ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಬಂದ ಕಾರಣ ತಿಳಿಸಿದ್ರು ಅಮರೇಗೌಡ ಬಯ್ಯಾಪೂರ್

Public TV
1 Min Read

ಕೊಪ್ಪಳ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ಬಿಟ್ಟು ಬಂದಿರುವ ಕಾರಣವನ್ನು ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪೂರ್ ಬಿಚ್ಚಿಟ್ಟಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಜೆಡಿಎಸ್ ಬಿಡಲು ಅಹಿಂದ ಕಾರಣವಾಗಿದೆ. ಜೆಡಿಎಸ್‍ನಲ್ಲಿ ಸಿದ್ದರಾಮಯ್ಯ ಪಕ್ಷಾತೀತವಾಗಿ ಅಹಿಂದ ಕಟ್ಟಲು ಮುಂದಾಗಿದ್ದರು. ಆ ಸಮಯದಲ್ಲಿ ದೇವೆಗೌಡರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಬಂದಿದ್ದರು ಎಂದು ಬಯ್ಯಾಪೂರ್ ತಿಳಿಸಿದ್ದಾರೆ.

ನಾನು ಸಿದ್ದರಾಮಯ್ಯನವರ ಸನಿಹ ಇರೋ ವ್ಯಕ್ತಿ, ಅವರ ಗರಡಿಯಲ್ಲಿಯೇ ಪಳಗಿದ್ದೇನೆ. ಜೆಡಿಎಸ್ ಹಾಗೂ ಕಾಂಗ್ರೆಸ್ ತತ್ವ ಸಿದ್ಧಾಂತ ಇರುವ ಪಕ್ಷವಾಗಿದೆ. ಜೆಡಿಎಸ್ ನಲ್ಲಿ ಸಿದ್ದರಾಮಯ್ಯನವರಿಗೆ ಸಮಸ್ಯೆಗಳು ಉಂಟಾಗಿದ್ದವು. ಅಹಿಂದ ಸಮಾಜಕ್ಕೆ ನ್ಯಾಯ ಕೊಡಲು ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಬಂದಿದ್ದರು. ಸಿದ್ದರಾಮಯ್ಯ ಈ ಮಟ್ಟಕ್ಕೆ ಬೆಳೆಯಲು ಜೆಡಿಎಸ್ ಕಾರಣವಾಗಿದೆ ಎಂದರು.

ಜೆಡಿಎಸ್ ಬಿಟ್ಟು ಬಂದ ಮೇಲೆ ಸಿದ್ದರಾಮಯ್ಯ ಕಾಂಗ್ರೆಸ್‍ಗೆ ಹೆಚ್ಚಿನ ಗೌರವ ಸಿಕ್ಕಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಅಲ್ಲ ರಾಷ್ಟ್ರಪತಿ ಸ್ಥಾನ ಕೊಡ್ತೀನಿ ಅಂದರೂ ಅವರು ಬಿಜೆಪಿಗೆ ಹೋಗಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ಬಿಡೋದು ಒಂದೇ, ರಾತ್ರಿ 12 ಗಂಟೆಗೆ ಸೂರ್ಯ ಉದಯಿಸೋದು ಒಂದೇ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರು ಬಿಜೆಪಿ ಸೇರಲ್ಲ. ಒಂದು ವೇಳೆ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರೆ ನಾನು ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *