ತಾವೇ ನಿರ್ಮಿಸಿದ್ದ ಗಣೇಶ ಮೂರ್ತಿಯ ವಿಸರ್ಜನೆಗೆ ಹೋಗಿದ್ದ ಆರು ಮಕ್ಕಳು ನೀರುಪಾಲು

Public TV
1 Min Read

ಕೋಲಾರ: ತಾವೇ ನಿರ್ಮಿಸಿದ್ದ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡಲು ಹೋಗಿದ್ದ ಆರು ಮಕ್ಕಳು ನೀರುಪಾಲಾಗಿರುವ ಧಾರುಣ ಘಟನೆ ಜಿಲ್ಲೆಯಲ್ಲಿ ಇಂದು ನಡೆದಿದೆ.

ಕೆಜಿಎಫ್ ತಾಲೂಕಿನ ಮರದಘಟ್ಟ ಗ್ರಾಮದ ತೇಜಾ (6), ಧನುಷ್ (7), ವೈಷ್ಣವಿ (6), ರೋಹಿತ, ರಕ್ಷಿತಾ ಹಾಗೂ ವೀಣಾ ಮೃತ ದುರ್ದೈವಿಗಳು. ಇಂದು ಸಂಜೆ 4:30 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಮೊಹರಾಂ ಹಿನ್ನೆಲೆಯಲ್ಲಿ ಇಂದು ಶಾಲೆಗೆ ರಜೆ ಇದ್ದ ಕಾರಣ ಗ್ರಾಮದ ಬಳಿಯ ಗ್ರಾಮದ ಹೊರ ವಲಯದಲ್ಲಿರುವ ಮರಿಕುಂಟೆ ಕೆರೆಯಲ್ಲಿ ಈಜಲು ಹೋಗಿದ್ದರು. ಈ ವೇಳೆ ಜೇಡಿ ಮಣ್ಣಿನಿಂದ ಗಣೇಶನ ಮೂರ್ತಿಯನ್ನು ತಯಾರಿಸಿದ್ದರು. ಬಳಿಕ ತಮಗೆ ತಿಳಿದ ರೀತಿ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ ನೀರಿನಲ್ಲಿ ಬಿಡಲು ಹೋಗಿದ್ದಾಗ 6 ಮಕ್ಕಳು ನೀರುಪಾಲಾಗಿದ್ದಾರೆ.

ಮೃತ ಆರು ಮಕ್ಕಳಲ್ಲಿ ಇಬ್ಬರು ಬಾಲಕರು ಹಾಗೂ ನಾಲ್ವರು ಬಾಲಕಿಯರ ಮೃತ ದೇಹಗಳನ್ನು ಕರೆಯಿಂದ ಹೊರಗೆ ತೆಗೆಯಲಾಗಿದ್ದು, ಈಡೀ ಗ್ರಾಮದ ಜನರೇ ಘಟನೆಗೆ ಕಣ್ಣೀರು ಹಾಕುತ್ತಿದ್ದಾರೆ. ಅಂಡರ್ ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮಕ್ಕಳು ಮೃತಪಟ್ಟ ಹಿನ್ನೆಲೆಯಲ್ಲಿ ಪ್ರತಿ ಮಗುವಿಗೆ 2 ಲಕ್ಷ ರೂ. ಹಣವನ್ನು ಬಿಎಸ್ ಯಡಿಯೂರಪ್ಪನವರು ಬಿಡುಗಡೆ ಮಾಡಿದ್ದು ಕೂಡಲೇ ಹಣವನ್ನು ವಿತರಿಸುವಂತೆ ಕೋಲಾರ ಜಿಲ್ಲಾಧಿಕಾರಿಯವರಿಗೆ ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *