ಸತತ 5 ತಾಸು ವಿಚಾರಣೆಗೆ ಡಿಕೆಶಿ ಫುಲ್ ಟಯರ್ಡ್ -ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳೇನು?

Public TV
2 Min Read

ನವದೆಹಲಿ: ಇಡಿ ಅಧಿಕಾರಿಗಳ ಪ್ರಶ್ನೆಗೆ ಕನಕಪುರ ಬಂಡೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಕಂಗಲಾಗಿದ್ದಾರೆ. ಸತತ 5 ಗಂಟೆ ವಿಚಾರಣೆ ಬಳಿಕ ಮಾತು ಕೊಟ್ಟಂತೆ ನಡೆದುಕೊಳ್ಳುವೆ, ಇಂದು ಮತ್ತೆ ವಿಚಾರಣೆಗೆ ಹಾಜರಾಗುವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಅಧಿಕಾರಿಗಳು ಕೇಳಿದ ಪ್ರಶ್ನೆಗಳೇನು?
ಇಡಿ: ಸುನಿಲ್ ಶರ್ಮಾ ಹೇಳಿದ್ದಾರೆ. ಆ ಫ್ಲಾಟ್ ಮಾಲೀಕರು ನೀವೇ ಅಂತಾ
ಡಿಕೆ: ಅವರು ಯಾಕಂಗೆ ಹೇಳಿದ್ರು ಗೊತ್ತಿಲ್ಲ, ಆಶ್ಚರ್ಯ ತಂದಿದೆ
ಇಡಿ: ಸುನಿಲ್ ಶರ್ಮಾ ಜೊತೆ ನಿಮಗೆ ವ್ಯವಹಾರಿಕ ಸಂಬಂಧ ಇದ್ಯಾ?
ಡಿಕೆ: ಇದೆ, ನಾನು ಅವರ ಟ್ರಾವೆಲ್‍ನಲ್ಲಿ ಪಾಲುದಾರ

ಇಡಿ: ನಿಮ್ಮ ಫ್ಲ್ಯಾಟ್‍ಗಳನ್ನು ಆಂಜನೇಯಗೆ ನೋಡಿಕೊಳ್ಳೋದಕ್ಕೆ ಬಿಟ್ಟಿದ್ದೀರಾ?
ಡಿಕೆ: ಆಂಜನೇಯ ನನ್ನ ವಿಶೇಷ ಅಧಿಕಾರಿ, ನಾನಿಲ್ಲದಿದ್ದಾಗ ಅವರೇ ಪ್ಲ್ಯಾಟ್ ನೋಡ್ಕೋತಾರೆ
ಇಡಿ: ನಿಮ್ಮ ಫ್ಲ್ಯಾಟ್‍ನಲ್ಲಿ ಅವರ ಕುಟುಂಬ ವಾಸ ಇದ್ಯಾ?
ಡಿಕೆ: ಒಂದು ಪ್ಲ್ಯಾಟ್‍ನಲ್ಲಿ ಅವರ ಕುಟುಂಬ ವಾಸ ಇದೆ

ಇಡಿ: ಈ ಹಣ ನೀವು, ನಿಮ್ಮ ಸ್ನೇಹಿತರು ಅಕ್ರಮವಾಗಿ ಸಂಗ್ರಹಿಸಿದ್ದಾ?
ಡಿಕೆ: ಅಕ್ರಮವಾಗಿ ನಾನು ಏನನ್ನೂ ಸಂಪಾದಿಸಿಲ್ಲ
ಇಡಿ: ಕೆಜಿ ಅನ್ನೋ ಕೋಡ್‍ವರ್ಡ್ ಅಲ್ಲಿ ಹವಾಲಾ ಮಾಡ್ತಿದ್ದೀರಾ?
ಡಿಕೆ: ನಾನು ಯಾವತ್ತೂ ಹವಾಲಾ ಕೆಲಸವನ್ನು ಮಾಡಿಲ್ಲ

ಇಡಿ: ಡ್ರೈವರ್ ಜೊತೆ ನಿಮಗೆ ಹಣಕಾಸಿನ ಸಂಬಂಧ ಇದ್ಯಾ..?
ಡಿಕೆ: ಇಲ್ಲ, ಯಾವುದೇ ವ್ಯವಹಾರ ಇಲ್ಲ
ಇಡಿ: ಡ್ರೈವರ್ ಗೆ ನೀವು ಹಣ ಕೊಟ್ಟು ಕಳುಹಿಸುವಷ್ಟು ನಂಬಿಕಸ್ತನಾ..?
ಡಿಕೆ: ಬೇಕಾದಾಗ ಕೆಲವೊಂದು ವ್ಯವಹಾರಕ್ಕೆ ಹಣ ಕಳುಹಿಸ್ತಿದ್ದೆ

ಇಡಿ: ಹಣ ಯಾರ್ಯಾರಿಗೆ ಕೊಡ್ಬೇಕು ಅಂತ ಡ್ರೈವರ್ ನೋಡ್ಕೋತಿದ್ರಾ..?
ಡಿಕೆ: ನಾನು ಯಾರಿಗೂ ಆಸೆ, ಆಮಿಷಕ್ಕೆ ಹಣ ಕೊಟ್ಟಿಲ್ಲ

ಏನಿದು ಪ್ರಕರಣ?
2017ರ ಆಗಸ್ಟ್ 2 ರಂದು ದೆಹಲಿಯ ಡಿಕೆ ಶಿವಕುಮಾರ್ ಆಪ್ತರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ದಾಖಲೆ ಇಲ್ಲದ 8.59 ಕೋಟಿ ರೂ. ಹಣ ಪತ್ತೆಯಾಗಿತ್ತು. ವಿಚಾರಣೆ ವೇಳೆ ಡಿಕೆಶಿ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಐಟಿ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಅಪಾರ್ಟ್ ಮೆಂಟ್‍ನಲ್ಲಿ ಪತ್ತೆ ಹಣದ ಜತೆಗೆ ಹವಾಲಾ ಮೂಲಕ ಏಜೆಂಟ್‍ಗಳ ಸಹಾಯದಿಂದ ಡಿಕೆ ಶಿವಕುಮಾರ್ ಕೋಟ್ಯಂತರ ರೂ.ಗಳನ್ನು ಕಾಂಗ್ರೆಸ್ ಹೈಕಮಾಂಡ್‍ಗೆ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ನೋಟು ನಿಷೇಧಗೊಂಡ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಸಾವಿರಾರು ಕೋಟಿ ರೂ.ಗಳನ್ನು ಬದಲಾಯಿಸಿದ್ದಾರೆ. ಆಪ್ತರ ಮೂಲಕ ಕಪ್ಪುಹಣವನ್ನು ಬಿಳಿಯಾಗಿ ಪರಿವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ವಿದೇಶದಲ್ಲೂ ಡಿಕೆಶಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.

ಇಡಿ ಸಮನ್ಸ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಡಿಕೆ ಶಿವಕುಮಾರ್ ಸೇರಿದಂತೆ ಗೆಳೆಯರಾದ ಆಂಜನೇಯ, ರಾಜೇಂದ್ರ, ಹನುಮಂತಯ್ಯ ಸಲ್ಲಿಸಿದ್ದ ತಕಾರರು ಅರ್ಜಿಯನ್ನು ಹೈಕೋರ್ಟ್ ನ್ಯಾ. ಅರವಿಂದ್ ಕುಮಾರ್ ಗುರುವಾರ ವಜಾಗೊಳಿಸಿ ವಿಚಾರಣೆಗೆ ಹಾಜರಾಗಬೇಕೆಂದು ಆದೇಶಿಸಿದ್ದರು. ಅರ್ಜಿ ವಜಾಗೊಂಡ ಬೆನ್ನಲ್ಲೇ ಗುರುವಾರ ರಾತ್ರಿ ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿ ಶುಕ್ರವಾರ ಮಧ್ಯಾಹ್ನ 1 ಗಂಟೆಯ ವೇಳೆಗೆ ವಿಚಾರಣೆಗೆ ಹಾಜರಾಗಬೇಕೆಂದು ಸಮನ್ಸ್ ಜಾರಿ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *