ಹೆಂಡ್ರು-ಮಕ್ಕಳು ನಮ್ಮ ಬಗ್ಗೆ ಏನ್ ಅಂದುಕೊಳ್ಳಲ್ಲ: ಶ್ರೀಮಂತ್ ಪಾಟೀಲ್ ಬಗ್ಗೆ ಶಿವಲಿಂಗೇಗೌಡ ವ್ಯಂಗ್ಯ

Public TV
2 Min Read

– ಬಾಂಬೆಯಲ್ಲಿ ಇಂಗ್ಲಿಷ್, ಇಲ್ಲಿ ಕನ್ನಡ
– ಎಂಟಿಬಿ ಹೆಸರು ಪ್ರಸ್ತಾಪಿಸಿ ಗುಳ್ಳೆ ನರಿ ಕಥೆ ಹೇಳಿದ ಶಾಸಕರು

ಬೆಂಗಳೂರು: ಮದ್ರಾಸ್‍ನಲ್ಲಿ ಶ್ರೀಮಂತ್ ಪಾಟೀಲ್ ಅವರ ಹಾರ್ಟು ಜುಂ ಜುಂ ಅಂತಾ? ಬಿಜೆಪಿಯವರು ಹಿಡಿದುಕೊಂಡು ಟ್ರೀಟ್ ಮೆಂಟ್ ಕೊಟ್ರಾ? ಈ ಅಜ್ಜಂಗೆ ಬಾಂಬೆನಲ್ಲಿ ಟ್ರೀಟ್ ಮೆಂಟ್ ಬೇಕಿತ್ತಾ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ವ್ಯಂಗ್ಯವಾಡಿದ್ದಾರೆ.

ವಿಶ್ವಾಸ ಮತಯಾಚನೆ ಚರ್ಚೆ ವೇಳೆ ಮಾತನಾಡಿದ ಶಾಸಕರು, ಈ ಫೋಟೋ ತೆಗೆದು ನೋಡಿ ಒಸಿ. ಇದು ಆಸ್ಪತ್ರೆ ಫೋಟೋ ಅಲ್ಲ. ಕನ್ನಡಕಾ ಬೇರೆ ಐತೆ ಎಂದು ಶ್ರೀಮಂತ್ ಪಾಟೀಲ್ ವಿರುದ್ಧ ಕಿಡಿಕಾರಿದರು.

ಚಂಬಲ್ ಕಣಿವೆ ಡಕಾಯಿತರ ಥರ ನಮ್ಮನ್ನು ನೋಡುತ್ತಾರೆ ಎಂದು ಶಾಸಕರು ಹೇಳಿದರು. ಈ ವೇಳೆ ಸ್ಪೀಕರ್ ರಮೇಶ್ ಕುಮಾರ್ ಮಧ್ಯಪ್ರವೇಶ ಮಾಡಿ, ಅವಮಾನ ಮಾಡಬೇಡಿ. ಚಂಬಲ್ ಕಣಿವೆ ಡಕಾಯಿತರೇ ಒಳ್ಳೆಯವರು, ಅವರಿಗ್ಯಾಕೆ ಅವಮಾನ ಮಾಡುತ್ತೀರಿ ಎಂದರು. ಆಗ ಶಾಸಕರು, ಹಿಂಗೆಲ್ಲ ಆದರೆ ನಮ್ಮ ಹೆಂಡರು ಮಕ್ಕಳು ಏನ್ ಅಂದುಕೊಳ್ಳಬೇಕು. ಇವನನ್ನು ಯಾವಾಗ ಹೊತ್ತುಕೊಂಡು ಹೋಗುತ್ತಾರೆ ಅಂತ ಅಂದುಕೊಳ್ಳುತ್ತಾರೆ. ಅಲ್ಲ ಪಾಪಾ ಹಿಂಗಾದರೆ ಶಾಸಕರ ಗತಿಯೇನು ಎಂದು ಹೇಳಿದರು. ಅವರ ಈ ಮಾತಿನಿಂದ ಸದನ ನಗೆಗಡಲಲ್ಲಿ ತೇಲಿತು.

ಹದಿನೈದು ಜನ ಅಲ್ಲಿ ಸಾಕಾಗಿಲ್ವಾ? ಶ್ರೀಮಂತ್ ಪಾಟೀಲ್ ಒಬ್ಬನಾದರೂ ಬಿಟ್ಟು ಹೋಗೋಕೆ ಆಗಿಲ್ವಾ. ನೀವು ಉಪಯೋಗಿಸಿದ ತಲೆಗಳೆಲ್ಲ ಮತ್ತೆ ಉಲ್ಟಾ ಹೊಡೆಯುತ್ತೆ ನಿಮಗೆ. ಸಿಎಂ ಹಾಗೂ ಆಡಳಿತ ಪಕ್ಷದ ನಾಯಕರಿಗೆ ಕೊಡಬಾರದ ನೋವು ಕೊಟ್ಟಿದ್ದಾರೆ. 2018ರ ವಿಧಾನಸಭೆ ಆಯ್ಕೆ ಮತ್ತೆ ಮರುಕಳಿಸಬಾರದು. ಇಲ್ಲಿಯವರೆಗೂ ಯಾವುದೇ ಶಾಸಕರು ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡಲು ಸಾಧ್ಯವಾಗಿಲ್ಲ ಎಂದರು.

ಚಿಕ್ಕ ತಿರುಪತಿಯಲ್ಲಿ ದೇವರಿಗೆ ಕೈಮುಗಿದು ಮೈತ್ರಿ ಸರ್ಕಾರ ಉಳಿದರೆ ಒಂದು ಕೋಟಿ ರೂ. ಅನುದಾನ ಕೊಡಿಸುತ್ತೇನೆ ಅಂತ ಹರಕೆ ಹೊತ್ತು ಬಂದೆ. ಮಾರ್ಗ ಮಧ್ಯೆ ಗುಳ್ಳೇನರಿ ಪಾಸ್ ಆಯಿತು. ಥತ್ ಅನ್ಕೊಂಡೆ. ಆಗಲೇ ಎಂಟಿಬಿ ನಾಗರಾಜ್ ಅವರು ಮುಂಬೈಗೆ ಹಾರಿದ ಸುದ್ದಿ ಬಂತು ಎಂದು ಶಿವಲಿಂಗೇಗೌಡ ಅವರು ಹೇಳುತ್ತಿದ್ದಂತೆ, ಸಿಎಂ, ಡಿಸಿಎಂ ಪರಮೇಶ್ವರ್ ಸೇರಿದಂತೆ ಎಲ್ಲ ಸದಸ್ಯರು ಬಿದ್ದು ಬಿದ್ದು ನಕ್ಕರು.

ಬಾಂಬೆಯಲ್ಲಿ ನನಗೆ ತಿಳಿದ ಇಂಗ್ಲೀಷ್‍ನಲ್ಲಿ ಮಾತನಾಡಿದ್ದೇನೆ. ಇಂಗ್ಲೀಷ್‍ನಲ್ಲಿ ನಾನೇನು ಪ್ರವೀಣನೇ? ಇಂಗ್ಲೀಷ್‍ನಲ್ಲಿ ಪ್ರವೀಣರು ನಮ್ಮ ಸ್ಪೀಕರ್ ಸೇರಿದಂತೆ ಅನೇಕರು ಇದ್ದಾರೆ ಅವರು ಮಾತನಾಡುತ್ತಾರೆ ಎಂದು ಸದನದಲ್ಲಿ ನಗೆ ಹರಿಸಿದರು.

Share This Article
Leave a Comment

Leave a Reply

Your email address will not be published. Required fields are marked *