ಸಂಸತ್ತಿನಲ್ಲಿ ಸಿದ್ಧಾರ್ಥ್ ಸಾವು ಪ್ರಸ್ತಾಪ – ತನಿಖೆಗೆ ಮನೀಷ್ ತಿವಾರಿ ಆಗ್ರಹ

Public TV
1 Min Read

ನವದೆಹಲಿ: ಕರ್ನಾಟಕದ ಖ್ಯಾತ ಕೆಫೆ ಕಾಫಿ ಡೇ ಮಾಲೀಕ ವಿ.ಜಿ ಸಿದ್ಧಾರ್ಥ್ ಅವರ ಸಾವಿನ ವಿಚಾರವನ್ನು ಲೋಕಸಭೆಯಲ್ಲಿ ಇಂದು ಪ್ರಸ್ತಾಪಿಸಲಾಗಿದ್ದು, ಕಾಂಗ್ರೆಸ್ ಸದಸ್ಯ ಮನೀಷ್ ತಿವಾರಿ ಉದ್ಯಮಿಯ ಆತ್ಮಹತ್ಯೆ ಗೆ ಕಾರಣವಾದ ಸನ್ನಿವೇಶಗಳ ಕುರಿತು ಸಮಗ್ರ ತನಿಖೆಗೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಸಂಸತ್ತಿನಲ್ಲಿ ಶೂನ್ಯ ವೇಳೆ ಈ ಬಗ್ಗೆ ತಿವಾರಿ ಅವರು ಪ್ರಸ್ತಾಪಿಸಿ ಸಿದ್ಧಾರ್ಥ್ ಅವರ ಸಾವಿಗೆ ಸಂತಾಪ ಸೂಚಿಸಿದರು. ಸಿದ್ಧಾರ್ಥ್ ಅವರ ಆತ್ಮಹತ್ಯೆಗೆ ತೆರಿಗೆ ಅಧಿಕಾರಿಗಳ ಕಿರುಕುಳ ಕೂಡ ಕಾರಣವಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಗಂಭೀರ ಹಾಗೂ ಸೂಕ್ಷ್ಮ ವಿಚಾರವಾಗಿದ್ದು, ಸೂಕ್ತ ತನಿಖೆ ಆಗಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದಾಗಿ ತಿವಾರಿ ಹೇಳಿದರು.

ಆತ್ಮಹತ್ಯೆಗೂ ಎರಡು ದಿನ ಮೊದಲು ಸಿದ್ದಾರ್ಥ್ ಅವರು ಬರೆದಿಟ್ಟಿರುವ ಪತ್ರದ ವಿಷಯಗಳನ್ನು ಉಲ್ಲೇಖಿಸಲು ಸ್ಪೀಕರ್ ಓಂ ಬಿರ್ಲಾ ಅವರು ಅನುಮತಿ ನೀಡಲಿಲ್ಲ. ಹಾಗೆಯೇ ಪತ್ರದ ಸತ್ಯಾಂಶವನ್ನು ಪರಿಶೀಲಿಸುವವರೆಗೂ ಪತ್ರ ಮತ್ತು ಅದರಲ್ಲಿರುವ ವಿಷಯಗಳನ್ನು ಸಂಗ್ರಹಿಸುವುದು ಅಥವಾ ಉಲ್ಲೇಖಿಸುವುದು ಸೂಕ್ತವೇ? ಎಂದು ಪ್ರಶ್ನಿಸಿದರು.

ಆತ್ಮಹತ್ಯೆಯ ಕುರಿತು ತನಿಖೆ ನಡೆಯುವುದು ಖಚಿತ ಆದರೆ ಆದಾಯ ತೆರಿಗೆ ಇಲಾಖೆ ಮತ್ತು ಅಧಿಕಾರಿಗಳ ಕಿರುಕುಳದ ಕುರಿತು ಕೇಳಿಬರುತ್ತಿರುವುದು ಗಂಭೀರವಾದ ವಿಚಾರವಾಗಿದೆ ಎಂದು ತಿವಾರಿ ತಿಳಿಸಿದರು.

ಬಳಿಕ ಬಿಜೆಪಿ ಎಂಪಿ ನಿಶಿಕಾಂತ್ ದುಬೆ ಮಾತನಾಡಿ ದೇಶದಲ್ಲಿ ಏಕರೂಪದ ನಾಗರೀಕ ಸಂಹಿತೆ ಜಾರಿಗೆ ಬರಬೇಕು ಎಂದು ಹೇಳಿದರು. ನಂತರ ಬಿಜೆಪಿಯ ದಿಲೀಪ್ ಸೈಕಿಯಾ ಅವರು, ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಗೆ ಒತ್ತು ನೀಡಬೇಕು. ಈ ಬಗ್ಗೆ ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಸ್ತಾಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *