ಪರಮೇಶ್ವರ್ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ

Public TV
2 Min Read

– ಐಟಿ ದಾಳಿಯಲ್ಲಿ ಸಿಕ್ತು ಒಟ್ಟು 4.5 ಕೋಟಿ ರೂ. ನಗದು

ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಅವರ ನಿವಾಸದಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ.

ಪರಮೇಶ್ವರ್ ಅವರ ಬೆಂಗಳೂರಿನ ಸದಾಶಿವನಗರ ನಿವಾಸ, ಕಚೇರಿ, ಆಪ್ತರ ಮನೆ, ತುಮಕೂರು ನಗರದಲ್ಲಿ ಐಟಿ ಅಧಿಕಾರಿಗಳ ತಂಡ ಗುರುವಾರ ದಾಳಿ ಮಾಡಿತ್ತು. ಈ ಮೂಲಕ ಪರಮೇಶ್ವರ್ ಅವರಿಗೆ ಸಂಬಂಧಿಸಿದ್ದ ಒಟ್ಟು 4.5 ಕೋಟಿ ರೂ. ನಗದು ಅಧಿಕಾರಿಗಳ ಕೈಗೆ ಸಿಕ್ಕಿದೆ. ಪರಮೇಶ್ವರ್ ಅವರ ನಿವಾಸದಲ್ಲಿ ಶೋಧ ನಡೆಸಿದ 15 ಜನ ಅಧಿಕಾರಿಗಳು ಹಣ ಹಾಗೂ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಮನೆಯಿಂದ ತೆರಳಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಕಾಂಗ್ರೆಸ್ ಮುಖಂಡ ಪರಮೇಶ್ವರ್ ಅವರ ಸದಾಶಿವನಗರ ನಿವಾಸದಲ್ಲಿಯೇ 70 ಲಕ್ಷ ರೂ. ನಗದು ಪತ್ತೆಯಾಗಿದೆ. ಜೊತೆಗೆ ಆಪ್ತ, ನೆಲಮಂಗಲ ಪುರಸಭೆ ಸದಸ್ಯ ಶಿವಕುಮಾರ್ ನಿವಾಸದಲ್ಲಿ 1.8 ಕೋಟಿ ರೂ. ನಗದು ಐಟಿ ಅಧಿಕಾರಿಗಳಿ ಸಿಕ್ಕಿದೆ. ಐಟಿ ತನಿಖೆಯು ಪ್ರಾಥಮಿಕ ಹಂತದಲ್ಲಿದ್ದು, ಇನ್ನೂ ಎರಡು ದಿನ ಐಟಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ಮಾಹಿತಿ ಲಭಿಸಿದೆ.

ಮಾಜಿ ಡಿಸಿಎಂ ಪರಮೇಶ್ವರ್ ಮಾತ್ರವಲ್ಲದೆ, ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್‍ನ ಹಿರಿಯ ಮುಖಂಡ ಆರ್.ಎಲ್. ಜಾಲಪ್ಪ ಅವರಿಗೂ ಐಟಿ ಬಿಸಿ ತಟ್ಟಿದೆ. ಕೋಲಾರ ಹೊರವಲಯದ ಟಮಕ ಬಳಿ ಇರುವ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಕಚೇರಿ, ಗೆಸ್ಟ್ ಹೌಸ್ ಹಾಗೂ ದೇವರಾಜ್ ಅರಸು ವೈದ್ಯಕೀಯ ಸಂಶೋಧನಾ ಸಂಸ್ಥೆ ಮೇಲೆ ಐಟಿ ದಾಳಿ ನಡೆದಿದೆ.

ಜಾಲಪ್ಪ ಅವರ ಮಗ ರಾಜೇಂದ್ರ, ಅಳಿಯ ನಾಗರಾಜ್ ಒಡೆತನದ ಆಸ್ಪತ್ರೆ, ಶಿಕ್ಷಣ ಸಂಸ್ಥೆ ಸೇರಿದಂತೆ 16 ಕಡೆ ರೇಡ್ ಮಾಡಿದೆ. ಬೆಳಗ್ಗೆ 5 ಗಂಟೆಗೇ 10ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಾಳಿ ನಡೆಸಿ, ಪ್ರಮುಖ ಕಡತಗಳನ್ನು ಪರಿಶೀಲಿಸಿದ್ದಾರೆ. ಆದರೆ ಉಪ ಚುನಾವಣೆ ಎದುರಾಗುತ್ತಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಜಾಲಪ್ಪ ಅಳಿಯ ನಾಗರಾಜ್ ಪ್ರಬಲ ಆಕಾಂಕ್ಷಿಯಾಗಿದ್ದರು. ಈ ಐಟಿ ರೇಡ್ ಹಿಂದೆ ಅನರ್ಹ ಶಾಸಕ ಸುಧಾಕರ್ ಷಡ್ಯಂತ್ರ ಇದೆ ಅಂತ ನಾಗರಾಜ್ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *