ಡಿಕೆಶಿ, ಹೆಬ್ಬಾಳ್ಕರ್‌ಗೆ ಸಂಕಷ್ಟ ತಂದಿಡುತ್ತಾ ರಾಜಣ್ಣ ವಿಚಾರಣೆ?

Public TV
1 Min Read

ನವದೆಹಲಿ: ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪದ ಮೇಲೆ ಮಾಜಿ ಸಚಿವ ಡಿಕೆ ಶಿವಕುಮಾರ್ ಈಗಾಗಲೇ ತಿಹಾರ್ ಜೈಲು ಸೇರಿದ್ದಾರೆ. ಈ ಬೆನ್ನಲ್ಲೇ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕೂಡ ವಿಚಾರಣೆ ನಡೆಸಲಾಯಿತು. ಇದೀಗ ಕಾಂಗ್ರೆಸ್ಸಿನ ಮತ್ತೊಬ್ಬ ನಾಯಕನ ವಿಚಾರಣೆಗೆ ಇಡಿ ಅಧಿಕಾರಿಗಳು ಮುಂದಾಗಿದ್ದಾರೆ.

ದೆಹಲಿಯ ಲೋಕನಾಯಕ್ ಭವನದ ಇಡಿ ಕಚೇರಿಯಲ್ಲಿ ಮಾಜಿ ಶಾಸಕ ಕೆ.ಎಸ್ ರಾಜಣ್ಣ ಅವರನ್ನು ಇಂದು ಇಡಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಣ್ಣ ಅವರು ಈಗಾಗಲೇ ದೆಹಲಿ ತಲುಪಿದ್ದಾರೆ. ರಾಜಣ್ಣ ವಿಚಾರಣೆ ಡಿ.ಕೆ ಶಿವಕುಮಾರ್, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಂಕಷ್ಟ ತಂದಿಡುತ್ತಾ ಅನ್ನೋ ಅನುಮಾನ ಎದ್ದಿದೆ.

ಲಕ್ಷ್ಮಿ ಹೆಬ್ಬಾಳ್ಕರ್ ಆಸ್ತಿ ಏರಿಕೆ ಸಂಬಂಧ ಇಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಹೀಗಾಗಿ ಇಡಿ ಅಧಿಕಾರಿಗಳು ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಕಂಪನಿಗಳಿಗೆ ಡಿ.ಕೆ ಶಿವಕುಮಾರ್ ಬೇನಾಮಿ ಹೂಡಿಕೆ ಅನುಮಾನದ ಹಿನ್ನೆಲೆಯಲ್ಲಿ ರಾಜಣ್ಣ ವಿಚಾರಣೆ ನಡೆಸಲಿದ್ದಾರೆ.

ರಾಜಣ್ಣ ಅವರು ಅಪೆಕ್ಸ್ ಬ್ಯಾಂಕ್ ಗಳ ಅಧ್ಯಕ್ಷರಾಗಿದ್ದರು. ಹೀಗಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಹರ್ಷಾ ಶುಗರ್ಸ್ ಕಾರ್ಖಾನೆ ಪ್ರಾರಂಭಕ್ಕೆ, ಅಲ್ಲದೆ ಅಪೆಕ್ಸ್ ಬ್ಯಾಂಕ್ ಅಡಿ ಬರುವ ಕೆಲ ಬ್ಯಾಂಕುಗಳ ಮೂಲಕ 300 ಕೋಟಿ ಸಾಲ ನೀಡಿದ್ದರು. ರಾಜಣ್ಣ ಅವರು ತುಮಕೂರು ಡಿಸಿಸಿ ಬ್ಯಾಂಕ್ ಮೂಲಕ 25 ಕೋಟಿ ಸಾಲ ಪಡೆಯಲು ನೆರವು ನೀಡಿದ್ದರು.

ಒಟ್ಟಿನಲ್ಲಿ ಇದೀಗ ರಾಜಣ್ಣ ಅವರನ್ನು ಇಡಿ ಅಧಿಕಾರಿಗಳು 300 ಕೋಟಿ ಸಾಲಕ್ಕೆ ಶೂರಿಟಿ ಪಡೆದಿರುವ ಬಗ್ಗೆ ವಿಚಾರಣೆ ನಡೆಸುವ ಸಾಧ್ಯತೆ ಇದೆ. 300 ಕೋಟಿಯಲ್ಲಿ ಅರ್ಧ ಹಣ ಮಾತ್ರ ಹರ್ಷಾ ಶುಗರ್ಸ್ ಹೂಡಿಕೆ ಮಾಡಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಬಾಕಿ ಹಣದ ಬೆನ್ನು ಬಿದ್ದಿದ್ದಾರೆ. ಈವರೆಗೆ ಕಾಂಗ್ರೆಸ್ಸಿನ ಸಂಸದ ಡಿ.ಕೆ ಸುರೇಶ್, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿಚಾರಣೆ ನಡೆಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *