ಅಮರನಾಥ ಯಾತ್ರೆ ನಿಲ್ಲಿಸಿ, ಕಾಶ್ಮೀರ ತೊರೆಯಿರಿ – ಯಾತ್ರಿಗಳಿಗೆ ಸರ್ಕಾರ ಸೂಚನೆ

Public TV
3 Min Read

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಅಮರನಾಥ ಯಾತ್ರೆಯಲ್ಲಿ ತೊಡಗಿರುವ ಯಾತ್ರಿಗಳನ್ನೇ ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಲು ಹೊಂಚು ಹಾಕಿರುವ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

ಗುಪ್ತಚರ ಇಲಾಖೆಯಿಂದ ಖಚಿತ ಮಾಹಿತಿಯ ಸಿಕ್ಕಿದ ಹಿನ್ನೆಲೆಯಲ್ಲಿ ಪವಿತ್ರ ಅಮರನಾಥ ಯಾತ್ರೆಯನ್ನು ನಿಲ್ಲಿಸಿ ಕಾಶ್ಮೀರ ತೊರೆದು ತಮ್ಮ ಊರುಗಳಿಗೆ ಮರಳಿ ಹೋಗಿ ಎಂದು ಜಮ್ಮು ಕಾಶ್ಮೀರದ ಗೃಹ ಸಚಿವಾಲಯ ಯಾತ್ರಿಗಳಿಗೆ ಸೂಚಿಸಿದೆ.

ಯಾಕೆ ಈ ಸೂಚನೆ?
ಅಮರನಾಥ ಯಾತ್ರೆಗೆ ಸಾಗುವ ಮಾರ್ಗಗಳಲ್ಲಿ ವಿದೇಶಿ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಅಮೆರಿಕದ ಎಂ-24 ಸ್ನೈಪರ್ ರೈಫಲ್ ಅನ್ನು ಸೇನೆ ವಶಪಡಿಸಿಕೊಂಡಿದೆ. ಪತ್ತೆಯಾಗಿರುವ ಶಸ್ತ್ರಾಸ್ತ್ರಗಳ ಮೇಲೆ ಪಾಕಿಸ್ತಾನದ ಶಸ್ತ್ರಾಸ್ತ್ರ ಘಟಕದ ಚಿಹ್ನೆ ಪತ್ತೆಯಾಗಿದೆ. ಹೀಗಾಗಿ ಅಮರನಾಥ ಯಾತ್ರಿಕರು ಕೂಡಲೇ ಜಮ್ಮು ಕಾಶ್ಮೀರ ಬಿಟ್ಟು ತೆರಳುವಂತೆ ಸೂಚನೆ ರವಾನಿಸಲಾಗಿದೆ. ಈ ಮೂಲಕ ಪಾಕಿಸ್ತಾನ ಉಗ್ರರಿಗೆ ಸಹಾಯ ಮಾಡುತ್ತಿದೆ ಎನ್ನುವ ಭಾರತದ ವಾದಕ್ಕೆ ಪುಷ್ಠಿ ಸಿಕ್ಕಿದೆ.

ಈ ವಿಚಾರ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿದ ಲೆಫ್ಟಿನೆಂಟ್ ಜನರಲ್ ಸರಬ್‍ಜೀತ್ ಸಿಂಗ್ ಧಿಲ್ಲಾನ್, ಕಾಶ್ಮೀರದ ಶಾಂತಿಯನ್ನು ಕದಡಲು ನಾವು ಅವಕಾಶ ನೀಡುವುದಿಲ್ಲ. ಯಾವುದೇ ಕಾರಣಕ್ಕೂ ಉಗ್ರರು ಹಾಗೂ ಪಾಕಿಸ್ತಾನದ ಹೊಂಚು ಯಶಸ್ವಿಯಾಗಲು ಬಿಡುವುದಿಲ್ಲ. ಇದು ಕಾಶ್ಮೀರ ಜನತೆಗೆ ಹಾಗೂ ದೇಶಕ್ಕೆ ನಾವು ನೀಡುವ ವಾದ ಎಂದು ಭರವಸೆ ನೀಡಿದ್ದಾರೆ.

ಕಾಶ್ಮೀರದಲ್ಲಿ ನಮ್ಮ ಭದ್ರತಾ ಪಡೆಯು ಹೆಚ್ಚು ಜಾಗೃತೆಯಿಂದ ಕೆಲಸ ನಿರ್ವಹಿಸುತ್ತಿದೆ. ಇಲ್ಲಿ ನಡೆದ ಚುನಾವಣೆಗಳು, ಸಭೆ ಸಮಾರಂಭಗಳು ಹಾಗೂ ಈಗ ನಡೆಯುತ್ತಿರುವ ಅಮರನಾಥ ಯಾತ್ರೆಯಲ್ಲಿ ಯಾವ ಅಹಿತಕರ ಘಟನೆ ನಡೆಯದಂತೆ ಕಳೆದ 9 ತಿಂಗಳುಗಳಿಂದ ನಿಗಾವಹಿಸಿದ್ದೇವೆ. ಇದುವರೆಗೂ ಪಾಕ್ ಹಾಗೂ ಉಗ್ರರು ಗಡಿಯಲ್ಲಿ ನುಸುಳುವ ಯತ್ನ ಹಾಗೂ ಅವರ ಕುತಂತ್ರವನ್ನು ಯಶಸ್ವಿಯಾಗಲು ನಾವು ಬಿಟ್ಟಿಲ್ಲ. ನಮ್ಮ ಭದ್ರತಾ ಪಡೆ ಹೆಚ್ಚು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ನಾವು ಉಗ್ರರನ್ನು ಸದೆಬಡಿಯುತ್ತೇವೆ ಎಂದು ಧಿಲ್ಲಾನ್ ಅವರು ಹೇಳಿದ್ದಾರೆ.

ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 10 ಸಾವಿರ ಹೆಚ್ಚುವರಿ ಯೋಧರನ್ನು ನಿಯೋಜಿಸಲಾಗಿದೆ. ಉಗ್ರರ ದಾಳಿ ಬಗ್ಗೆ ಮಾಹಿತಿ ದೊರಕಿದ ಮೇಲೆ 25 ಸಾವಿರಕ್ಕೂ ಹೆಚ್ಚುವರಿ ಯೋಧರನ್ನು ನಿಯೋಜಿಸಲಾಗಿದೆ. ಕೆಲ ಆಂತರಿಕ ವಿಚಾರವಾಗಿ ಕಣಿವೆ ರಾಜ್ಯಕ್ಕೆ ಹೆಚ್ಚುವರಿ ಯೋಧರನ್ನು ಕಳುಹಿಸಲಾಗಿದೆ ಎಂದ ಧಿಲ್ಲಾನ್ ಅವರು ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್‍ಗೆ ಸೇರಿದ ಐದು ಉಗ್ರರು ಕಾಶ್ಮೀರಕ್ಕೆ ನುಸುಳಿದ್ದಾರೆ ಎಂಬ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಕಾಶ್ಮೀರದ ಕಣಿವೆ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಭಾರತಕ್ಕೆ ನುಸುಳಿರುವ ಭಯೋತ್ಪಾದಕರು ಹೆಚ್ಚು ತರಬೇತಿ ಪಡೆದವರು ಮತ್ತು ಅವರು ಭದ್ರತಾ ಪಡೆಗಳ ಮೇಲೆ ದಾಳಿ ಮಾಡಬಹುದು ಎಂದು ಮೂಲಗಳು ತಿಳಿಸಿರುವ ಕಾರಣ ಕೇಂದ್ರ ಸರ್ಕಾರ ಕಾಶ್ಮೀರ ಕಣಿವೆ ಪ್ರದೇಶಕ್ಕೆ ಹೆಚ್ಚಿನ ಸೈನಿಕರು ಮತ್ತು ವಾಯು ಪಡೆಯನ್ನು ನಿಯೋಜನೆ ಮಾಡಿ ತೀವ್ರ ಎಚ್ಚರಿಕೆ ವಹಿಸಲಾಗಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಗುರುವಾರ ಸಂಜೆಯಿಂದ ಸೂಕ್ಷ್ಮ ಪ್ರದೇಶದಲ್ಲಿ ಗಸ್ತು ತಿರುಗುತ್ತಿದೆ. ಹೆಚ್ಚಿನ ಭದ್ರತೆಗೆ ಸೇನೆಯನ್ನು ಸಿದ್ಧಗೊಳಿಸಲಾಗಿದೆ. ಕಾಶ್ಮೀರ ಕಣಿವೆಗಳಲ್ಲಿ ಭದ್ರತಾ ಪಡೆಗಳ 280 ಗುಂಪುಗಳನ್ನು ನಿಯೋಜನೆ ಮಾಡಲಾಗಿದೆ. ಕಾಶ್ಮೀರದ ನಗರ ಭಾಗದ ಕೆಲ ದುರ್ಬಲ ಸ್ಥಳಗಳಲ್ಲಿ ಸಿಆರ್‍ಪಿಎಫ್ ಸಿಬ್ಬಂದಿಯನ್ನು ನೇಮಕ ಮಾಡಿದ್ದೇವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ನಗರದ ಎಲ್ಲಾ ಪ್ರಮುಖ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಕೇಂದ್ರ ಸಶಸ್ತ್ರ ಅರೆಸೈನಿಕ ಪಡೆ (ಸಿಎಪಿಎಫ್) ಮತ್ತು ಸ್ಥಳೀಯ ಪೊಲೀಸರನ್ನು ನೇಮಿಸಲಾಗಿದೆ. ಭಯೋತ್ಪಾದಕರು ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಿದ್ದಾರೆ ಎಂಬ ಗುಪ್ತಚರ ಇಲಾಖೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪ್ರಾರ್ಥನಾ ಮಂದಿರಕ್ಕೆ ನೀಡಿದ್ದ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗಿದೆ. ರಾಜ್ಯದ ಶಾಲೆಗಳಿಗೆ 10 ದಿನಗಳವರೆಗೆ ರಜೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *