ಬೆಂಗಳೂರು: ಮತ್ತೊಂದು ಕೌತುಕಕ್ಕೆ ನಭೋಮಂಡಲ ಸಾಕ್ಷಿಯಾಗಲಿದ್ದು, ಈ ವರ್ಷದ ಕೊನೆಯ ಚಂದ್ರಗ್ರಹಣ ಇಂದು ಸಂಭವಿಸಲಿದೆ. ಈ ವರ್ಷದ 2ನೇ ಚಂದ್ರಗ್ರಹಣ ಇದಾಗಿದ್ದು, ದಕ್ಷಿಣ ಏಷ್ಯಾ, ದಕ್ಷಿಣ ಅಮೆರಿಕ, ಆಫ್ರಿಕಾ, ಯೂರೋಪ್, ಆಸ್ಟ್ರೇಲಿಯಾದಲ್ಲಿ ಗೋಚರವಾಗುವುದು.
ಹೌದು. ಇಂದು ಮಧ್ಯರಾತ್ರಿ ಆಗಸದಲ್ಲಿ ಕೌತುಕವೊಂದು ನಡೆಯಲಿದೆ. ಅದುವೇ ಕೇತುಗ್ರಸ್ಥ ಚಂದ್ರಗ್ರಹಣ. ಒಟ್ಟು 2 ಗಂಟೆ 58 ನಿಮಿಷಗಳ ಕಾಲ ಸಂಭವಿಸುವ ಗ್ರಹಣದ ಸಮಯದಲ್ಲಿ ಚಂದ್ರನ ಕಾಂತಿಯಲ್ಲಿ ಶೇ.65 ವ್ಯತ್ಯಾಸ ಗೋಚರವಾಗಲಿದೆ. ಇದೇ ವರ್ಷದ ಜನವರಿ 6 ರಂದು ಸಂಪೂರ್ಣ ಚಂದ್ರಗಹಣ ಸಂಭವಿಸಿತ್ತು. ಈ ಗ್ರಹಣದಿಂದ ಯಾವುದೇ ಪ್ರಾಕೃತಿಕ ವಿಕೋಪಗಳು ಆಗುವುದಿಲ್ಲ. ಗ್ರಹಣದಿಂದ ಯಾವುದೇ ನೈಸರ್ಗಿಕ ಬದಲಾವಣೆಗಳು ಜರುಗುವುದಿಲ್ಲ. ಇದು ಆಕಾಶದಲ್ಲಿ ನಡೆಯುವ ನೈಸರ್ಗಿಕ ಕ್ರಿಯೆ ಎಂದು ಖಗೋಳಶಾಸ್ತ್ರಜ್ಞ ಸುಬ್ರಮಣ್ಯ ಹೇಳಿದ್ದಾರೆ.
ಗ್ರಹಣದ ಸಮಯ:
ಸ್ಪರ್ಶಕಾಲ : ರಾತ್ರಿ 1.30 ಕ್ಕೆ
ಮಧ್ಯಕಾಲ : ರಾತ್ರಿ 3.00 ಕ್ಕೆ
ಮೋಕ್ಷಕಾಲ : ರಾತ್ರಿ 4.30 ಕ್ಕೆ
ಈ ಚಂದ್ರಗ್ರಹಣದಿಂದ ಜನರ ಮೇಲೆ ಅನೇಕ ಪ್ರಭಾವಗಳು ಆಗುತ್ತಂತೆ. ಅದರಲ್ಲೂ ಧನಸ್ಸು ಮತ್ತು ಮಕರ ರಾಶಿಯವರಿಗೆ ದುಷ್ಪರಿಣಾಮಗಳು ಹೆಚ್ಚು. ಉಳಿದಂತೆ ಕನ್ಯಾ, ವೃಶ್ಚಿಕ ಸಿಂಹ ರಾಶಿಯವರಿಗೆ ಗ್ರಹಣದ ಎಫೆಕ್ಟ್ ಆಗಲಿದೆ. ಗ್ರಹಣದ ಸಮಯದಲ್ಲಿ ಆಹಾರ ಸೇವೆನೆ ಮಾಡಬಾರದು, 27 ನಕ್ಷತ್ರಗಳ ಹಾಗೂ 12 ರಾಶಿಯವರ ಮೇಲೆ ಗ್ರಹಣದ ಪರಿಣಾಮಗಳು ಉಂಟಾಗುತ್ತವೆ. ಚಂದ್ರಗ್ರಹಣದಿಂದ ದೇವರಗಳ ಮೇಲೆ ಯಾವುದೇ ಪರಿಣಾಮ ಬೀರಬಾರದೆಂದು ಇಂದು ಮಧ್ಯಾಹ್ನದಿಂದಲೇ ಕೆಲ ದೇವಾಲಯಗಳಿಗೆ ಬೀಗ ಹಾಕಿದ್ರೆ ಸಂಜೆ ಮೇಲೆ ಎಲ್ಲ ದೇವಾಲಯದ ಬಾಗಿಲನ್ನ ಮುಚ್ಚುತ್ತಾರೆ. ನಾಳೆ ಬೆಳಗ್ಗೆ ದೇವಾಲಯಗಳಲ್ಲಿ ಶುದ್ಧಿಕಾರ್ಯ ಮಾಡಿ ಚಂದ್ರಗ್ರಹಣ ಶಾಂತಿ ಹೋಮ, ನವಗ್ರಹ ಪೂಜೆ, ಅಭಿಷೇಕ ಹೋಮ ಹವನ ಮಾಡುವ ಮೂಲಕ ಚಂದ್ರಗ್ರಹಣದಿಂದ ಉಂಟಾಗುವ ಕೆಟ್ಟ ಪರಿಣಾಮಗಳಿಗೆ ಪರಿಹಾರ ಮಾಡಲಾಗುತ್ತದೆ.
ಒಟ್ಟಿನಲ್ಲಿ ಇಂದು ರಾತ್ರಿ ಆಗಸದಲ್ಲಿ ನಡೆಯವ ಚಂದ್ರಗ್ರಹಣವನ್ನ ಬರಿಗಣ್ಣಿನಿಂದಲೇ ನೋಡಬಹುದಾಗಿದ್ದು, ನಭೋಮಂಡಲದಲ್ಲಿ ನಡೆಯುವ ಕೌತುಕವನ್ನ ನೋಡಲು ನಾಸ್ತಿಕರು ಸಿದ್ಧರಾಗಿದ್ದರೆ, ಅಸ್ತಿಕರು ಮಾತ್ರ ಗ್ರಹಣದಿಂದಾಗುವ ಕೆಡುಕುಗಳಿಂದ ಹೇಗೆ ಪರಿಹಾರ ಪಡೆಯುವುದೆಂದು ತಲೆಕೆಡಿಸಿಕೊಂಡಿದ್ದಾರೆ.