ಪ್ಲೀಸ್.. ನನ್ನ ಮದ್ವೆ ನಿಲ್ಲಿಸಿ- ಸಿಎಂ ಮನೆ ಬಾಗಿಲು ತಟ್ಟಿದ ಬಾಲಕಿ

Public TV
1 Min Read

ಜೈಪುರ: 15 ವರ್ಷದ ಬಾಲಕಿ ತನ್ನ ಮದುವೆ ನಿಲ್ಲಿಸುವಂತೆ ಸಿಎಂ ಅಶೋಕ್ ಗೆಹ್ಲೋಟ್ ಅವರ ನಿವಾಸ ಬಾಗಿಲು ತಟ್ಟಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ತಾನದ ಟೊಂಕ್ ಜಿಲ್ಲೆಯ ನಿವಾಸಿಯಾಗಿರುವ ಬಾಲಕಿ ಸೋಮವಾರ ನಡೆದ ಮುಖ್ಯಮಂತ್ರಿಗಳ ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಈ ವೇಳೆ ತನ್ನ ಮದುವೆ ನಿಲ್ಲಿಸುವಂತೆ ಸಿಎಂ ಅವರ ಎದುರು ಮನವಿ ಮಾಡಿದ್ದಾಳೆ.

ಬಾಲಕಿ ತನ್ನ ಚಿಕ್ಕಪ್ಪನೊಂದಿಗೆ ಮುಖ್ಯಮಂತ್ರಿಗಳ ನಿವಾಸದ ಬಳಿ ಆಗಮಿಸಿದ್ದು, ಈ ವೇಳೆ ತನಗೆ ಬಲವಂತದ ಮದುವೆ ಮಾಡಲು ತಂದೆ ಮುಂದಾಗಿದ್ದಾರೆ ಎಂದು ಸಿಎಂ ಅವರಿಗೆ ತಿಳಿಸಿದ್ದಾಳೆ. ಇದೇ ವೇಳೆ ನನ್ನ ತಾಯಿ ನನಗೆ ಜನ್ಮ ನೀಡಿ ಸಾವನ್ನಪ್ಪಿದ್ದಾಳೆ. ನನಗೆ ತಾಯಿ ಇಲ್ಲ. ಆದ್ದರಿಂದ ತಂದೆ ಮದುವೆ ಮಾಡಲು ಮುಂದಾಗಿದ್ದಾರೆ ಎಂದು ವಿವರಿಸಿದ್ದಾಳೆ.

ಬಾಲಕಿಯ ಮನವಿ ಕೇಳಿದ ಸಿಎಂ ಅವರು, ಆಕೆಗೆ ರಕ್ಷಣೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಈ ಕುರಿತು ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದರು. ಬಾಲಕಿ ಓದಲು ಇಷ್ಟಪಡುವವರೆಗೂ ಉಚಿತ ಶಿಕ್ಷಣ ನೀಡಲು ಶಾರದಾ ಬಾಲಿಕಾ ವಸತಿ ಶಾಲಾ ಯೋಜನೆ ಅಡಿ ಅವಕಾಶ ನೀಡಿದರು. ಬಾಲಕಿಗೆ ಧೈರ್ಯದಿಂದ ಇರುವಂತೆ ಹೇಳಿದ ಸಿಎಂ ಅವರು, ನಮ್ಮ ಸರ್ಕಾರ ನಿನ್ನ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಆತ್ಮವಿಶ್ವಾಸ ತುಂಬಿದ್ದಾರೆ.

ಬಾಲಕಿಯ ತಾಯಿ ಮೃತರಾದ ಬಳಿಕ ನನ್ನ ಸಹೋದರ (ತಂದೆ) ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳದೆ ನಿರ್ಲಕ್ಷ ವಹಿಸಿದ್ದ. ಆದರೆ ನಾನು ಆಕೆಯನ್ನು ಸಾಕಿ ಬೆಳೆಸಿದ್ದೇನೆ. ಆದರೆ ಈಗ ಆತ ಬಂದು ಮದುವೆ ಮಾಡಲು ಮುಂದಾಗಿದ್ದಾನೆ. ಬಾಲಕಿಗೆ ಮದುವೆಯಾಗಲು ಇಷ್ಟವಿಲ್ಲ. ಹೆಚ್ಚಿನ ಶಿಕ್ಷಣ ಪಡೆಯುವ ಆಸೆ ಹೊಂದಿದ್ದಾಳೆ. ಆದ್ದರಿಂದ ಸಿಎಂ ಅವರ ಸಹಾಯ ಪಡೆಯಲು ಅವರ ಬಳಿ ಆಗಮಿಸಿದ್ದಾಗಿ ಬಾಲಕಿಯ ಚಿಕ್ಕಪ್ಪ ತಿಳಿಸಿದ್ದಾರೆ.

ಇದೇ ವೇಳೆ ಸಿಎಂ ಅವರಿಗೆ ಧನ್ಯವಾದ ತಿಳಿಸಿದ ಅವರು, ನಮ್ಮ ಮನವಿಗೆ ಕೂಡಲೇ ಅವರು ಸ್ಪಂದಿಸಿದರು. ಅವರನ್ನು ಭೇಟಿ ಮಾಡಿದ್ದು ಸಂಸತ ತಂದಿದೆ. ಬಾಲಕಿಗೆ 18 ವರ್ಷ ಆದ ಬಳಿಕವೇ ಮದುವೆ ಮಾಡುತ್ತೇವೆ. ಆಕೆಗೆ ಇಂಜಿನಿಯರಿಂಗ್ ಓದುವ ಆಸೆ ಇದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *