ಸಿಎಂ ಏನು ಮಾಡಲು ಹೇಸಲ್ಲ, ನಮ್ಮ ಶಾಸಕರನ್ನು ಹಿಡಿದುಕೊಳ್ಳುತ್ತೇವೆ: ಸದಾನಂದಗೌಡ

Public TV
1 Min Read

ಬೆಂಗಳೂರು: ಇವತ್ತಿನ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳ ಕೈಯಲ್ಲಿ ಅಧಿಕಾರವಿದೆ. ಅವರು ಏನು ಮಾಡಲು ಹೇಸಲ್ಲ ಎಂದು ಕೇಂದ್ರ ಸಚಿವರ ಸದಾನಂದಗೌಡ ದೂರಿದ್ದಾರೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಕೇಂದ್ರ ಸಚಿವರು, ರಾಜ್ಯ ರಾಜಕೀಯದಲ್ಲಿ ಇಷ್ಟು ದೊಡ್ಡ ಅಲ್ಲೋಲ ಕಲ್ಲೋಲ ಉಂಟಾಗಿದೆ. ಈ ಸಮಯದಲ್ಲಿ ಸಿಎಂ ಅಧಿಕಾರದಲ್ಲಿ ಮುಂದುವರಿಯುವುದು ಸರಿಯಲ್ಲ. ಈ ಅಭಿಪ್ರಾಯ ಅವರಿಂದಲೇ ಬರಬೇಕು. ಮುಖ್ಯಮಂತ್ರಿಗಳ ಮೇಲೆ ನಂಬಿಕೆ ಇಲ್ಲ ಎನ್ನುವುದು ಇಡೀ ಜಗತ್ತಿಗೆ ಗೊತ್ತಾಗಿದೆ. ಇನ್ನು ವಿಶ್ವಾಸ ಮತಯಾಚನೆ ಮಾಡುವುದರಲ್ಲಿ ಅರ್ಥ ಏನಿದೆ? ಕಾಲ ದೂಡಲು ಸಿಎಂ ಈ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಗೊಂದಲದ ಸುಳಿಯಲ್ಲಿ ಮುಂದುವರಿಯುವುದು ಸರಿಯಲ್ಲ ಎಂದು ಅರ್ಥ ಮಾಡಿಕೊಂಡು ಸಿಎಂ ರಾಜೀನಾಮೆ ಕೊಡಬೇಕಿತ್ತು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವು ರಾಜ್ಯದ ಜನರ ನಂಬಿಕೆ ಕಳೆದುಕೊಂಡಿದೆ. ಇಂತಹ ಪರಿಸ್ಥಿತಿಯನ್ನು ರಾಜ್ಯದ ಜನತೆಗೆ ಎಷ್ಟು ದಿನ ಸಹಿಸಿಕೊಳ್ಳಬೇಕು ಎಂದು ಗುಡುಗಿದರು.

ಬಿಜೆಪಿ ಶಾಸಕರನ್ನು ರೆಸಾರ್ಟಿಗೆ ಕಳುಹಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವರು, ನಾವು ರೆಸಾರ್ಟಿಗೆ ಹೋಗಬೇಕಂತೆನಿಲ್ಲ. ಸಿಎಂ ಅಧಿಕಾರ ದುರುಪಯೋಗಪಡಿಸಿಕೊಂಡು ಏನು ಬೇಕಾದರೂ ಮಾಡುತ್ತಾರೆ. ಹೀಗಾಗಿ ನಮ್ಮ ಎಲ್ಲಾ ಶಾಸಕರನ್ನು ಒಟ್ಟಾಗಿ ಹಿಡಿದುಕೊಳ್ಳುವ ಜವಾಬ್ದಾರಿ ಹೊಂದಿದ್ದೇವೆ. ಅವರು ಆಪರೇಷನ್ ಮಾಡುತ್ತಾರೋ? ಬಿಡುತ್ತಾರೋ ಗೊತ್ತಿಲ್ಲ. ಆದರೆ ಮುಂಜಾಗ್ರತೆಯ ವಹಿಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *