ರಾಜ್ಯಪಾಲರ ಸೂಚನೆ ಹೊರತಾಗಿಯೂ ದೋಸ್ತಿಗಳು ಬಚಾವಾಗ್ತಾರಾ?

Public TV
1 Min Read

ಬೆಂಗಳೂರು: ಇಂದು ಮಧ್ಯಾಹ್ನ 1.30ರೊಳಗೆ ವಿಶ್ವಾಸಮತ ಯಾಚನೆ ಮಾಡಬೇಕು ಎಂದು ಸಿಎಂಗೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದೋಸ್ತಿಗಳು ಇಂದು ತಮ್ಮದೇ ತಂತ್ರಗಾರಿಕೆ ಮೂಲಕ ಬಹುಮತ ಸಾಬೀತು ತಡೀತಾರಾ, ರಾಜ್ಯಪಾಲರ ಸೂಚನೆಯನ್ನೇ ಧಿಕ್ಕರಿಸೋ ಅಸ್ತ್ರ ದೋಸ್ತಿಗಳ ಬಳಿ ಇದೆಯಾ ಅನ್ನೋ ಕತೂಹಲ ಹುಟ್ಟಿದೆ.

ಹೌದು. ಇಂದಿನ ಸದನದ ಬೆಳವಣಿಗೆಗಳು ಏನಾಗಬಹುದು ಎಂಬ ಕುತೂಹಲ ಮೂಡಿಸಿದ್ದು, ಸಾಕಷ್ಟು ರೋಚಕ ತಿರುವು ಪಡೆಯಬಹುದು. ಇಂದಿನ ಬೆಳವಣಿಗೆಯಲ್ಲಿ ಸಿಎಂ ಅವರು ರಾಜ್ಯಪಾಲರ ಸೂಚನೆಯಂತೆ ಮಧ್ಯಾಹ್ನದೊಳಗೆ ಬಹುಮತ ಸಾಬೀತು ಮಾಡ್ತಾರಾ. ಆಕಸ್ಮಾತ್ ಮಾಡದಿದ್ದರೆ ಏನಾಗುತ್ತೆ, ಮಾಡದಿರಲು ಏನೆಲ್ಲಾ ಅಂಶಗಳನ್ನ ಕಾರಣವಾಗಿಸಿಕೊಳ್ಳಬಹುದು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಮಾಸ್ಟರ್ ಪ್ಲಾನ್ ಏನು?
ರಾಜ್ಯಪಾಲರ ಸೂಚನೆಯ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಅದನ್ನ ಪ್ರಶ್ನಿಸಬಹುದು. ಬಹುಮತ ಸಾಬೀತಿಗೆ ನಾವೇ ಮುಂದಾಗಿದ್ದು ಚರ್ಚೆಗೆ ಅವಕಾಶ ಬೇಕು. ಇಂದೇ ಬಹುಮತ ಸಾಬೀತು ಮಾಡೋ ಬದಲು ಚರ್ಚೆಗೆ ಅವಕಾಶ ಕೊಡಿ ಎಂದು ಮನವಿ ಮಾಡಬಹುದು. ವಿಪ್ ಗೊಂದಲದ ಬಗ್ಗೆ ಕೂಡ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಆ ಗೊಂದಲ ಪರಿಹಾರದವರೆಗೆ ಬಹುಮತ ಸಾಬೀತಿಗೆ ತಡೆ ಕೋರಬಹುದು.

ಶಾಸಕರ ರಾಜೀನಾಮೆ ಅಂಗೀಕಾರ ಅಥವಾ ಅನರ್ಹತೆ ಪ್ರಕ್ರಿಯೆ ಮುಗಿಯುವವರೆಗೆ ಬಹುಮತ ಸಾಬೀತಿಗೆ ತಡೆಕೋರಬಹುದು. ರಾಜ್ಯಪಾಲರು ಅನಗತ್ಯ ಮಧ್ಯ ಪ್ರವೇಶ ಮಾಡಿದ್ದಾರೆ ಎಂದು ಪ್ರತಿಭಟಿಸಬಹುದು. ರಾಜ್ಯಪಾಲರ ವರ್ತನೆ ಖಂಡಿಸಿ ರಾಜಕೀಯ ಒತ್ತಡ ಹೆಚ್ಚುವಂತೆ ಮಾಡಬಹುದು.

ಇಲ್ಲಾ ನಾಳೆ ರಾಜ್ಯಪಾಲರ ಸೂಚನೆ ಮೀರಿ ವರ್ತಿಸಿದರೆ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಬಹುದು. ಸಾಂವಿಧಾನಿಕ ಬಿಕ್ಕಟ್ಟು ನಿವಾರಣೆ ಆಗಲು ರಾಜ್ಯಪಾಲರು ಸರ್ಕಾರದ ವಜಾಕ್ಕೆ ಶಿಫಾರಸ್ಸು ಮಾಡಬಹುದು. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಬಹುದು. ಹೀಗೆ ಸಾಧ್ಯ ಅಸಾಧ್ಯತೆ ಏನು ಬೇಕಾದರು ಆಗಬಹುದು.

ದೋಸ್ತಿ ಸರ್ಕಾರ ಸೇಫ್ ಆಗಲು ನಾನಾ ತಂತ್ರಗಾರಿಕೆ ಮಾಡುತ್ತಿದ್ದಾರೆ. ಇದರ ಮಧ್ಯೆ ರಾಜ್ಯಪಾಲರ ಸೂಚನೆಯ ಸಂಕಷ್ಟವು ದೋಸ್ತಿಗಳಿಗೆ ಸವಾಲಾಗಿದೆ. ಇಂದಿನ ಅಗ್ನಿ ಪರೀಕ್ಷೆಯಲ್ಲಿ ಯಾರ ಕೈ ಮೇಲಾಗಬಹುದು ಯಾರಿಗೆ ಸೋಲಾಗಬಹುದು ಎಂಬುದೆ ಸದ್ಯದ ಕುತೂಹಲವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *