ಮಗುವನ್ನ ಕೊಂದು ತಾಯಿ ಆತ್ಮಹತ್ಯೆ- ಮಗು, ಪತ್ನಿ ಕಂಡು ಪತಿಯೂ ನೇಣಿಗೆ ಶರಣು

Public TV
1 Min Read

ರಾಮನಗರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಒಂದೂವರೆ ವರ್ಷದ ಮಗುವಿಗೆ ನೇಣು ಬಿಗಿದು ಕೊಲೆ ಮಾಡಿ ತಾಯಿ ಆತ್ಮಹತ್ಯೆಗೆ ಶರಣಾಗಿದ್ದು, ಪತ್ನಿ, ಮಗುವಿನ ಮೃತ ದೇಹ ಕಂಡು ಪತಿ ಕೂಡ ನೇಣಿಗೆ ಶರಣಾದ ಘಟನೆ ರಾಮನಗರ ಜಿಲ್ಲೆಯ ಕನಕಪುರದಲ್ಲಿ ನಡೆದಿದೆ.

ಕನಕಪುರದ ಅಜೀಜ್ ನಗರದ ನಿವಾಸಿ ಪತಿ ಫೈರೋಜ್ (23), ಪತ್ನಿ ಹರ್ಷಬಾನು (19) ಹಾಗೂ ಒಂದೂವರೆ ವರ್ಷದ ಮಗು ಇಸ್ಮಾಯಿಲ್ ಸಾವನ್ನಪ್ಪಿದ ದುರ್ದೈವಿಗಳು. ಮೃತರ ಕುಟುಂಬದಲ್ಲಿ ಸುಮಾರು ದಿನಗಳಿಂದ ಜಗಳ ನಡೆಯುತ್ತಿತ್ತು. ಕಳೆದ ಮೂರು ದಿನಗಳಿಂದ ಜಗಳ ಅತಿರೇಕಕ್ಕೆ ಹೋಗಿದ್ದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು ಎಂದು ತಿಳಿದು ಬಂದಿದೆ.

ಫೈರೋಜ್ ಹಾಗೂ ಹರ್ಷಬಾನು ಮಧ್ಯೆ ಉಂಟಾಗಿದ್ದ ಕಲಹವನ್ನು ಸ್ಥಳೀಯ ಮುಖಂಡರು ಹಾಗೂ ಪೊಲೀಸರು ರಾಜಿ ಸಂಧಾನ ಮೂಲಕ ಬಗೆಹರಿಸಿ, ದಂಪತಿಯನ್ನು ಒಂದು ಮಾಡಿದ್ದರು. ಆದರೆ ಸೋಮವಾರ ಮಧ್ಯಾಹ್ನ ಕೂಡ ಜಗಳ ನಡೆದಿದ್ದು ಪತಿ ಮನೆಯಿಂದ ಹೊರ ಹೋದ ಬಳಿಕ ಹರ್ಷಭಾನು ತನ್ನ ಮಗು ಇಸ್ಮಾಯಿಲ್‍ಗೆ ನೇಣು ಬಿಗಿದು ಕೊಲೆ ಮಾಡಿದ್ದಾಳೆ. ಬಳಿಕ ತಾನೂ ಕೂಡ ನೇಣಿಗೆ ಶರಣಾಗಿದ್ದಾಳೆ.

ಮನೆಯಿಂದ ಹೊರಗೆ ಹೋಗಿದ್ದ ಫೈರೋಜ್ ಮರಳಿ ಮನೆಗೆ ಬಂದ ವೇಳೆ ಪತ್ನಿ ಹಾಗೂ ಮಗುವಿನ ಸಾವು ಕಂಡು ಭಯಭೀತನಾಗಿ ಆತನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಕನಕಪುರ ಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *