಿವಾದ ಆಗುತ್ತಿದೆ ನನಗೆ ಗೊತ್ತಿಲ್ಲ. ಆರ್‌ಸಿಇಪಿ ಒಪ್ಪಂದದಲ್ಲಿ ರೈತರ ಹಿತ ಕಾಯಲಾಗಿದೆ. ಕಾಂಗ್ರೆಸ್ ನವರು ಇದರಲ್ಲಿ ಗೊಂದಲ ಹುಟ್ಟು ಹಾಕುವ ಕೆಲಸ ಮಾಡುತ್ತಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ದೇಶದ ಹಿತಕ್ಕಾಗಿ ಕೆಲಸ ಮಾಡುತ್ತಿದೆ. ಜಾಗತೀಕರಣದ ಒಪ್ಪಂದಕ್ಕೆ ಸಹಿ ಹಾಕಿದ್ದು ಬಿಜೆಪಿಯಲ್ಲ, ಕಾಂಗ್ರೆಸ್. ದೇಶದ ಹಿತದ ಜೊತೆಗೆ ರಾಜಿ ಮಾಡಿಕೊಂಡು ರಾಜಕಾರಣ ಮಾಡೋ ಪಕ್ಷ ಬಿಜೆಪಿಯಲ್ಲ. ಇದರ ಬಗ್ಗೆ ಚಳುವಳಿ ಮಾಡಲು ಕಾಂಗ್ರೆಸ್‌ಗೆ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *