ರಾಮನಗರದ ರಾಜಕಾಲುವೆಯಲ್ಲಿ ಎರಡು ಸಜೀವ ಗ್ರೆನೇಡ್ ಪತ್ತೆ

Public TV
2 Min Read

ರಾಮನಗರ: ನಿನ್ನೆ ಬಂಧಿಸಿದ ಹಬೀಬುರ್ ರೆಹಮಾನ್ ಅವರನ್ನು ವಿಚಾರಣೆ ನಡೆಸಿದ ವೇಳೆ ಆತನ ಹೇಳಿಕೆಯ ಆಧಾರದ ಮೇಲೆ ಎನ್‍ಐಎ ಎರಡು ಐಇಡಿಗಳನ್ನು ಇಂದು ವಶಪಡಿಸಿಕೊಂಡಿದೆ.

ಬಾಂಬ್ ನಿಷ್ಕ್ರೀಯ ದಳದ ಸಹಾಯದಿಂದ ರಾಮನಗರದ ಬಳಿಯ ರೇಲ್ವೆ ಹಳಿಯ ರಾಜಕಾಲುವೆಯಲ್ಲಿದ್ದ ಎರಡು ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬೆಂಗಳೂರು ಪೊಲೀಸರು ಐಇಡಿಗಳನ್ನು ಪತ್ತೆ ಹಚ್ಚಿದ್ದಾರೆ.

ಬೆಂಗಳೂರಿನಲ್ಲಿ ಹಲವು ದುಷ್ಕøತ್ಯಗಳಲ್ಲಿ ಭಾಗಿಯಗಿರುವ ಕುರಿತು ಆರೋಪಿ ಬಹಿರಂಗಪಡಿಸಿದ್ದು, ಜೆಎಂಬಿ ಕಾರ್ಯ ಚಟುವಟಿಕೆಗಳಿಗಾಗಿ ಹಣ ಸಂಗ್ರಹಿಸಲು 2018ರಲ್ಲಿ ಬೆಂಗಳೂರಿಗೆ ಆಗಮಿಸಿದ್ದಾನೆ.

ದೊಡ್ಡಬಳ್ಳಾಪುರ ಮಸೀದಿಯೊಂದರಲ್ಲಿ ತಂಗಿದ್ದ ಮೋಸ್ಟ್ ವಾಂಟೆಡ್ ಭಯೋತ್ಪಾದಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ವಿಶೇಷ ಕಾರ್ಯಾಚರಣೆ ನಡೆಸಿ ಮಂಗಳವಾರ ಬಂಧಿಸಿತ್ತು.

ಬಾಂಗ್ಲಾದೇಶದ ಜಮತ್-ಉಲ್ಲಾ-ಮುಜ್ಜಾಹೀದಿನ್ ಎಂಬ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಹಬೀಬರ್ ರೆಹಮಾನ್ ಎಂಬ ಉಗ್ರನನ್ನು ಮಂಗಳವಾರ ಮಧ್ಯಾಹ್ನ ಬೆಂಗಳೂರು ಹಾಗೂ ಕೋಲ್ಕತಾ ಎನ್‍ಐಎ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿ ಮಸೀದಿ ಬಳಿ ಬಂಧಿಸಿದ್ದರು.

ಬಂಧಿತ ಉಗ್ರ ಹಬೀಬುಲ್ಲಾ 2013ರ ಭೋದಗಯಾ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತು ಪಶ್ಚಿಮ ಬಂಗಾಳದ ಬುದ್ರ್ವಾನ್ ಸ್ಫೋಟದ ಆರೋಪಿಯಾಗಿದ್ದಾನೆ. ಈ ಪ್ರಕರಣದಲ್ಲಿ 8 ಜನ ಭಾಗಿಯಾಗಿದ್ದು, ಮೂವರ ಬಂಧನವಾಗಿತ್ತು. ಉಳಿದ 5 ಜನಕ್ಕೆ ಎನ್‍ಐಎ ಅಧಿಕಾರಿಗಳು ಶೋಧ ನಡೆಸಿದ್ದರು. ಕಳೆದ ಐದು ದಿನಗಳಿಂದ ಬೆಂಗಳೂರು ಹೊರ ವಲಯದ ದೊಡ್ಡಬಳ್ಳಾಪುರದ ಮಸೀದಿಯಲ್ಲಿ ಉಗ್ರ ತಂಗಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು ಉಗ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಬೆಂಗಳೂರಿನಲ್ಲಿ ಮಸೀದಿಯೊಂದರಲ್ಲಿ ಮೌಲ್ವಿಯಾಗಿದ್ದ ಅನ್ವರ್ ಎಂಬಾತನೊಂದಿಗೆ ಈತ ನಂಟು ಹೊಂದಿದ್ದು, ಮಸೀದಿಗೆ ಬಂದು ಹೋಗುತ್ತಿದ್ದ. ಕೆಲ ಸಮಯದ ಬಳಿಕ ಅನ್ವರ್ ದೊಡ್ಡಬಳ್ಳಾಪುರ ನಗರದ ಚಿಕ್ಕಪೇಟೆಯ ಮಸೀದಿಯಲ್ಲಿ ಮೌಲ್ವಿಯಾಗಿ ನೇಮಕಗೊಂಡಿದ್ದ. ಹೀಗಾಗಿ ಆಗಾಗ ಮೌಲ್ವಿ ಅನ್ವರ್ ಭೇಟಿ ಮಾಡಲು ದೊಡ್ಡಬಳ್ಳಾಪುರದ ಮಸೀದಿಗೆ ಬರುತ್ತಿದ್ದ. ಇದೇ ದೊಡ್ಡಬಳ್ಳಾಪುರ ನಗರದ ಇಸ್ಲಾಂಪುರದಲ್ಲಿ ಬಾಡಿಗೆ ಮನೆ ಮಾಡಲು ಉಗ್ರ ಪ್ಲಾನ್ ಮಾಡಿದ್ದನು ಮತ್ತು ಮನೆಯನ್ನು ಸಹ ನೋಡಿಕೊಂಡು ಬಂದಿದ್ದ.

ಬಂಧಿತ ಉಗ್ರ ಹಬೀಬುಲ್ಲಾ ರೆಹಮಾನ್‍ನನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ಯಲಾಗಿದೆ. ಮತ್ತೊಂದೆಡೆ ಮಸೀದಿಯ ಮೌಲ್ವಿ ಅನ್ವರ್‍ನನ್ನು ದೊಡ್ಡಬಳ್ಳಾಪುರ ಪೊಲೀಸರ ವಶಕ್ಕೆ ನೀಡಲಾಗಿದೆ. ಉಗ್ರನ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‍ಐಎ ಈ ಹಿಂದೆ ತಿಳಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *