ತುಂಗೆಯ ರಮಣೀಯ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆ

Public TV
1 Min Read

ಕೊಪ್ಪಳ: ತುಂಗಭದ್ರಾ ಜಲಾಶಯದಿಂದ 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ನದಿಗೆ ಬಿಟ್ಟಿದ್ದರಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಾದ್ಯಂತ ಹರಿದಿರುವ ತುಂಗೆಯ ರಮಣೀಯ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೇರಿಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಜನರ ಮನಸೆಳೆಯುತ್ತಿದೆ.

ಗಂಗಾವತಿ ತಾಲೂಕಿನಾದ್ಯಂತ ಹರಿದಿರುವ ತುಂಗಭದ್ರಾ ನದಿಯ ದೃಶ್ಯಗಳು ಛಾಯಾಗ್ರಾಹಕ ಚರಣ್ ಬೊಲೆಂಪಲ್ಲಿ ಅವರು ತಮ್ಮ ಡ್ರೋನ್ ಕ್ಯಾಮೆರಾದಲ್ಲಿ ಅದ್ಭುತವಾಗಿ ಸೆರೆಯಿಡಿದಿದ್ದಾರೆ. ಗಂಗಾವತಿಯ ಚಿಕ್ಕ ಜಂತಕಲ್ ಗ್ರಾಮದ ಬಳಿ ಇರುವ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಲಾದ ಸೇತುವೆಯು ನೀರಿನಲ್ಲಿ ಮುಳುಗಿರುವ ದೃಶ್ಯ ನೋಡುಗರನ್ನು ನಿಬ್ಬೆರಗಾಗುವಂತೆ ಮಾಡುತ್ತಿದೆ. ಅಷ್ಟೇ ಅಲ್ಲದೆ ಕಳೆದ ವರ್ಷವಷ್ಟೇ ಉದ್ಘಾಟನೆ ಆದ ತಾಲೂಕಿನ ಬುಕ್ಕಸಾಗರ-ಕಡೆಬಾಗಿಲು ಬಳಿ ನದಿಗೆ ಅಡ್ಡಲಾಗಿ ಕಟ್ಟಲಾದ ಸೇತುವೆಯ ದೃಶ್ಯ ನೋಡುಗರಿಗೆ ಆಶ್ಚರ್ಯವನ್ನುಂಟು ಮಾಡುತ್ತಿದೆ.

ಜಿಲ್ಲೆಯ ಜನರು ಇದು ನಮ್ಮ ಸೇತುವೆನಾ ಎಂದುಕೊಳ್ಳುವಂತೆ ಮಾಡಿದೆ. ಇನ್ನೂ ಇತ್ತೀಚೆಗಷ್ಟೆ ರಾಜ್ಯಾದ್ಯಂತ ಸುದ್ದಿ ಮಾಡಿದ ವಿರುಪಾಪುರ ಗಡ್ಡಿ ಬಳಿಯ ದೃಶ್ಯವಂತೂ ಒಂದು ಕ್ಷಣ ಮೈಮರೆಯುವಂತೆ ಮಾಡುತ್ತದೆ. ಶ್ರೀ ಕೃಷ್ಣ ದೇವರಾಯ ಕಾಲದ ಸೇತುವೆಯ ಒಳಗಿಂದ ನೀರು ಧುಮ್ಮಿಕ್ಕಿ ಹರಿಯತ್ತಿರುವ ದೃಶ್ಯವನ್ನು ಡ್ರೋನ್ ಕ್ಯಾಮೆರಾದಲ್ಲಿ ಕಂಡ ಜನರು ಛಾಯಾಗ್ರಾಹಕ ಕಾರ್ಯಕ್ಕೆ ಹೊಗುಳಿಕೆಯ ಸುರಿಮಳೆಗೈದಿದ್ದಾರೆ.

ತುಂಗಭದ್ರಾ ನದಿ ಹುಕ್ಕಿ ಹರಿಯುವ ವೇಳೆ ಡ್ರೋನ್ ಕ್ಯಾಮೆರಾದ ಮೂಲಕ ಅದ್ಭುತವಾದ ದೃಶ್ಯಗಳನ್ನು ಸೆರೆಹಿಡಿದು ಜನರಿಗೆ ಹೆಲಿಕಾಪ್ಟರ್ ಮೇಲೆ ಕುಳಿತು ನೊಡಿದಂತೆ ಮಾಡಿದ ಚರಣ್ ಬೊಲೆಂಪಲ್ಲಿ ಅವರಿಗೆ ಜನರು ಮೆಚ್ವುಗೆ ವ್ಯಕ್ತಪಡಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *