ಮಳೆಗಾಲದಲ್ಲಿ ಆರಂಭವಾಯ್ತು ಅಮಾನಿಕೆರೆಯ ಹೂಳೆತ್ತುವ ಕಾಮಗಾರಿ

Public TV
1 Min Read

ತುಮಕೂರು: ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದ್ದರಂತೆ ಎನ್ನುವ ಹಾಗೆ ಮಳೆಗಾಲದಲ್ಲಿ ತುಮಕೂರು ನಗರದಲ್ಲಿರುವ ಅತೀ ದೊಡ್ಡ ಅಮಾನಿಕೆರೆಯ ಹೊಳೆತ್ತುವ ಕಾರ್ಯ ಶುರುವಾಗಿದೆ.

ಕೆರೆಗಳ ಹೂಳೆತ್ತುವ ಕೆಲಸ ಯಾರಾದರೂ ಮಳೆಗಾಲದಲ್ಲಿ ಮಾಡುತ್ತಾರಾ? ಬೇಸಿಯಲ್ಲಿ ಹೂಳೆತ್ತಿ ಮಳೆಗಾಲದಲ್ಲಿ ನೀರು ತುಂಬಿಸ್ತಾರೆ. ಆದರೆ ತುಮಕೂರು ಸ್ಮಾರ್ಟ್ ಸಿಟಿ ಅಧಿಕಾರಿಗಳು ಮಾತ್ರ ಹೇಳಿ ಕೇಳಿ ಮಳೆಗಾಲದಲ್ಲಿ ಅಮಾನಿಕೆರೆಯ ಹೂಳೆತ್ತುವ ಕೆಲಸ ಮಾಡಿಸುತ್ತಿದ್ದಾರೆ. ಮಳೆ ಬಂದು ಕೆರೆಗೆ ನೀರು ಹರಿದರೆ ಕಾಮಗಾರಿ ಪೂರ್ಣ ಮಾಡಿದ್ದೇವೆ ಎಂದು ಹಣ ಹೊಡೆಯಲು ಈ ರೀತಿ ಪ್ಲಾನ್ ಮಾಡಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ.

ತುಮಕೂರು ಅಮಾನಿಕೆರೆ ಸುಮಾರು 400 ಎಕೆರೆ ಪ್ರದೇಶದಲ್ಲಿ ಇರುವ ಅತಿದೊಡ್ಡ ಕೆರೆ. ಸ್ಮಾರ್ಟ್ ಸಿಟಿ ಕೆಲಸ ಆರಂಭವಾದ ಮೇಲೆ ಕೆರೆಯ ಅಭಿವೃದ್ಧಿಗೆ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಅದು ಎಂತಹ ಯೋಜನೆ ಅಂದರೆ ಮಳೆಗಾಲದಲ್ಲಿ ಕೆರೆಯ ಹೂಳೆತ್ತುವ ಕಾಮಗಾರಿ. ಬರೋಬ್ಬರಿ 24 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಸಹಜವಾಗಿ ಕೆರೆಯ ಹೂಳೆತ್ತುವ ಕಾಮಗಾರಿಗಳನ್ನ ಎಲ್ಲೇ ಆದರೂ ಬೇಸಿಗೆಗಾಲ ಅಥವಾ ಚಳಿಗಾಲದಲ್ಲಿ ಆರಂಭ ಮಾಡುತ್ತಾರೆ. ಆದರೆ ಇಲ್ಲಿ ಮಳೆಗಾಲದಲ್ಲಿ ಕಾಮಗಾರಿ ಆರಂಭಿಸಿರೋದು ವ್ಯಾಪಕ ಟೀಕೆಗೆ ಕಾರಣವಾಗಿದ್ದು. ಕೆರೆಯ ಅಭಿವೃದ್ಧಿ ಹೆಸರಲ್ಲಿ ಹಣ ಲೂಟಿ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸ್ಮಾರ್ಟ್ ಸಿಟಿಯ ಸದಸ್ಯರೂ ಜೊತೆಗೆ ಮಹಾನಗರ ಪಾಲಿಕೆ ಆಯುಕ್ತ ಭುಬಾಲನ್ ರವರನ್ನ ಕೇಳಿದ್ರೆ ಮುಂದಿನ ಸ್ಮಾರ್ಟ್ ಸಿಟಿ ಸಭೆಯಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *