ಕಾಂಗ್ರೆಸ್ ಬಲಪಡಿಸಲು ಅಹಿಂದ ಅಸ್ತ್ರಕ್ಕೆ ಸಿದ್ಧ – ಹೊಸ ಟೀಂ ಕಟ್ತಿದ್ದಾರೆ ಸಿದ್ದರಾಮಯ್ಯ

Public TV
1 Min Read

ಬೆಂಗಳೂರು: ಒಂದೆಡೆ ಪಾದಯಾತ್ರೆ ಮೂಲಕ ದೇವೇಗೌಡರು ಜೆಡಿಎಸ್ ಸಂಘಟನೆಗೆ ನಿರ್ಧರಿಸಿದರೆ, ಇನ್ನೊಂದೆಡೆ ಅಹಿಂದ ಸಮಾವೇಶ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‍ಗೆ ಶಕ್ತಿ ತುಂಬಲು ನಿರ್ಧರಿಸಿದ್ದಾರೆ.

ಆದರೆ ಈ ಬಾರಿ ಅಹಿಂದ ಸಮಾವೇಶಕ್ಕಾಗಿ ಟಗರು ಹೊಸ ತಂಡವನ್ನು ಕಟ್ಟುವ ಸಾಧ್ಯತೆ ಇದೆ. ಕುರುಬ ಸಮುದಾಯಕ್ಕೆ ಸೇರಿದ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಮತ್ತು ಮುಸ್ಲಿಂ ಸಮುದಾಯದ ಪ್ರಬಲ ನಾಯಕ, ಆಪ್ತ ಸಚಿವ ಜಮೀರ್ ಅಹ್ಮದ್‍ಗೆ ಸಮಾವೇಶ ಸಂಘಟನೆಯ ಹೊಣೆಗಾರಿಕೆಯನ್ನ ವಹಿಸೋ ಸಾಧ್ಯತೆ ಇದೆ.

ಸಚಿವರಾದ ಆರ್ ಬಿ ತಿಮ್ಮಾಪುರ್, ಮಾಜಿ ಸಚಿವ ಹೆಚ್ ಆಂಜನೇಯ, ಹೆಚ್ ಸಿ ಮಹದೇವಪ್ಪ, ಮಳವಳ್ಳಿ ಮಾಜಿ ಶಾಸಕ ನರೇಂದ್ರಸ್ವಾಮಿಗೆ ಜವಾಬ್ದಾರಿ ಸಿಗುವ ಸಾಧ್ಯತೆಯೂ ಇರುವುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

ದೇವೇಗೌಡರು ಹೇಳಿದ್ದೇನು?
ಶನಿವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಎಚ್‍ಡಿಡಿ, ಒಂದು ತಿಂಗಳಲ್ಲಿ ಪಕ್ಷದಲ್ಲಿರುವ ಘಟಕಗಳನ್ನು ಅಸ್ತಿತ್ವಕ್ಕೆ ತರುತ್ತೇನೆ. ಪಾದಯಾತ್ರೆಯಿಂದ ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರಕ್ಕೆ ಆಪಾಯ ಆಗಬಾರದು. ಇದನ್ನು ಗಮನದಲ್ಲಿರಿಸಿಕೊಂಡು ಕೆಲಸ ಮಾಡಬೇಕು. ಪರಸ್ಪರ ಮೈತ್ರಿ ಮಾಡಿಕೊಂಡಿದ್ದೇವೆ. ಇದಕ್ಕೆ ಯಾವುದೇ ರೀತಿಯ ಅಪಾಯ ಬರಬಾರದು. ಪ್ರಾದೇಶಿಕ ಪಕ್ಷಗಳು ಇಲ್ಲದಿದ್ದರೆ, ರಾಷ್ಟ್ರೀಯ ಪಕ್ಷಗಳು ನಮ್ಮನ್ನು ಬಹಳ ಉದಾಸೀನವಾಗಿ ಕಾಣುತ್ತಿದ್ದವು. ಹೆಚ್ಚು ತಡ ಮಾಡದೆ ಪಾದಯಾತ್ರೆಯನ್ನು ಪ್ರಾರಂಭಿಸಬೇಕು. ಈಗಲೇ ನಾನು ದೆಹಲಿಗೆ ಹೊರಡುವ ಸನ್ನಿವೇಶ ಇಲ್ಲ. ಪಕ್ಷದ ಕಚೇರಿಯಲ್ಲಿದ್ದು ಎಲ್ಲವನ್ನೂ ಗಮನಿಸುತ್ತೇನೆ ಎಂದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದರು.

Share This Article
Leave a Comment

Leave a Reply

Your email address will not be published. Required fields are marked *