ರೆಡ್ಡಿ, ರಾಮುಲು ವಿರುದ್ಧ ಸಿಡಿದೆದ್ದ ಬಿಜೆಪಿ ಕಾರ್ಯಕರ್ತರು!

Public TV
2 Min Read

ಬಳ್ಳಾರಿ: ಗಣಿಧಣಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಆದಷ್ಟೂ ಪಕ್ಷದಿಂದ ದೂರ ಇಡಲಾಗಿದೆ. ಅಲ್ಲದೆ ಕಳೆದ ಚುನಾವಣೆಯಲ್ಲಿ ಅವರನ್ನು ಪಕ್ಷ ಪ್ರಚಾರಕ್ಕೂ ಬಳಸಿಕೊಂಡಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಬಿಜೆಪಿ ರೆಡ್ಡಿಯನ್ನು ದೂರ ಇಟ್ಟು ಒಳಗೊಳಗೆ ಅವರ ಆಪ್ತರಿಗೆ ಭರ್ಜರಿ ಗಿಫ್ಟ್ ಕೊಡುತ್ತಿರುವುದು ಜಿಲ್ಲೆಯ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.

ಹೌದು. ಜನಾರ್ದನ ರೆಡ್ಡಿಯವರು ಒಂದು ಕಾಲದಲ್ಲಿ ಬಿಜೆಪಿಯ ಪವರ್ ಫುಲ್ ಲೀಡರ್ ಆಗಿದ್ದರು. ಆದರೆ ಯಾವಾಗ ಅವರು ಜೈಲು ಪಾಲಾದ್ರೋ ಆಗಿನಿಂದ ಬಿಜೆಪಿ ಇವರಿಂದ ಅಂತರ ಕಾಯ್ದುಕೊಂಡಿದೆ. ಇದೆಲ್ಲಾ ತೋರಿಕೆಗೆ ಮಾತ್ರ ಅನಿಸುತ್ತಿದೆ. ಯಾಕಂದ್ರೆ ಪಕ್ಷಕ್ಕಾಗಿ ದುಡಿದ ನಾಯಕರು ಕಾರ್ಯಕರ್ತರನ್ನು ಕಡೆಗಣಿಸಿ ಜನಾರ್ದನ ರೆಡ್ಡಿ ಪರಮಾಪ್ತ ದಮ್ಮೂರು ಶೇಖರ್ ಅವರನ್ನು ಹುಡಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಅಲ್ಲದೆ ದಮ್ಮೂರು ಶೇಖರ್ ಮೂಲತಃ ಕಾಂಗ್ರೆಸ್ ಪಕ್ಷದವರು. ಯಾವಾಗ ರೆಡ್ಡಿ ಅಧಿಕಾರ ಮತ್ತು ದುಡ್ಡಿನಿಂದ ಬಲಿಷ್ಠರಾದ್ರೋ ಆಗ ಇವರು ರೆಡ್ಡಿ ಹಿಂಬಾಲಕಾರದರು. ಹೀಗಾಗಿಯೇ ಇವರನ್ನು ಹುಡಾ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಪಕ್ಷದ ಈ ನಡೆ ಸ್ಥಳೀಯ ಬಿಜೆಪಿ ನಾಯಕರ ಅಸಮಾಧಾಕ್ಕೆ ಕಾರಣವಾಗಿದೆ.

ಇದೇ ಕಾರಣಕ್ಕೆ ಚನ್ನ ಬಸವನಗೌಡ ಪಟೀಲ್ ಕೂಡ ಅಸಮಾಧಾನಗೊಂಡಿದ್ದು ಜಿಲ್ಲಾ ಅಧಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ರಾಜಿನಾಮೆ ಪತ್ರ ಕಳುಹಿಸಿದ್ದಾರೆ. ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ನನ್ನಿಂದ ನ್ಯಾಯ ಕೊಡಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ನಾನು ರಾಜೀನಾಮೆ ನೀಡುತ್ತೇನೆ. ಅಲ್ಲದೆ ದಮ್ಮೂರ್ ನೇಮಕದ ವೇಳೆ ಸ್ಥಳೀಯ ಬಿಜೆಪಿ ಮುಖಂಡರ ಜೊತೆಗೆ ಚರ್ಚೆ ನಡೆಸಿಲ್ಲ ಅಂತ ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರ ಜೊತೆಯಲ್ಲಿ ಮತ್ತಷ್ಟೂ ಕಾರ್ಯಕರ್ತರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇತ್ತ ಅಧ್ಯಕ್ಷ ಸ್ಥಾನಕ್ಕೆ ಏರಲು ಸಹಕರಿಸಿದ್ದಕ್ಕೆ ದಮ್ಮೂರು ಶೇಖರ್ ಅವರು ಆರೋಗ್ಯ ಸಚಿವ ಶ್ರೀರಾಮುಲುಗೆ ಅಭಿನಂದನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದು ಕೂಡ ರಾಮುಲು ಮತ್ತು ರೆಡ್ಡಿ ವಿರುದ್ಧ ಕಾರ್ಯಕರ್ತರು ಕಿಡಿ ಕಾರುವಂತೆ ಮಾಡಿದೆ.

ಒಟ್ಟಿನಲ್ಲಿ ಬಿಜೆಪಿಯಲ್ಲಿ ಆಗುತ್ತಿರುವ ಈ ಬೆಳವಣಿಗೆ ಕಂಡ್ರೆ ಸರ್ಕಾರದಲ್ಲಿ ಇನ್ನೂ ಜನಾರ್ದನ ರೆಡ್ಡಿ ಅವರ ಮಾತು ನಡೆಯುತ್ತದೆ. ಅವರನ್ನು ಬಿಜೆಪಿ ಪಕ್ಷ ದೂರ ಇಟ್ಟಿಲ್ಲ. ಬದಲಾಗಿ ಒಳಗೊಳಗೆ ಅವರ ಹಾಕಿದ ಗೆರೆಯನ್ನು ದಾಟುತ್ತಿಲ್ಲ ಎಂದು ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *