11 ದಿನ ಗಾಳಿ ನೀರು ಇಲ್ಲದೇ ಅನುಷ್ಠಾನಕ್ಕೆ ಕುಳಿತಿದ್ದ ಸ್ವಾಮೀಜಿ ಇಂದು ಹೊರಕ್ಕೆ

Public TV
1 Min Read

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರುಗುಂಟಾ ಅಮರೇಶ್ವರ ದೇವಾಲಯದಲ್ಲಿ ಲೋಕಕಲ್ಯಾಣಕ್ಕಾಗಿ ಸ್ವಾಮೀಜಿಯೊಬ್ಬರು ಕಳೆದ 11 ದಿನಗಳಿಂದ ಗಾಳಿ, ನೀರು ಇಲ್ಲದೆ ಅನುಷ್ಠಾನಕ್ಕೆ ಕುಳಿತಿದ್ದರು. ಇಂದಿಗೆ 11 ದಿನಗಳು ಮುಗಿದಿದ್ದು, ಇಂದು ಹೊರ ಬಂದಿದ್ದಾರೆ.

ಗದಗ ಜಿಲ್ಲೆಯ ಅಂತುರು ಬಂತೂರಿನ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ 21 ದಿನಗಳ ಹಿಂದೆ ಅಮರೇಶ್ವರಕ್ಕೆ ಬಂದು ಗಡಿಗೆ ಬಾವಿ ಪ್ರದೇಶದ ಸಮಾಧಿಯೊಂದರಲ್ಲಿ ಮೌನ ಅನುಷ್ಠಾನ ನಡೆಸುತ್ತಿದ್ದರು. ಗಾಳಿ, ಬೆಳಕು ಮತ್ತು ಆಹಾರವಿಲ್ಲದೆ 11 ದಿನಗಳ ಕಾಲ ಅನುಷ್ಠಾನ ಕುಳಿತಿದ್ದರು. ಇಂದು ಸಮಾಧಿಯಿಂದ ಮೇಲೆ ಬರುವುದಾಗಿ ತಿಳಿಸಿದ್ದರಿಂದ ಸಮಾಧಿಯ ಮುಂದೆ, ಪೂಜೆ, ಯಜ್ಞ ಕಾರ್ಯಗಳು ನಡೆಸಲಾಗಿತ್ತು.

ಅಮರೇಶ್ವರ ಮಠದ ಗಜದಂಡ ಸ್ವಾಮೀಜಿ ಸ್ಥಳದಲ್ಲಿದ್ದು, ಧಾರ್ಮಿಕ ವಿಧಿ ವಿಧಾನಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅನುಷ್ಠಾನಕ್ಕೆ ಕುಳಿತ ರಾಚೋಟಿ ಶಿವಾಚಾರ್ಯ ಸ್ವಾಮೀಜಿ ಮೇಲೆ ಬರುವುದನ್ನು ಕಣ್ತುಂಬಿಕೊಳ್ಳಲು ಜನ ತಂಡೋಪತಂಡವಾಗಿ ಅಮರೇಶ್ವರಕ್ಕೆ ಆಗಮಿಸಿದ್ದರು. ದೇವಸ್ಥಾನ ಈಗ ಕುತೂಹಲದ ಕೇಂದ್ರವಾಗಿದೆ. ಅಲ್ಲದೆ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನದಲ್ಲಿ ಈ ರೀತಿಯ ತಪೋನುಷ್ಠಾನಕ್ಕೆ ಅವಕಾಶ ನೀಡಿದ್ದು ಸಹ ಚರ್ಚೆಗೆ ಕಾರಣವಾಗಿದೆ.

ಈಗ ಹೊರ ಬಂದಿರುವ ಸ್ವಾಮೀಜಿ ಮಾತನಾಡಿ, ನಾನು ಇದೇ ಮೊದಲೇನಲ್ಲ ಈ ರೀತಿ ಅನುಷ್ಠಾನಕ್ಕೆ ಕುಳಿತಿರುವುದು ಇದಕ್ಕೂ ಮುನ್ನ 6 ಬಾರಿ ಈ ರೀತಿ ಅನುಷ್ಠಾನಕ್ಕೆ ಕುಳಿತಿದ್ದೇನೆ. ಆದರೆ ನಾನು ಮಾಡಿದ ಅನುಷ್ಠಾನಗಳಲ್ಲಿ ಇದು ಅತ್ಯಂತ ಕಠಿಣವಾಗಿತ್ತು. ಇಲ್ಲಿ ಆಧಿಶೇಷನ ಅನುಗ್ರಹವಿದೆ. ಆತನ ಅನುಗ್ರಹದಿಂದಲೇ ನಾನು ಇಂದು ಅನುಷ್ಠಾನ ಮುಗಿಸಿ ಹೊರಗೆ ಬಂದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *