– ಸತೀಶ್ ಜಾರಕಿಹೊಳಿರನ್ನ ಧಾರವಾಡಕ್ಕೆ ಸೇರಿಸ್ಬೇಕು
ಬೆಳಗಾವಿ: ಇಡಿ ಅಧಿಕಾರಿಗಳ ಬಂಧನದಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ನನ್ನ ಗೆಳೆಯರಾಗಿದ್ದು, ಅವರನ್ನು ನಾನು ದೆಹಲಿಯಲ್ಲಿಯೇ ಭೇಟಿ ಮಾಡುತ್ತೇನೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಉಪಚುನಾವಣೆಯ ಹಿನ್ನೆಲೆಯಲ್ಲಿ ನಾಳೆ ಗೋಕಾಕ್ ನಲ್ಲಿ ಸಂಕಲ್ಪ ಸಮಾವೇಶ ಏರ್ಪಡಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಅನರ್ಹ ಶಾಸಕ ರಮೇಶ್ ಕುಮಾರ್ ಅವರು ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ್ದರು. ಉಪಚುನಾವಣೆ ತಯಾರಿಯಲ್ಲಿರುವ ಅವರು, ನಾಳೆ ಸಮಾವೇಶ ನಡೆಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ನನ್ನ ಉತ್ತಮ ಗೆಳೆಯ. ರಾಜಕೀಯ ಹಾಗೂ ವೈಯಕ್ತಿಕ ಜೀವನ ಬೇರೆಯಾಗಿದ್ದು, ಅವನ ಕಷ್ಟ ಕಾಲದಲ್ಲಿ ನಾನು ಇರುತ್ತೇನೆ. ದೆಹಲಿಗೆ ಹೋದ ಬಳಿಕ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡುತ್ತೇನೆ. ಈ ಹಿಂದೆ ಅವರ ಭೇಟಿಗೆ ತೆರಳಿದ್ದೆ. ಆದರೆ ಭೇಟಿ ಸಾಧ್ಯವಾಗಲಿಲ್ಲ ಎಂದರು.
ಇದೇ ವೇಳೆ ಸತೀಶ್ ಜಾರಕಿಹೊಳಿ ಅವರ ಬಗ್ಗೆ ಮಾತನಾಡಿದ ಅವರು, ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ತಲೆ ಸರಿಯಲ್ಲ. ಅವರನ್ನ ಧಾರವಾಡಕ್ಕೆ ಸೇರಿಸಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ಸತೀಶ್ ಜಾರಕಿಹೊಳಿರನ್ನು ಧಾರವಾಡ ಮಾನಸಿಕ ಅಸ್ವಸ್ಥರ ಆಸ್ಪತ್ರೆಗೆ ಸೇರಿಸಬೇಕು ಎಂದರು. ಅಲ್ಲದೇ ಕೆಲವು ಮಾಧ್ಯಮದವರು ಪ್ಯಾಕೇಜ್ ತೆಗೆಕೊಂಡು ನನ್ನ ಹೆಸರು ಕೆಡಸುತ್ತಿದ್ದಾರೆ. ಇದಕ್ಕೆ ನಾನು ಉತ್ತರ ಹೇಳಲು ಗೋಕಾಕ್ಗೆ ಬಂದಿದ್ದೇನೆ. ಅದರಲ್ಲೂ ಕೆಲ ಮಾಧ್ಯಮಗಳು ವಿಶೇಷ ಪ್ಯಾಕೇಜ್ ಪಡೆದಿವೆ. ನಾನು ಚಿಕ್ಕವನಾಗಿದ್ದಾಗಿನಿಂದಲೂ ದೇವಸ್ಥಾನಕ್ಕೆ ಹೋಗುತ್ತಿದ್ದೇನೆ. ನಾನು ದೇವಸ್ಥಾನ ಹೋದರೆ ಎಂಜಾಯ್ ಮಾಡುತ್ತಿದ್ದಾರೆ ಎಂದು ವರದಿ ಮಾಡುತ್ತಾರೆ ಎಂದು ಮಾಧ್ಯಮಗಳ ವಿರುದ್ಧ ಕಿಡಿಕಾರಿದರು.
ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಉಂಟಾಗುವ ಬಗ್ಗೆ ಮಾತನಾಡಿದ ಅವರು, ಈಗಾಗಲೇ ನಾನು ಕ್ಷೇತ್ರದಲ್ಲಿ ಈ ಬಗ್ಗೆ ಮಾಡಬೇಕಾದ ಕ್ರಮಗಳನ್ನು ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲೂ ಇದು ಮುಂದುವರಿಯುತ್ತದೆ. ಕ್ಷೇತ್ರದ ಜನರ ನೆರವಿಗೆ ಬರುವ ಕಾರ್ಯ ಮಾಡುತ್ತೇನೆ. ಆದರೆ ನಾನು ಪ್ರಚಾರ ಪಡೆಯಲು ಬಯಸುವುದಿಲ್ಲ. ನನ್ನ ಬಗ್ಗೆ ಕ್ಷೇತ್ರದ ಜನರಿಗೆ ಗೊತ್ತಿದೆ ಎಂದರು.