ಸಿದ್ದರಾಮಯ್ಯ ಮಾಜಿ ಸಿಎಂ, ಇಲ್ಲವಾದರೆ ಕೆಟ್ಟ ಭಾಷೆ ಬಳಸುತ್ತಿದ್ದೆ: ಈಶ್ವರಪ್ಪ

Public TV
1 Min Read

ಶಿವಮೊಗ್ಗ: ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಎಂದು ಸುಮ್ಮನಿದ್ದೇನೆ. ಇಲ್ಲವಾಗಿದ್ದರೆ, ಅವರ ವಿರುದ್ಧವೂ ಕೆಟ್ಟ ಭಾಷೆ ಬಳಸುತ್ತಿದ್ದೆ. ನನಗೂ ಕೆಟ್ಟ ಭಾಷೆ ಬಳಸುವುದು ಗೊತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಗುಡಿಗಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪ್ರಧಾನಮಂತ್ರಿ ಮೋದಿ ಅವರ ವಿರುದ್ಧ ಸಿದ್ಧರಾಮಯ್ಯನವರು ಬಳಸುತ್ತಿರುವ ಭಾಷೆ ಸರಿಯಿಲ್ಲ ಎಂದು ಸಿದ್ದರಾಮಯ್ಯರ ವಿರುದ್ಧ ಹರಿಹಾಯ್ದರು.

ಸಿದ್ದರಾಮಯ್ಯನವರಿಗೆ ನಾನು ವೈಯಕ್ತಿಕವಾಗಿ ಪ್ರಾರ್ಥನೆ ಮಾಡುತ್ತೆನೆ. ವಿರೋಧ ಪಕ್ಷವಾಗಿ ಬೇಕಾದಷ್ಟು ಟೀಕೆ ಮಾಡಿ ತೊಂದರೆ ಇಲ್ಲ. ಆದರೆ ನೀವು ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪನವರ ಬಗ್ಗೆ ವ್ಯಯಕ್ತಿಕ ಟೀಕೆ ಮಾಡುವುದು ಸರಿ ಇಲ್ಲ. ನರೇಂದ್ರ ಮೋದಿ ಕೋಮುವಾದಿ, ಕೊಲೆಗಡುಕ ಎನ್ನುತ್ತಾರೆ. ಸುಳ್ಳಿನ ಸರದಾರ ಎಂದು ಸಿದ್ದರಾಮಯ್ಯ ಹಗುರವಾದ ಪದ ಬಳಕೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಯಡಿಯೂರಪ್ಪ ಹಸಿರು ಶಾಲು ಹಾಕಿಕೊಳ್ಳುತ್ತಾರೆ, ನಾಚಿಕೆ ಆಗಲ್ವ ಎಂದು ಟೀಕೆ ಮಾಡುತ್ತಾರೆ. ರೈತ ನಾಯಕರಾಗಿರುವ ಯಡಿಯೂರಪ್ಪ, ರೈತರ ಪರವಾಗಿ ಹಲವಾರು ಹೋರಾಟ ಮಾಡಿದವರು. ಸಿದ್ದರಾಮಯ್ಯನವರ ಭಾಷೆ ಇದು ಸರಿಯಲ್ಲ. ಇಡೀ ಪ್ರಪಂಚ ಮೆಚ್ಚಿದ ವ್ಯಕ್ತಿ ಬಗ್ಗೆ ಹಗುರವಾದ ಮಾತುಗಳು ಸಲ್ಲದು. ಅದರಲ್ಲೂ ನೆರೆ ವಿಚಾರದಲ್ಲಿಯೂ ರಾಜಕೀಯ ಮಾಡಬೇಡಿ ಎಂದು ಈಶ್ವರಪ್ಪ ಮನವಿ ಮಾಡಿದರು.

ರಾಜ್ಯದಲ್ಲಿ ನೆರೆ ಬಂದಿದ್ದು, ಹಿಂದೆ ಯಾವುದೇ ಸರ್ಕಾರ ನೀಡದ ರೀತಿಯಲ್ಲಿ ನಮ್ಮ ಸರ್ಕಾರ ಪರಿಹಾರ ನೀಡುತ್ತಿದೆ. ನಮ್ಮ ನಿರೀಕ್ಷೆ ಮೀರಿ ಪ್ರಧಾನಿ ನರೇಂದ್ರ ಮೋದಿ ಪರಿಹಾರ ಬಿಡುಗಡೆ ಮಾಡುವ ಆಶಯ ಹೊಂದಿದ್ದೇವೆ. ನಾವು ಅತಿ ಹೆಚ್ಚು ಅನುದಾನ ತರುವ ನಿರೀಕ್ಷೆಯಲ್ಲಿದ್ದೇವೆ. ಇನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೂಜಾಡಿರುವ ವಿಚಾರ. ಅದು ಅವರ ವ್ಯಯಕ್ತಿಕ ವಿಚಾರ. ಈ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಈಶ್ವರಪ್ಪ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *