ಕಟೀಲ್ ಬೆಂಕಿ ಹಚ್ಚುವ ಮಾತುಗಳನ್ನಾಡ್ತಾರೆ: ದಿನೇಶ್ ಗುಂಡೂರಾವ್

Public TV
1 Min Read

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ತಿಳುವಳಿಕೆ ವಿಷಯದ ಬಗ್ಗೆ ಮಾಹಿತಿ ಇರಲ್ಲ. ಕೇವಲ ಬೆಂಕಿ ಹಚ್ಚುವ ಕೆಲಸದ ಬಗ್ಗೆ ಸುಲಭವಾಗಿ ಮಾತನಾಡುತ್ತಾರೆ. ಕಟೀಲು ಸ್ವಲ್ಪ ಅಧ್ಯಯನ ಮಾಡಿ ಮಾತಾಡಲಿ. ಹೊಸಬರು ಅರ್ಥ ಹೀನವಾಗಿ ಮಾತನಾಡೋದು ಒಳ್ಳೆಯದಲ್ಲ. ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದು, ಅರ್ಥ ಮಾಡಿಕೊಂಡು ಮಾತನಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಲಹೆ ನೀಡಿದರು.

ರಾಜ್ಯದ ನೆರೆಗೆ ಪರಿಹಾರ ಕೊಡದ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಿರ್ಧಾರ ಮಾಡಿದೆ. ಸೆಪ್ಟೆಂಬರ್ 12 ರಂದು ರಾಜ್ಯಾದ್ಯಂತ ಪ್ರತಿಭಟನೆ ನಿರ್ಧಾರ ಮಾಡಿದೆ. ಎಲ್ಲಾ ಜಿಲ್ಲಾ, ತಾಲೂಕು ಕೇಂದ್ರ ಹಾಗೂ 224 ಕ್ಷೇತ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ಕೇಂದ್ರ ಸರ್ಕಾರ ಇನ್ನು ಒಂದೂ ರೂಪಾಯಿ ಅನುದಾನ ನೀಡಿಲ್ಲ. ಮೋದಿ ಮೊನ್ನೆ ಬಂದು ಹಾಗೇ ಹೋದರು. ಹೀಗಾಗಿ ಕೇಂದ್ರದ ಧೋರಣೆ ಖಂಡಿಸಿ ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ವಿಪಕ್ಷ ನಾಯಕ, ಪಕ್ಷದ ಪದಾಧಿಕಾರಿಗಳ ನೇಮಕ ಸಂಬಂಧ ಸೆಪ್ಟೆಂಬರ್ 12 ರಂದು ಹೈಕಮಾಂಡ್ ಭೇಟಿ ಮಾಡಿ ಚರ್ಚಿಸುತ್ತೇವೆ ಸೆಪ್ಟೆಂಬರ್ 12 ರಂದು ರಾಷ್ಟ್ರೀಯ ನಾಯಕರು ಸಭೆ ಕರೆದಿದ್ದಾರೆ. ನಾನು, ಸಿದ್ದರಾಮಯ್ಯ ದೆಹಲಿಗೆ ಹೋಗುತ್ತಿದ್ದೇವೆ. ವಿಪಕ್ಷ ನಾಯಕ, ಪದಾಧಿಕಾರಿಗಳ ನೇಮಕ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ಮಾಡಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಗೋಹತ್ಯೆ ನಿಷೇಧ ಕಾಯ್ದೆ ಈಗಾಗಲೇ ನಮ್ಮಲ್ಲಿ ಇದೆ. ಗೋಹತ್ಯೆ ನಿಷೇಧ ಕಾನೂನು ತರೋದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ 40 ವರ್ಷಗಳ ಹಿಂದೆ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಸಂವಿಧಾನದಲ್ಲೂ ಗೋ ಹತ್ಯೆ ನಿಷೇಧಕ್ಕೆ ಕಾನೂನು ಇದೆ. ಈಗ ಪ್ರಹ್ಲಾದ್ ಜೋಶಿ ಯಾವ ರೀತಿ ಮಾಡ್ತಾರೋ ಗೊತ್ತಿಲ್ಲ. ರಾಷ್ಟ್ರ ವ್ಯಾಪಿ ಮಾಡ್ತಾರೋ ಗೊತ್ತಿಲ್ಲ. ಏನ್ ಮಾಡ್ತಾರೆ ನಾವು ಕಾದು ನೋಡ್ತೀವಿ ಅಂದರು.

Share This Article
Leave a Comment

Leave a Reply

Your email address will not be published. Required fields are marked *